ಮಗಳ ಮದುವೆಗಾಗಿ 30 ದಿನಗಳ ಪೆರೋಲ್ ಮೇಲೆ ಹೊರಬಂದ ರಾಜೀವ್‌ ಗಾಂಧಿ ಹಂತಕಿ ನಳಿನಿ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ಮಾಜಿ ಪ್ರಧಾನಿ ರಾಜೀವಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ವೆಲ್ಲೂರು ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್‌ಗೆ ಮದ್ರಾಸ್‌ ಹೈಕೋರ್ಟ್‌ 30 ದಿನಗಳ ಪೆರೋಲ್‌ ಮಂಜೂರು ಮಾಡಿದೆ.

ಜುಲೈ 5 ರಂದು ಪರೋಲ್‌ ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್‌ 1 ತಿಂಗಳ ಷರತ್ತು ಬದ್ಧ ಪರೋಲ್‌ಗೆ ಅನುಮತಿ ನೀಡಿದೆ. ಪೆರೋಲ್ಗಾಗಿ ನಳಿನಿಯೇ ವಾದ ಮಂಡಿಸಿದಳು. ಆರು ತಿಂಗಳ ಅವಧಿ ಬಿಡುಗಡೆ ಕೋರಿ ನಳಿನಿ ಮನವಿ ಮಾಡಿದ್ದಳು. ‘ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ತಮ್ಮನ್ನು ತಪ್ಪಾಗಿ ಶಿಕ್ಷೆಗೆ ಗುರಿಯಾಗಿಸಲಾಗಿದೆ. ತಾಯಿಯಾಗಿ ನನ್ನ ಜವಾಬ್ದಾರಿಯನ್ನು ಪೂರೈಸಬೇಕಿದೆ. ನನ್ನ ಮಗಳ ಮದುವೆ ಸಲುವಾಗಿ ನನ್ನ ಕುಟುಂಬವನ್ನು ಭೇಟಿಯಾಗಬೇಕಿದೆ, ಅಲ್ಲದೆ ದುಡ್ಡಿನ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಅದಕ್ಕೆ 6 ತಿಂಗಳ ಪೆರೋಲ್‌ ನೀಡಿ’ ಎಂದು ಭಾವನಾತ್ಮಕವಾಗಿ ವಾದ ಮಂಡಿಸಿದಳು.

ನಳಿನಿಗೆ ನೀಡುವ ಭದ್ರತಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಕೋರ್ಟ್‌ ನಿರ್ದೇಶಿಸಿದೆ. 28 ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿರುವ ನಳಿನಿ ಕಳೆದ ವರ್ಷ ಆಕೆ ತಂದೆ ಅಂತ್ಯಸಂಸ್ಕಾರಕ್ಕೆಂದು ಒಂದು ದಿನದ ಮಟ್ಟಿಗೆ ಪೆರೋಲ್ ಪಡೆದಿದ್ದಳು.

ನಳಿನಿ ಪುತ್ರಿ ಲಂಡನ್ ನಲ್ಲಿ ಮೆಡಿಸಿನ್ ಶಿಕ್ಷಣವನ್ನು ಪಡೆದಿದ್ದಾರೆ. ವೆಲ್ಲೂರಿನಲ್ಲಿ ಇವರ ವಿವಾಹ ಸರಳವಾಗಿ ನೆರವೇರಲಿದೆ ಎಂದು ತಿಳಿದುಬಂದಿದೆ.ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿಗೆ ಗಲ್ಲುಶಿಕ್ಷೆಯನ್ನು ಕೋರ್ಟ್ ವಿಧಿಸಿತ್ತು. ಆದರೆ ಸೋನಿಯಾ ಗಾಂಧಿ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದರು. ಆ ಬಳಿಕ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿ ಕೋರ್ಟ್ ತೀರ್ಪು ನೀಡಿತ್ತು. ತದನಂತರ ನಳಿನಿ ಜೈಲಿನಲ್ಲಿಯೇ ಮಗಳಿಗೆ ಜನ್ಮ ನೀಡಿದ್ದಳು.