ಮತ್ತೆ ವರುಣನ ಆರ್ಭಟಕ್ಕೆ ತತ್ತರಿಸಿ ಹೋದ ವಾಣಿಜ್ಯ ನಗರಿ ಮುಂಬೈ -Vishwanews24

Featured, ರಾಷ್ಟ್ರ ನ್ಯೂಸ್

ಮುಂಬೈ: ವಾಣಿಜ್ಯ ನಗರಿ ಮುಂಬೈ ಶನಿವಾರ ಮತ್ತೆ ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದ್ದು, ಹಲವಾರು ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದು, ಮುಂಬೈ-ಕೊಲ್ಲಾಪುರ ಎಕ್ಸ್ ಪ್ರೆಸ್ ಜಲಾವೃತದಿಂದಾಗಿ ಮಾರ್ಗ ಮಧ್ಯೆದಲ್ಲಿ ನಿಂತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮುಂಬೈಗೆ ಬರಬೇಕಾಗಿದ್ದ 17 ವಿಮಾನಗಳ ತನ್ನ ದಿಕ್ಕು ಬದಲಿಸಿದೆ.

ಭಾರೀ ಮಳೆಯಿಂದಾಗಿ 11 ವಿಮಾನಗಳ ಹಾರಾಟ ರದ್ದಾಗಿದ್ದು, ಸುಮಾರು 17 ವಿಮಾನಗಳು ಮುಂಬೈ ವಿಮಾನ ನಿಲ್ದಾಣದತ್ತ ಕಳುಹಿಸಲಾಗಿದೆ ಎಂದು ವರದಿ ವಿವರಿಸಿದೆ. ಥಾಣೆ, ಕಲ್ಯಾಣ್ ಸೇರಿದಂತೆ ಹಲವು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ರಕ್ಷಣಾ ಕಾರ್ಯಕ್ಕೆ ಎನ್ ಡಿಆರ್ ಎಫ್ ಪಡೆ ಆಗಮಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

 ರಾಯ್‌ಗಢ ಜಿಲ್ಲೆ, ಠಾಣೆ, ಪಾಲ್ಘರ್‌ ಮತ್ತು ಮುಂಬಯಿನಲ್ಲಿ ಮುಂದಿನ 3 ದಿನಗಳಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆಯಿದೆ ಎಂದು ಎಚ್ಚರಿಸಿರುವ ಭಾರತೀಯ ಹವಾಮಾನ ಇಲಾಖೆ ಈ ಪ್ರದೇಶಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಗಂಟೆಗೆ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಜತೆಗೆ ಗುಡುಗು ಸಿಡಿಲುಗಳ ಆರ್ಭಟ ಹೆಚ್ಚಲಿದೆ ಎಂದು ಜನಸಾಮಾನ್ಯರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಮುಂಬಯಿ ಹೊರತಾಗಿ ಒಡಿಶಾ, ಮಧ್ಯಪ್ರದೇಶ, ಛತ್ತೀಸ್‌ಗಢ, ವಿದರ್ಭಾ, ಗುಜರಾತ್‌ ಹಾಗೂ ರಾಜಸ್ಥಾನಗಳಲ್ಲಿಯೂ ಮುಂದಿನ ಮೂರು ದಿನ ಮಳೆ ಹೆಚ್ಚಾಗಲಿದೆ ಎಂದು ಇಲಾಖೆ ಹೇಳಿದೆ..

ಶುಕ್ರವಾರ ರಾತ್ರಿಯಿಂದಲೇ ಮುಂಬೈಯಲ್ಲಿ ಧಾರಾಕಾರ ಮಳೆ ಸುರಿಯತೊಡಗಿದೆ. ಥಾಣೆ ಮತ್ತು ಪಾಲ್ ಘರ್ ನಲ್ಲಿ ಭಾರೀ ಮಳೆಯಾಗಿರುವುದಾಗಿ ವರದಿ ಹೇಳಿದೆ. ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಎನ್ ಡಿಆರ್ ಎಫ್ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.