ಮಂಗಳೂರು ವಿಮಾನ ನಿಲ್ದಾಣ: ಶೀಘ್ರ ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆ

Featured, ರಾಜ್ಯ ನ್ಯೂಸ್

ಮಹಾನಗರ: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಇನ್ನು ಮುಂದೆ ಆ್ಯಪ್‌ ಆಧಾರಿತ ಕ್ಯಾಬ್‌ ಸೇವಾ ಸೌಲಭ್ಯ ದೊರೆಯಲಿದೆ.

ಚೆನ್ನೈ ಮತ್ತು ಗೋವಾ ಸಹಿತ ದೇಶದ ಐದು ವಿಮಾನ ನಿಲ್ದಾಣಗಳಲ್ಲಿ ಪ್ರಥಮ ಹಂತದಲ್ಲಿ ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಅದು ಯಶಸ್ವಿಯಾದ ಹಿನ್ನೆಲೆಯಲ್ಲಿ ಈಗ 2ನೇ ಹಂತದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಹಿತ ಇನ್ನೂ ಕೆಲವೆಡೆ ಈ ಸೇವೆಯನ್ನು ವಿಸ್ತರಿಸಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ. ರಾವ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆ ಆರಂಭಿಸುವ ಬಗ್ಗೆ ಟೆಂಡರ್‌ ಪ್ರಕ್ರಿಯೆ ಆರಂಭಗೊಂಡಿದೆ. ಈ ಸಂಬಂಧ ಒಂದು ವಾರದೊಳಗೆ ಕನ್ಸೆಲ್ಟೆನ್ಸಿಯನ್ನು ನೇಮಕ ಮಾಡಲಾಗುವುದು. ಕನ್ಸೆಲ್ಟೆನ್ಸಿಯು ಈಗಾಗಲೇ ಇರುವ ಟ್ಯಾಕ್ಸಿ ಸೇವೆಯ ಲೋಪ ದೋಷಗಳನ್ನು ಪರಿಶೀಲಿಸಿ ವರದಿ ನೀಡಲಿದೆ. ಈ ವರದಿಯನ್ನು ಆಧರಿಸಿ ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆಯ ನಿಯಮಗಳನ್ನು ರೂಪಿಸಿ ಒಂದು ತಿಂಗಳಲ್ಲಿ ಟೆಂಡರ್‌ನ್ನು ಅಂತಿಮಗೊಳಿಸಲಾಗುವುದು ಎಂದರು.

ಸ್ಪರ್ಧಾತ್ಮಕ ಸೇವೆ
ವಿಮಾನ ನಿಲ್ದಾಣಗಳ ಪ್ರಾಧಿಕಾರ ರೂಪಿಸುವ ನಿಯಮಾವಳಿಗಳನ್ನು ಒಪ್ಪುವ ಯಾರೂ ಕೂಡ ಟೆಂಡರ್‌ನಲ್ಲಿ ಭಾಗವಹಿಸಬಹುದು. ಕ್ಯಾಬ್‌ ಸೇವೆ ಆರಂಭಿಸುವುದರಿಂದ ಇನ್ನು ಮುಂದೆ ಈಗ ಇಲ್ಲಿರುವ ಟೂರಿಸ್ಟ್‌ ಟ್ಯಾಕ್ಸಿಗಳು ಏಕಸ್ವಾಮ್ಯ ಹೊಂದುವಂತಿಲ್ಲ. ಕ್ಯಾಬ್‌ ಹಾಗೂ ಟೂರಿಸ್ಟ್‌ ಟ್ಯಾಕ್ಸಿಗಳ ನಡುವೆ ಸ್ಪರ್ಧಾತ್ಮಕ ಪೈಪೋಟಿ ಏರ್ಪಟ್ಟು ಪ್ರಯಾಣಿಕರಿಗೆ ಗುಣಮಟ್ಟದ ಹಾಗೂ ಸ್ಪರ್ಧಾತ್ಮಕ ಸೇವೆ ಒದಗಿಸಲು ಅನುಕೂಲವಾಗಲಿದೆ. ಪ್ರಯಾಣಿಕರ ಗುಣಮಟ್ಟದ ಸೇವೆ ಹಾಗೂ ಸುರಕ್ಷತೆಯನ್ನು ಒದಗಿಸುವುದಕ್ಕೆ ಪ್ರಾಧಿಕಾರ ಮೊದಲ ಆದ್ಯತೆ ನೀಡುತ್ತದೆ ಎಂದು ಅವರು ತಿಳಿಸಿದರು.

ಎಲ್ಲ ವಿಮಾನ ನಿಲ್ದಾಣಗಳಲ್ಲಿ ಮುಂಬಯಿಯ ಎಸ್‌.ಎಸ್‌. ಎಂಟರ್‌ ಪ್ರೈಸಸ್‌ ಸಂಸ್ಥೆ ಪಾರ್ಕಿಂಗ್‌ ಶುಲ್ಕ ಸಂಗ್ರಹದ ಗುತ್ತಿಗೆ ವಹಿಸಿಕೊಂಡಿದೆ. ಬೇರೆ ವಿಮಾನ ನಿಲ್ದಾಣಗಳಲ್ಲೂ ಈ ಸಂಸ್ಥೆಯು ದುಬಾರಿ ಪಾರ್ಕಿಂಗ್‌ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ.

ಹೊಸ ಪಾರ್ಕಿಂಗ್‌ ನೀತಿ
ಹೊಸ ಪಾರ್ಕಿಂಗ್‌ ಶುಲ್ಕ ನೀತಿ ಶೀಘ್ರ ಜಾರಿಗೆ ಬರಲಿದೆ. ಆದರೆ ಈಗಿನ ಸಂಸ್ಥೆಯ ಗುತ್ತಿಗೆ ಅವಧಿ ಮುಗಿಯುವ ತನಕ ಅವರು ಮುಂದುವರಿಯಲಿದ್ದಾರೆ. ಹೊಸ ನೀತಿಯಲ್ಲಿ ಈಗಿರುವಂತೆ ಪಾರ್ಕಿಂಗ್‌ಗೆ 7 ನಿಮಿಷಗಳ ಮಿತಿ ಇರುವುದಿಲ್ಲ. ಆದರೆ ಪಾರ್ಕಿಂಗ್‌ ಶುಲ್ಕ ಪರಿಷ್ಕರಣೆ ಆಗಲಿದೆ ಎಂದರು.

ಲಘು ಕೌಶಲ ತರಬೇತಿ
ವಿಮಾನ ನಿಲ್ದಾಣದಲ್ಲಿ ಬಾಡಿಗೆ ಮಾಡುತ್ತಿರುವ ಟೂರಿಸ್ಟ್‌ ಕಾರು ಚಾಲಕರ ಬಗ್ಗೆ , ಪಾರ್ಕಿಂಗ್‌ ಶುಲ್ಕ ವಸೂಲಿ ಮಾಡುವರು ಮತ್ತು ಟ್ರಾಲಿ ನಿರ್ವಾರ್ಹಕರ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಪ್ರಯಾಣಿಕರೊಂದಿಗೆ ವರ್ತನೆ ನಡೆಸುವ ಬಗ್ಗೆ ಲಘು ಕೌಶಲ ತರಬೇತಿ ನೀಡಲಾಗುತ್ತಿದೆ. ಈ ಬಗ್ಗೆ ಶ್ರೀನಿವಾಸ ಶಿಕ್ಷಣ ಸಂಸ್ಥೆಯ ಜತೆಗೆ ಒಪ್ಪಂದ ಮಾಡಿಕೊಂಡು ಅಲ್ಲಿನ ತಜ್ಞರ ಸಹಯೋಗದಲ್ಲಿ ತರಬೇತಿ ಕೊಡಲಾಗುತ್ತಿದೆ. ಈಗಾಗಲೇ ಕಳೆದ ನವೆಂಬರ್‌ನಲ್ಲಿ ಒಂದು ತರಬೇತಿ ಕಾರ್ಯಾಗಾರ ನಡೆಸಲಾಗಿದೆ ಎಂದರು.

ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಂದಾಗಿಯೇ ವಿಮಾನ ನಿಲ್ದಾಣ ಹಾಗೂ ಮಂಗಳೂರಿನ ಬಗ್ಗೆ ಜಾಗತಿಕ ಮಟ್ಟದಲ್ಲಿ ಉತ್ತಮ ಹೆಸರು ಬರಲು ಸಾಧ್ಯವಾಗಿರುತ್ತದೆ ಎಬುದನ್ನು ತರಬೇತಿಯ ಸಂದರ್ಭ ಮನವರಿಕೆ ಮಾಡಲಾಗಿದೆ ಎಂದು ವಿವರಿಸಿದರು.

ಪಾರ್ಕಿಂಗ್‌ಗೆ ಹೊಸ ಏಜೆನ್ಸಿ
ವಿಮಾನ ನಿಲ್ದಾಣದಲ್ಲಿ ವಾಹನ ಪಾರ್ಕಿಂಗ್‌ ಗುತ್ತಿಗೆ ಪಡೆದುಕೊಂಡಿರುವ ಏಜೆನ್ಸಿಯವರು ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವೀಡಿಯೋ ವೈರಲ್‌ ಆಗಿದೆ. ಈ ರೀತಿ ಆಗುತ್ತಿರುವುದು ಇದು ಮೂರನೇ ಬಾರಿ. ಈ ಗುತ್ತಿಗೆ ಕಂಪೆನಿ ವರ್ತನೆಯನ್ನು ಬದಲಿಸದಿದ್ದರೆ, ಬೇರೆಯವರಿಗೆ ಟೆಂಡರ್‌ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ವಿ.ವಿ. ರಾವ್‌ ಸ್ಪಷ್ಟ ಪಡಿಸಿದರು.