ಮಹಾರಾಷ್ಟ್ರದಲ್ಲಿ ನಕಲಿ ಪನ್ನೀರ್ ಸಂಪೂರ್ಣ ನಿಷೇಧ : ಮಾರಾಟ ಮಾಡಿದರೆ ಜೈಲು ಶಿಕ್ಷೆ,ಭಾರಿ ದಂಡ – vishwanews24
ಮಹಾರಾಷ್ಟ್ರದಲ್ಲಿ ನಕಲಿ ಪನ್ನೀರ್ ಸಂಪೂರ್ಣ ನಿಷೇಧ : ಮಾರಾಟ ಮಾಡಿದರೆ ಜೈಲು ಶಿಕ್ಷೆ,ಭಾರಿ ದಂಡ
ಮುಂಬೈ : ಆಹಾರದಲ್ಲಿ ಹೆಚ್ಚುತ್ತಿರುವ ಕಲಬೆರಕೆ ಮತ್ತು ನಕಲಿ ಉತ್ಪನ್ನಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಮಹಾರಾಷ್ಟ್ರ ಸರ್ಕಾರ, ಹಾಲೇತರ ‘ಅನಲಾಗ್ ಪನೀರ್’ ತಯಾರಿಕೆ, ಮಾರಾಟ ಮತ್ತು ವಿತರಣೆಗೆ ರಾಜ್ಯಾದ್ಯಂತ ಸಂಪೂರ್ಣ ನಿಷೇಧ ಹೇರಿದೆ.
ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕೈಗೊಳ್ಳಲಾದ ಈ ಕ್ರಮದೊಂದಿಗೆ, ಛತ್ತೀಸ್ಗಢದ ಬಳಿಕ ಇಂತಹ ನಿಷೇಧ ಜಾರಿಗೊಳಿಸಿದ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರ ಪಾತ್ರವಾಗಿದೆ. ರಾಜ್ಯ ಸರ್ಕಾರದ ಆದೇಶದಂತೆ, ಅನಲಾಗ್ ಪನೀರ್ನ ತಯಾರಿಕೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ಸಾಗಣೆ, ಸಗಟು ಹಾಗೂ ಚಿಲ್ಲರೆ ಮಾರಾಟ ಎಲ್ಲವನ್ನೂ ನಿಷೇಧಿಸಲಾಗಿದೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ-2006 ಅಡಿಯಲ್ಲಿ ನಿಷೇಧ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ.
ಉದ್ಯಾವರ : ಪಾಪನಾಶಿನಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ – vishwanews24
ಸಾಮಾನ್ಯ ಉಲ್ಲಂಘನೆಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಹಾಗೂ ರೂ. 1 ಲಕ್ಷದವರೆಗೆ ದಂಡ ವಿಧಿಸಬಹುದು. ಅಸುರಕ್ಷಿತ ಆಹಾರ ಸೇವನೆಯಿಂದ ಯಾರಾದರೂ ಮೃತಪಟ್ಟರೆ ಜೀವಾವಧಿ ಶಿಕ್ಷೆ ಹಾಗೂ ಕನಿಷ್ಠ ರೂ. 10 ಲಕ್ಷ ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಪ್ರಕಾರ, ಅನಲಾಗ್ ಪನೀರ್ ಅನ್ನು ಅಸಲಿ ಹಾಲಿನ ಪನೀರ್ ಎಂದು ಗ್ರಾಹಕರಿಗೆ ಮಾರಾಟ ಮಾಡುವುದು ವಂಚನೆಯಾಗಿದ್ದು, ಇದು ಕಾನೂನುಬಾಹಿರ ವ್ಯಾಪಾರಕ್ಕೆ ಸೇರುತ್ತದೆ.
ಅನಲಾಗ್ ಪನೀರ್ ಎನ್ನುವುದು ಹಾಲಿನಿಂದ ತಯಾರಿಸುವ ಸಾಂಪ್ರದಾಯಿಕ ಪನೀರ್ಗೆ ಪರ್ಯಾಯವಾಗಿ ತಯಾರಿಸಲಾದ ಹಾಲೇತರ ಉತ್ಪನ್ನವಾಗಿದೆ. ಇದರಲ್ಲಿ ಹಾಲಿನ ಕೊಬ್ಬಿನ ಬದಲಿಗೆ ಪಾಮ್ ಆಯಿಲ್, ಸ್ಟಾರ್ಚ್ ಹಾಗೂ ಇತರ ಆಹಾರ ಸೇರ್ಪಡೆಗಳನ್ನು ಬಳಸಿ ಪನೀರ್ನಂತಹ ರೂಪ ನೀಡಲಾಗುತ್ತದೆ. ಆದರೆ FSSAI ನಿಯಮಗಳ ಪ್ರಕಾರ, ಪನೀರ್ ಅನ್ನು ಕೇವಲ ಹಾಲಿನಿಂದಲೇ ತಯಾರಿಸಬೇಕು. ಅದರಲ್ಲಿ ಸ್ಟಾರ್ಚ್ ಅಥವಾ ಹಾಲೇತರ ಕೊಬ್ಬುಗಳನ್ನು ಸೇರಿಸುವಂತಿಲ್ಲ.
ಸದ್ಯಕ್ಕೆ ಕಾಕ್ರೋಚ್ ಜನತಾ ಪಾರ್ಟಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ : ಅಭಿಜೀತ್ ದೀಪ್ಕೆ – vishwanews24
ಅನಲಾಗ್ ಪನೀರ್ ಮಾರಾಟಕ್ಕೆ FSSAI ಅವಕಾಶ ನೀಡಿದ್ದರೂ, ಅದರ ಪ್ಯಾಕಿಂಗ್ ಮೇಲೆ ‘ಅನಲಾಗ್ ಪನೀರ್’ ಎಂದು ಸ್ಪಷ್ಟವಾಗಿ ನಮೂದಿಸುವುದು ಕಡ್ಡಾಯವಾಗಿದೆ. ಆದರೆ ಅನೇಕ ಹೋಟೆಲ್ಗಳು ಹಾಗೂ ವ್ಯಾಪಾರಿಗಳು ಇದನ್ನು ಅಸಲಿ ಹಾಲಿನ ಪನೀರ್ ಎಂದು ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿಬಂದಿದ್ದವು. ಕಳೆದ ವರ್ಷ ಮಹಾರಾಷ್ಟ್ರ ವಿಧಾನಸಭೆಯಲ್ಲಿಯೂ ಅನಲಾಗ್ ಪನೀರ್ ನಿಷೇಧಿಸುವಂತೆ ಸದಸ್ಯರು ಒತ್ತಾಯಿಸಿದ್ದರು. ಅದರ ಬೆನ್ನಲ್ಲೇ ಜುಲೈ 30ರಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ವರ್ಷದ ಮೇ ತಿಂಗಳಿನಿಂದ ರಾಜ್ಯಾದ್ಯಂತ ನಕಲಿ ಹಾಲು ಹಾಗೂ ಪನೀರ್ ತಯಾರಿಕಾ ಘಟಕಗಳ ಮೇಲೆ ಆಹಾರ ಮತ್ತು ಔಷಧ ಆಡಳಿತ ನಿರಂತರ ದಾಳಿ ನಡೆಸುತ್ತಿದೆ. ಇತ್ತೀಚೆಗೆ ಪುಣೆಯ ಮಂಜರಿ ಖುರ್ದ್ ಪ್ರದೇಶದಲ್ಲಿನ ಗೋದಾಮಿನ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 1,400 ಕೆಜಿ ನಕಲಿ ಪನೀರ್ ವಶಪಡಿಸಿಕೊಳ್ಳಲಾಗಿತ್ತು. ಆಹಾರ ಸುರಕ್ಷತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದ್ದು, ಗ್ರಾಹಕರು ಪನೀರ್ ಖರೀದಿಸುವಾಗ ಅದರ ಲೇಬಲ್ ಮತ್ತು ಗುಣಮಟ್ಟವನ್ನು ಪರಿಶೀಲಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಕಾರ್ಕಳ ರೆಂಜಾಳದಲ್ಲಿ ಭೂಕುಸಿತದ ಆತಂಕ : ಡಿಸಿ ಸ್ವರೂಪಾ ಟಿ.ಕೆ ಭೇಟಿ, ಪರಿಶೀಲನೆ – vishwanews24
