ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀ ಮಧ್ವ ಶಂಕರ ಹೆಸರಿಡಿ : ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀ -Vishwanews24
ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀ ಮಧ್ವ ಶಂಕರ ಹೆಸರಿಡಿ : ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀ -Vishwanews24
ಉಡುಪಿ: ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀಮಧ್ವ ಶಂಕರ ಹೆಸರಿಡುವಂತೆ ಉಡುಪಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಒತ್ತಾಯಿಸಿದ್ದಾರೆ.
ಭಾರತ ವಿಶ್ವ ಗುರುವಾಗಬೇಕೆಂದು ಎಲ್ಲರೂ ಬಯಸುತ್ತಿರುವಾಗ ಭಾರತೀಯ ಮೇರು ದಾರ್ಶನಿಕ, ಜಗದ್ಗುರುಗಳಾದ ಶ್ರೀಮಧ್ವಾಚಾರ್ಯರು ಮತ್ತು ಶ್ರೀಶಂಕರಾಚಾರ್ಯರ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಇಡುವುದು ಅರ್ಥಪೂರ್ಣ, ಅಪೂರ್ವ ಮತ್ತು ಮೌಲಿಕ ಎಂದು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮನ ಹೆಸರಿನಲ್ಲಿ ವಿಮಾನ ನಿಲ್ದಾಣ ರೂಪುಗೊಂಡಂತೆ ದಾರ್ಶನಿಕ ಆಚಾರ್ಯರ ನೆಲೆವೀಡಾದ ದಕ್ಷಿಣ ಭಾರತದ ವಿಮಾನ ನಿಲ್ದಾಣಕ್ಕೆ ಶ್ರೀಮಧ್ವ ಶಂಕರ ನಾಮಕರಣ ಭಾರತೀಯ ದಾರ್ಶನಿಕ ಪರಂಪರೆಗೆ ಗೌರವ ಸಲ್ಲಿಸಿದಂತೆ. ಜಗತ್ತಿನಲ್ಲಿಧರ್ಮ ಪ್ರಚಾರಕ್ಕೆ ಪೂರಕ, ಭಾವೈಕ್ಯತೆಗೂ ಇಂಬು ನೀಡಲಿದೆ.
ಆಧ್ಯಾತ್ಮಿಕತೆಯೇ ಭಾರತದ ಮೂಲ ಮತ್ತು ಅಪೂರ್ವ ಸಂಪತ್ತಾಗಿದ್ದು, ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರದಲ್ಲಷ್ಟೇ ಭಾರತ ಭವಿಷ್ಯದಲ್ಲಿ ಜಗತ್ತಿನ ನೇತೃತ್ವ ಪಡೆಯಲು ಉಜ್ವಲ ಮತ್ತು ವಿಪುಲ ಅವಕಾಶವಿದೆ. ಶ್ರೀರಾಮಾನುಜಾಚಾರ್ಯ, ಬಸವಣ್ಣ ಮೊದಲಾದ ಮಹಾ ಧಾರ್ಮಿಕ ನೇತಾರರ ಮೂಲ ಸ್ಥಳಗಳ ಸಮೀಪದಲ್ಲಿರುವ ಹಾಗೂ ದೇಶದ ಉಳಿದ ವಿಮಾನ ನಿಲ್ದಾಣಗಳಿಗೆ ಧಾರ್ಮಿಕ ನೇತಾರರ ನಾಮಕರಣವೇ ಹೆಚ್ಚು ಪ್ರಶಸ್ತ.
ಕೊರೊನಾ ಹಿನ್ನೆಲೆಯಲ್ಲಿ ಜಗತ್ತಿಗೆ ಆಧ್ಯಾತ್ಮಿಕ ಆಂದೋಲನದ ಅಗತ್ಯ ಬಹಳಷ್ಟಿದ್ದು ಈ ಹಿನ್ನೆಲೆಯಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಚಿಂತನೆ, ಕೆಲಸ ಕಾರ್ಯಗಳಿಗೆ ಸರಕಾರ ಹೆಚ್ಚಿನ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀಮಧ್ವ ಶಂಕರರ ಹೆಸರಿಡಲು ಸಂಬಂಧಿತರು ಗಮನಹರಿಸುವಂತೆ ತಿಳಿಸಿದ್ದಾರೆ.
