ಮುಸ್ಲಿಂ ಧರ್ಮದಲ್ಲಿ ಮದುವೆ ಎನ್ನುವುದು ಕೇವಲ ಒಪ್ಪಂದ, ಅದು ಸಂಸ್ಕಾರವಲ್ಲ : ಕರ್ನಾಟಕ ಹೈಕೋರ್ಟ್ – Vishwanews24

Featured, ರಾಜ್ಯ ನ್ಯೂಸ್

ಮುಸ್ಲಿಂ ಧರ್ಮದಲ್ಲಿ ಮದುವೆ ಎನ್ನುವುದು ಕೇವಲ ಒಪ್ಪಂದ, ಅದು ಸಂಸ್ಕಾರವಲ್ಲ : ಕರ್ನಾಟಕ ಹೈಕೋರ್ಟ್ – Vishwanews24

ಬೆಂಗಳೂರು: ಮುಸ್ಲಿಂ ಧರ್ಮದಲ್ಲಿ ಮದುವೆ ಎನ್ನುವುದು ಕೇವಲ ಒಪ್ಪಂದ, ಅದು ಸಂಸ್ಕಾರವಲ್ಲ ನಿಜ. ಹಾಗೆಂದ ಮಾತ್ರಕ್ಕೆ ಮೊದಲ ಪತ್ನಿಗೆ ವಿಚ್ಛೇದನ ನೀಡಿದಾಗ ಆಕೆಯನ್ನು ಜೀವನಾಂಶದಿಂದ ಹೊರಕ್ಕೆ ಹಾಕುವಂತಿಲ್ಲ. ಆ ಹೊಣೆಗಾರಿಕೆಯಿಂದ ವಿಚ್ಛೇದಿತ ಪತಿ ತಪ್ಪಿಸಿಕೊಳ್ಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಜತೆಗೆ, ಜೀವನಾಂಶ ಕೊಡದೇ ಪತ್ನಿಯನ್ನು ಸತಾಯಿಸುತ್ತಿದ್ದ ವ್ಯಕ್ತಿಗೆ 25 ಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ.

ಬೆಂಗಳೂರಿನ ಎಜಾಜುರ್‌ ರೆಹಮಾನ್‌ ಎಂಬ ವ್ಯಕ್ತಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಕೋರ್ಟ್‌ ಈ ತೀರ್ಪು ನೀಡಿದೆ. ಪತ್ನಿಗೆ ವಿಚ್ಛೇದನ ನೀಡಿ ಎರಡನೆಯ ವಿವಾಹವಾಗಿದ್ದಾರೆ ಎಜಾಜುರ್‌. ಇವರು ತಮ್ಮ ಮೊದಲ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ನೀಡಬೇಕು ಎಂದು ಕೌಟುಂಬಿಕ ಕೋರ್ಟ್‌ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಇದರಿಂದ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದು ದಂಡ ವಿಧಿಸಿದ್ದಾರೆ.

ಕಾರ್ಕಳ: ಇಬ್ಬರು ನಕ್ಸಲ್‌ವಾದಿಗಳ ಬಂಧನಕ್ಕೆ ವಾರಂಟ್ ಜಾರಿ ; ಇಬ್ಬರ ಸುಳಿವು ನೀಡಿದವರಿಗೆ ರೂ.10 ಲಕ್ಷ ಬಹುಮಾನ ಘೋಷಣೆ – Vishwanews24

ಇವರು 1991 ರಲ್ಲಿ ಸಾಯಿರಾ ಬಾನು ಎಂಬುವವನ್ನು ಮದುವೆಯಾಗಿದ್ದರು. ಎಂಟೂವರೆ ತಿಂಗಳ ಬಳಿಕ ತಲಾಖ್‌ ನೀಡಿ 5 ಸಾವಿರ ರೂ. ಮೆಹರ್‌ ನೀಡಿದ್ದರು. 2002 ರಲ್ಲಿ ಸಾಯಿರಾ ಬಾನು ಜೀವನಾಂಶ ಕೋರಿ ಕೋರ್ಟ್‌ ಮೊರೆ ಹೋಗಿದ್ದರು. ತಿಂಗಳಿಗೆ ಮೂರು ಸಾವಿರದಂತೆ ಜೀವನಾಂಶ ನೀಡುವಂತೆ ಕೋರ್ಟ್‌ ಆದೇಶಿಸಿತ್ತು. ಇದನ್ನು ಇವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

‘ಮುಸ್ಲಿಂ ಕಾನೂನಿನ ಪ್ರಕಾರ ಇಸ್ಲಾಂ ಧರ್ಮದಲ್ಲಿ ವಿವಾಹ ಒಂದು ಸಂಸ್ಕಾರವಲ್ಲ, ಇದು ಒಪ್ಪಂದ. ಗಂಡು ಮತ್ತು ಹೆಣ್ಣಿನ ಕುಟುಂಬಗಳ ನಡುವಿನ ಒಪ್ಪಂದದಂತೆ ವಿವಾಹ ನಡೆಯುತ್ತದೆ. ಹಾಗೆಂದು ದಂಪತಿ ಡಿವೋರ್ಸ್‌ ಕೊಟ್ಟಾಗ ವಿಚ್ಛೇದಿತ ಗಂಡ ತನ್ನ ಕರ್ತವ್ಯದಿಂದ ಮುಕ್ತನಾಗುವುದಿಲ್ಲ. ಎರಡನೇ ಪತ್ನಿ ಹಾಗೂ ಆಕೆಯಿಂದ ಹುಟ್ಟಿದ ಮಕ್ಕಳ ನಿರ್ವಹಣೆ ಮಾಡಬೇಕಿರುವ ಹಿನ್ನಲೆಯಲ್ಲಿ ವಿಚ್ಛೇದನ ನೀಡಿದ ಮೊದಲ ಪತ್ನಿಗೆ ಜೀವನಾಂಶ ನೀಡುವ ಹೊಣೆಗಾರಿಕೆಯಿಂದ ಪತಿ ತಪ್ಪಿಸಿಕೊಳ್ಳುವಂತಿಲ್ಲ. ‘ಮೆಹರ್‌’ ನೀಡಿದಾಕ್ಷಣ ಒಪ್ಪಂದ ಮುಕ್ತಾಯವಾಗುವುದಿಲ್ಲ. ವಿಚ್ಛೇದಿತ ಪತ್ನಿ ಎರಡನೇ ಮದುವೆ ಆಗದಿದ್ದಾಗ ಮತ್ತು ಜೀವನ ನಿರ್ವಹಣೆಗೆ ಅಶಕ್ತಳಾಗಿದ್ದಾಗ “ಇದ್ದತ್‌’ (ತಲಾಕ್‌ ನೀಡಿದ ಬಳಿಕದ ನಾಲ್ಕು ತಿಂಗಳು) ಅವಧಿಯ ಅನಂತರವೂ ಆಕೆ ಜೀವನಾಂಶ ಪಡೆಯುವ ಹಕ್ಕು ಹೊಂದಿದ್ದಾಳೆ ಎಂದು ಹೈಕೋರ್ಟ್‌ ಹೇಳಿದೆ.