ಮಿದುಳು ಜ್ವರದಿಂದ ಬಳಲುತ್ತಿರುವ ಮಗನನ್ನು ಬದುಕಿಸಿಕೊಡುವಂತೆ ಶಿಲುಬೆ ಮುಂದೆ ಮಲಗಿಸಿ ದಂಪತಿಗಳ ಪ್ರಾರ್ಥನೆ – Vishwanews24
ಮಿದುಳು ಜ್ವರದಿಂದ ಬಳಲುತ್ತಿರುವ ತಮ್ಮ ಮಗನನ್ನು ಕಾಪಾಡಲು ದೇವರ ಮೊರೆ ಹೋದ ದಂಪತಿ
ಉತ್ತರಕನ್ನಡ: ಮಿದುಳು ಜ್ವರದಿಂದ ಬಳಲುತ್ತಿರುವ ತಮ್ಮ ಮಗನನ್ನು ಕಾಪಾಡಲು ದಂಪತಿಗಳು ಇದೀಗ ದೇವರ ಮೊರೆ ಹೋಗಿದ್ದು, ನಂದಗಡ ಗ್ರಾಮದ ಹೊರವಲಯದ ಬೆಟ್ಟದ ಮೇಲಿರುವ ಏಸುಕ್ರಿಸ್ತನ ಶಿಲುಬೆ ಮುಂದೆ ಮಂಗಳವಾರ ಬಾಲಕನನ್ನು ಮಲಗಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ನಂದಗಡದ ದಂಪತಿಗಳ 8 ವರ್ಷದ ಮಗನಿಗೆ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದು, ವೈದ್ಯರು ಕೈಚೆಲ್ಲಿದ್ದು, ಇದೀಗ ದೇವರ ಮೊರೆ ಹೋಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ನಿವಾಸಿಗಳಾದ ಕೃಷ್ಣ ಸುತ್ರಾವೆ ಹಾಗೂ ಅಂಬಾ ದಂಪತಿಯ 8 ವರ್ಷದ ಪುತ್ರ ಶೈಲೇಶ ಮಿದುಳು ಜ್ವರದಿಂದಾಗಿ ಪಾರ್ಶ್ವವಾಯು ಪೀಡಿತನಾಗಿದ್ದಾನೆ. ಹಲವು ಆಸ್ಪತ್ರೆಗಳಿಗೆ ಹೋಗಿ, ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಲಕ್ಷಾಂತರ ಹಣ ವ್ಯಯಿಸಿದ್ದಾರೆ. ಆದರೆ, ಇತ್ತೀಚೆಗೆ ಬಾಲಕನ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ. ವೈದ್ಯರೂ ಕೈಚೆಲ್ಲಿದ್ದಾರೆ.

ಇದರಿಂದ ದಿಕ್ಕು ತೋಚದಾದ ದಂಪತಿ ಏಸುವಿನ ಮೊರೆಹೋಗಿದ್ದಾಗಿ ತಿಳಿಸಿದರು. ನಂದಗಡ ಗ್ರಾಮದ ಹೊರವಲಯದ ಬೆಟ್ಟದ ಮೇಲಿರುವ ಏಸು ಕ್ರಿಸ್ತನ ಶಿಲುಬೆಯ ಮುಂದೆ ಪ್ರಾರ್ಥಿಸಿದರೆ ಮಗ ಬದುಕುತ್ತಾನೆ ಎಂದು ಮಿತ್ರರು ಹೇಳಿದ್ದರಿಂದ, ಆ ಮಾತು ನಂಬಿ ದಂಪತಿ ಇಲ್ಲಿಗೆ ಬಂದರು. ಶಿಲುಬೆ ಮುಂದೆ ಮಗನನ್ನು ಮಲಗಿಸಿ ದೂರದಲ್ಲಿ ಕುಳಿತು ಪ್ರಾರ್ಥಿಸಿದರು.
