ಯುವ ಟೇಬಲ್ ಟೆನಿಸ್ ಆಟಗಾರ ವಿಶ್ವ ದೀನದಯಾಳನ್ ಅಪಘಾತಕ್ಕೆ ಬಲಿ – Vishwanews24

Featured, ರಾಷ್ಟ್ರ ನ್ಯೂಸ್

ಯುವ ಟೇಬಲ್ ಟೆನಿಸ್ ಆಟಗಾರ ವಿಶ್ವ ದೀನದಯಾಳನ್ ಅಪಘಾತಕ್ಕೆ ಬಲಿ

ಶಿಲಾಂಗ್: ಭಾರತದ ಭರವಸೆಯ ಟೇಬಲ್ ಟೆನಿಸ್ ಆಟಗಾರ, ತಮಿಳುನಾಡಿನ ವಿಶ್ವ ದೀನದಯಾಳನ್(18) ಭಾನುವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಶಿಲಾಂಗ್​ನಲ್ಲಿ ಸೋಮವಾರದಿಂದ ನಡೆಯಲಿರುವ 83ನೇ ಸೀನಿಯರ್ ರಾಷ್ಟ್ರೀಯ ಮತ್ತು ಅಂತರ ರಾಜ್ಯ ಟೇಬಲ್ ಟೆನ್ನಿಸ್‌​ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ತಂಡದ ಇತರ ಮೂವರು ಸಹ ಆಟಗಾರರೊಂದಿಗೆ ಗುವಾಹಟಿಯಿಂದ ಶಿಲ್ಲಾಂಗ್‌ಗೆ ಕಾರಿನಲ್ಲಿ ಯುವ ಟೆನಿಸ್​ ಆಟಗಾರ ವಿಶ್ವ ದೀನದಯಾಳನ್​ ಪ್ರಯಾಣಿಸುತ್ತಿದ್ದರು.

ಈ ವೇಳೆ ಭೀಕರ ಸಂಭವಿಸಿದ ಭೀಕರ ಅಪಘಾತದಲ್ಲಿ ವಿಶ್ವ ದೀನದಯಾಳನ್ ಕೊನೆಯುಸಿರೆಳೆದಿದ್ದಾರೆ.

ಟ್ರಾಕ್ಸಿಯಲ್ಲಿ ವಿಶ್ವ ದೀನದಯಾಳನ್ ಮತ್ತು ಅವರ ತಂಡ ಪ್ರಯಾಣಿಸುತ್ತಿತ್ತು. ಮಾರ್ಗಮಧ್ಯೆ ಮೇಘಾಲಯದ ರಿ-ಭೋಯ್ ಎಂಬಲ್ಲಿ ಎದುರು ದಿಕ್ಕಿನಿಂದ ಬಂದ ವಾಹನವೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಳಿಕ ಟ್ಯಾಕ್ಸಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಟ್ಯಾಕ್ಸಿ ನಜ್ಜುಗುಜ್ಜಾಗಿದ್ದು, ಚಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಗಂಭೀರ ಗಾಯಗೊಂಡಿದ್ದ ವಿಶ್ವ ದೀನದಯಾಳನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ ಬದುಕಲಿಲ್ಲ.

ರಮೇಶ್ ಸಂತೋಷ್ ಕುಮಾರ್, ಅವಿನಾಶ್ ಪ್ರಸನ್ನಜಿ ಮತ್ತು ಕಿಶೋರ್ ಕುಮಾರ್ ಗಂಭೀರ ಗಾಯಗೊಂಡಿದ್ದಾರೆ ಎಂದು ಭಾರತ ಟೇಬಲ್ ಟೆನಿಸ್ ಫೆಡರೇಷನ್ ತಿಳಿಸಿದೆ.

ರಾಷ್ಟ್ರೀಯ ಟೂರ್ನಿಗಳಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿರುವ ವಿಶ್ವ ಅವರು ಅಂತಾರಾಷ್ಟ್ರೀಯ ಟೂರ್ನಿಗಳಲ್ಲೂ ಪದಕ ಗಳಿಸಿದ್ದಾರೆ. ಇದೇ 27ರಿಂದ ಆಸ್ಟ್ರಿಯಾದ ಲಿನ್ಜ್‌ನಲ್ಲಿ ನಡೆಯಲಿರುವ ಡಬ್ಲ್ಯುಟಿಟಿ ಯೂತ್ ಕಂಟೆಂಡರ್‌ನಲ್ಲಿ ಅವರು ಪಾಲ್ಗೊಳ್ಳಬೇಕಾಗಿತ್ತು.

Leave a Reply