ಮಂಗಳೂರು:ಮಳೆ ಅಬ್ಬರ –ಸುಳ್ಯದ 4 ಗ್ರಾಮಗಳು ಜಲಾವೃತ – Vishwanews24
ಮಂಗಳೂರು:ಮಳೆ ಅಬ್ಬರ –ಸುಳ್ಯದ 4 ಗ್ರಾಮಗಳು ಜಲಾವೃತ
ಮಂಗಳೂರು: ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ 4 ಗ್ರಾಮಗಳ ಜನ ತೀವ್ರ ಆತಂಕಕ್ಕೀಡಾಗಿದ್ದಾರೆ. ಹರಿಹರ, ಕೊಲ್ಲಮೊಗ್ರು, ಬಾಳುಗೋಡು ಹಾಗೂ ಕಲ್ಮಕಾರು ಗ್ರಾಮದಲ್ಲಿ ಮೇಘಸ್ಫೋಟ ಉಂಟಾಗಿದ್ದು, ಸಾಕಷ್ಟು ಹಾನಿ ಸಂಭವಿಸಿದೆ.
ಹರಿಹರದ ಭೀಕರ ಪ್ರವಾಹಕ್ಕೆ ಹೊಳೆ ಪಕ್ಕದಲ್ಲಿದ್ದ ಅಂಗಡಿ ಹಾಗೂ ಮನೆಗಳು ಮಳೆ ನೀರಿಗೆ ಗುರುತು ಸಿಗದಂತೆ ಕೊಚ್ಚಿ ಹೋಗಿವೆ. ರಾತ್ರಿ ಹೋಗುವಾಗ ಇದ್ದ ಅಂಗಡಿ ಬೆಳಗ್ಗೆ ಬಂದು ನೋಡುವಾಗ ಮಾಯವಾಗದ್ದನ್ನು ನೋಡಿ ಸ್ಥಳೀಯರು ದಂಗಾಗಿದ್ದಾರೆ. ಹರಿದು ಬಂದ ಭಾರೀ ನೀರಿಗೆ ಹರಿಹರದಿಂದ ಬಾಳುಗೋಡು ಸಂಪರ್ಕಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ನೆರೆ ನೀರಿಗೆ ರಸ್ತೆ ಅಂಚಿನಲ್ಲಿರುವ ಮಣ್ಣು ಕುಸಿದು ಬಿದ್ದಿದೆ.
ಸುಳ್ಯ ತಾಲ್ಲೂಕು ಹಾಗೂ ಕಡಬ ತಾಲ್ಲೂಕುಗಳ ಕಾಳಜಿ ಕೇಂದ್ರಗಳಲ್ಲಿ 58 ಮಂದಿ ಆಶ್ರಯ ಪಡೆದಿದ್ದಾರೆ. ಕಲ್ಮಕಾರು ಸಕಾ೯ರಿ ಪ್ರಾಥಮಿಕ ಶಾಲೆಯಲ್ಲಿ 21 ಮಂದಿ, ಸಂಪಾಜೆಯ ಸಜ್ಜನ ಪ್ರತಿಷ್ಠಾನದಲ್ಲಿ 12 ಮಂದಿ, ಸುಬ್ರಹ್ಮಣ್ಯದ ಅನಘ ವಸತಿಗೃಹದಲ್ಲಿ 13 ಮಂದಿ, ಯೇನೆಕಲ್ಲು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 6 ಮಂದಿ ಇದ್ದಾರೆ ಎಂದು ತಾಲ್ಲೂಕು ಆಡಳಿತ ಮಾಹಿತಿ ನೀಡಿದೆ.
ನಿರಂತರ ಮಳೆಯಿಂದಾಗಿ ಮಡಪ್ಪಾಡಿಯಲ್ಲಿ ಅಪಾರ ಹಾನಿ ಸಂಭವಿಸಿದೆ. ಮಡಪ್ಪಾಡಿಯ ಗೋಳಿಯಡಿ ಎಂಬಲ್ಲಿ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದು ಬ್ಲಾಕ್ ಆಗಿ, ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಮಡಪ್ಪಾಡಿಯಿಂದ ಶೀರಡ್ಕ, ದೇರುಮಜಲು ಸಂಪರ್ಕಿಸುವ ರಸ್ತೆಯಲ್ಲಿ ಅಂಬೆಕಲ್ಲು ಎಂಬಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಆತಂಕದ ಪರಿಸ್ಥಿತಿ ಎದುರಾಗಿದೆ.
