ಮಂಡ್ಯ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಒಡೆಯರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮಾಸ್ಟರ್​​ ಪ್ಲಾನ್ ..

ಉಡುಪಿ, ರಾಜ್ಯ ನ್ಯೂಸ್

ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ, ಮಂಡ್ಯ ಲೋಕಸಭೆ ವಶಪಡಿಸಿಕೊಳ್ಳಲು ಬಿಜೆಪಿ ಬಿಗ್ ಪ್ಲ್ಯಾನ್ ರೆಡಿ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿರುವುದರಿಂದ ಮೈಸೂರು ರಾಜಮನೆತನವನ್ನು ಮಂಡ್ಯಕ್ಕೆ ಕರೆತರಲು ತೆರೆಮರೆಯ ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.

ಮೈಸೂರು ಸಂಸ್ಥಾನದ ರಾಜ ಯದುವೀರ್ ಒಡೆಯರ್ ಅವರನ್ನುಮಂಡ್ಯಕ್ಕೆ ಕರೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಬಿಜೆಪಿ ವರಿಷ್ಠರು ಯದುವೀರ್​ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಮಂಡ್ಯದಲ್ಲಿ ಯದುವೀರ್ ಒಡೆಯರ್ ಸ್ಪರ್ಧಿಸುವಂತೆ ಬಿಜೆಪಿ ಕಾರ್ಯಕರ್ತರು ಕೂಡಾ ಒತ್ತಾಯಿಸಿದ್ದಾರೆ. ಯದುವೀರ್ ಮಂಡ್ಯದಲ್ಲಿ ಸ್ಪರ್ಧಿಸಿದರೆ ಸಕ್ಕರೆ ನಾಡಿನ ಜನರು ಅವರ ಕೈ ಹಿಡಿಯೋ ಸಾಧ್ಯತೆ ಇದೆ ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ. ಈ ಹಿಂದೆ ಯದುವೀರ್‌ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅನ್ನೋ ಮಾತು ಕೇಳಿಬರ್ತಿತ್ತು. ಆದ್ರೀಗ, ಬಿಜೆಪಿ ನಾಯಕರು ಅವರನ್ನ ಮಂಡ್ಯಕ್ಕೆ ಕರೆ ತರಲು ಪ್ಲಾನ್ ಮಾಡುತ್ತಿದ್ದಾರೆ. ಅದರಲ್ಲೂ ಕೇಂದ್ರ ಸಚಿವ ಅನಂತ್‌ಕುಮಾರ್‌ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೈಸೂರು-ಕೊಡಗು ಕ್ಷೇತ್ರದ ಹಾಲಿ ಸಂಸದ ಪ್ರತಾಪ್‌ ಸಿಂಹರಿಗೆ ತೊಂದರೆಯಾಗದಿರಲಿ ಅನ್ನೋ ಕಾರಣಕ್ಕಾಗಿ ಯದುವೀರ್ ಅವರನ್ನ ಮಂಡ್ಯಕ್ಕೆ ಕರೆತರಲಾಗ್ತಿದೆ ಎಂದು ಹೇಳಲಾಗ್ತಿದೆ. ಅಲ್ಲದೇ, ಪ್ರತಾಪ್ ಸಿಂಹರಿಗೆ ಟಿಕೆಟ್‌ ತಪ್ಪಿಸಿದರೆ ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಅನ್ನೋದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.

‘ಮಂಡ್ಯ ಜಿಲ್ಲೆಯ ಮೇಲೆ ಮೈಸೂರು ರಾಜವಂಶಸ್ಥರ ಋಣವಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಭಾವಚಿತ್ರವನ್ನು ಮನೆಮನೆಯಲ್ಲೂ ಪೂಜಿಸುತ್ತಾರೆ. ಆ ವಂಶದ ಕುಡಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದರೆ ಗೆಲುವು ನಿಶ್ಚಿತ. ಯದುವೀರ್‌ ಅವರನ್ನು ಮಂಡ್ಯದಿಂದ ಕಣಕ್ಕಿಳಿಸುವ ತೀರ್ಮಾನವನ್ನು ನಮ್ಮ ಪಕ್ಷದ ವರಿಷ್ಠರೇ ಕೈಗೊಂಡಿದ್ದಾರೆ. ಪಕ್ಷದ ತೀರ್ಮಾನಕ್ಕೆ ಮುಖಂಡರೆಲ್ಲರೂ ಬದ್ಧರಾಗಿದ್ದೇವೆ’ ಎಂದು ಬಿಜೆಪಿ ಮುಖಂಡ ಎಚ್‌.ಆರ್‌.ಅರವಿಂದ್‌ ಹೇಳಿದರು.