ಮೋದಿ ಪ್ರಧಾನಿಯಾಗುವ ಸಾಧ್ಯತೆಯೇ ಇಲ್ಲ, ಈ ಬಾರಿ ಬಿಜೆಪಿ ಸರಕಾರವನ್ನು ಜನರು ಮನೆಗೆ ಕಳುಹಿಸುತ್ತಾರೆ, ದೇಶವನ್ನುಆಳುವ ಅರ್ಹತೆ ಕಾಂಗ್ರೆಸ್ಗೆ ಮಾತ್ರ ಇದೆ : ಅಮೃತ್ ಶೆಣೈ – Vishwanews24
ಬಂಟ್ವಾಳ, : ತೀವ್ರಗಾಮಿಗಳಿಗೆ ಮಾತ್ರ ಬಿಜೆಪಿ ಟಿಕೆಟ್ ನೀಡುತ್ತಿದೆ. ಅನಂತ್ ಕುಮಾರ್, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಪ್ರತಾಪ್ ಸಿಂಹ ಇದರ ಬ್ರಾಂಡ್ಗಳು. ಕಲ್ಲು ಒಡೆಯುವ, ಬೆಂಕಿ ಹಚ್ಚುವ ಮೂಲಕ ಕೋಮು ಸೌಹಾರ್ದತೆಯನ್ನು ಹಾಳು ಮಾಡುವುದೇ ಇವರ ಉದ್ದೇಶ. ಇವರಿಗೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಬೇಕಾಗಿಲ್ಲ ಎಂದು ಎಐಸಿಸಿಯ ಸದಸ್ಯ ಅಮೃತ್ ಶೆಣೈ ಹೇಳಿದ್ದಾರೆ.
ಹಾಸನ- ಗುಂಡ್ಯ- ಬಿ.ಸಿ.ರೋಡ್ ಅಪೂರ್ಣ ಹೆದ್ದಾರಿಯ ಅಸ್ಥವ್ಯಸ್ಥೆಯನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ಕಾಲ್ನಡಿಗೆ ಜಾಥಾ ಮಂಗಳವಾರ ಸಂಜೆ ಮಾಣಿ ಜಂಕ್ಷನ್ಗೆ ತಳುಪಿದ ಸಂದರ್ಭ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಮೋದಿ ಎರಡನೇ ಬಾರಿ ಪ್ರಧಾನಿಯಾಗುವ ಸಾಧ್ಯತೆಯೇ ಇಲ್ಲ. ಈ ಬಾರಿ ಬಿಜೆಪಿ ಸರಕಾರವನ್ನು ಜನರು ಮನೆಗೆ ಕಳುಹಿಸುತ್ತಾರೆ. ದೇಶವನ್ನು ಆಳುವ ಅರ್ಹತೆ ಕಾಂಗ್ರೆಸ್ಗೆ ಮಾತ್ರ ಇದೆ ಎಂದು ಅವರು ಹೇಳಿದರು.
ನಾವೆಲ್ಲರೂ ಹಿಂದು-ಒಂದು ಹೇಳುವವರು ಮೊದಲು ಒಟ್ಟಿಗೆ ಕುಳಿತು ಊಟ ಮಾಡಲಿ. ಕಾಂಗ್ರೆಸ್ನದ್ದು ಒಂದೇ ನಿಲುವು. ಬಿಜೆಪಿಯದ್ದು ದ್ವಂದ ನಿಲುವು. ಆಯ ರಾಜ್ಯಗಳಲ್ಲಿ ಒಂದೊಂದು ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ ಎಂದ ಅವರು, ನಮಗೆ ಇಷ್ಟವಾದ ಆಹಾರ ಸೇವಿಸುವುದು ನಮ್ಮ ಹಕ್ಕು. ಇದನ್ನು ಸಂವಿಧಾನವೇ ಎತ್ತಿ ಹಿಡಿದಿದೆ ಎಂದರು.
30 ವರ್ಷಗಳಿಂದ ಮಂಗಳೂರು ಲೋಕಸಭಾ ಸದಸ್ಯರಾದವರ ಸಾಧನೆ ಏನೆಂದು ಪ್ರಶ್ನೆ ಮಾಡಿದರೆ ಸಿಗುವ ಉತ್ತರ ಶೂನ್ಯ. ಕಾಂಗ್ರೆಸ್ ಲೋಕಸಭಾ ಸದಸ್ಯರ ಕಾಲದಲ್ಲಿ ಅವಕಾಶ ಸಿಕ್ಕಿದಷ್ಟು ಉತ್ತಮ ಕೆಲಸಗಳು ಆಗಿವೆ. ಜಿಲ್ಲೆಗೆ ಬಂದರು, ವಿಮಾನ ನಿಲ್ದಾಣಗಳು ಬಂದಿದ್ದರೆ ಅದು ಶ್ರೀನಿವಾಸ ಮಲ್ಯರ ಕಾಲದಲ್ಲಿ. ಜಿಲ್ಲೆಯ ಸಂಸದರಾಗಿ ಜವಹರಲಾಲ್ ನೆಹರೂ ಆತ್ಮೀಯರಾಗಿ ಅನೇಕ ಕೆಲಸಗಳು ಆಗಿದೆ. ಮಾತ್ರವಲ್ಲದೆ ಅನೇಕ ಕೆಲಸ ಕಾರ್ಯಗಳು ಜಿಲ್ಲೆಯ ಕಾಂಗ್ರೆಸ್ ಸಂಸದರ ಕಾಲದಲ್ಲಿ ಆಗಿದೆ ಎಂದರು.
ಬಿಜೆಪಿ ದೇಶದ ಸಂಪತ್ತು ಮತ್ತು ಸೌಹಾರ್ದವನ್ನು ನಾಶ ಮಾಡಿದೆ. ಇಡೀ ಬ್ಯಾಂಕ್ ವ್ಯವಸ್ಥೆಯೇ ನಷ್ಟದಲ್ಲಿದ್ದು, ಸುಮಾರು 27 ಮಂದಿ ಬ್ಯಾಂಕ್ ಲೂಟಿ ಮಾಡಿ ವಿದೇಶಕ್ಕೆ ಓಡಿ ಹೋಗಿದ್ದು, ಕೇಂದ್ರ ಸರಕಾರ ಇದರ ಪಾಲುಪಾರ ಎಂದ ಅವರು, ಆಡಂಬರದ ಜೀವನವನ್ನು ಅನುಭವಿಸುತ್ತಿರುವ ನರೇಂದ್ರ ಮೋದಿ ಆಧುನಿಕ ಭಾರತದ ಹಿಟ್ಲರ್ ಎಂದು ಅವರು ಹೇಳಿದರು.

