ಯುವ ಸಂಪತ್ತು ಸಮಾಜಮುಖಿಯಾಗಿದ್ದಾಗ ದೇಶವು ಬೆಳಗುತ್ತದೆ – ಶಾಸಕ ಎಸ್. ಅಂಗಾರ

Featured, ದಕ್ಷಿಣ ಕನ್ನಡ

ವರದಿ : ಲೋಕೇಶ್ ಗುಡ್ಡೆಮನೆ

ಸುಳ್ಯ, ಮಾರ್ಚ್ 18 : ಭಾರತ ಬದಲಾಗಬೇಕಿದ್ದರೆ ಬರಿ ಮಾತನಾಡುವುದರಿಂದ ಸಾಧ್ಯವಿಲ್ಲ. ಭಾವನಾತ್ಮಕ ಅಭಿಮಾನವು ಬೇಕು. ಯುವ ಸಂಪತ್ತು ಸಮಾಜಮುಖಿಯಾಗಿದ್ದಾಗ ದೇಶವು ಬೆಳಗುತ್ತದೆ ಎಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದ್ದಾರೆ.

ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಮಂಗಳೂರು, ಯುವಜನ ಸಂಯುಕ್ತ ಮಂಡಳಿ ಸುಳ್ಯ, ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆ ಸುಳ್ಯ, ಸರಕಾರ ಪ.ಪೂ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ ಇದರ ಆಶ್ರಯದಲ್ಲಿ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾ ಭವನದಲ್ಲಿ ನಡೆದ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಯುವ ಜನತೆಗೆ ದೇಶದ ಬಗ್ಗೆ ಅಭಿಮಾನ ಮೂಡಬೇಕು. ಯುವಕರು ಸಮಾಜ ಮುಖಿ ಆದಾಗ ಸಮಾಜ ಮತ್ತು ದೇಶ ಅಭಿವೃದ್ದಿ ಹೊಂದುತ್ತದೆ ಎಂದು ಹೇಳಿದರು.

 

ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ತೇಜಸ್ವಿ ಕಡಪಳ, ಜಿಲ್ಲಾ ಸಾಂಘಿಕ ಪ್ರಶಸ್ತಿ ಪುರಸ್ಕೃತ ಬೆಳ್ಳಾರೆ ಸ್ನೇಹಿತರ ಕಲಾ ಸಂಘ ಮತ್ತು ರಾಜ್ಯ ಯುವಜನ ಮೇಳದಲ್ಲಿ ಪ್ರಶಸ್ತಿ ಪಡೆದ ಕಾಯರ್ತೋಡಿ ಮಿತ್ರ ಬಳಗದವರನ್ನು ಸನ್ಮಾನಿಸಲಾಯಿತು. ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಅಭಿನಂದನಾ ಭಾಷಣ ಮಾಡಿದರು. ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಪನ್ನೆ ಸ್ವಾಗತಿಸಿದರು. ನೆಹರೂ ಯುವ ಕೇಂದ್ರದ ಯುವ ಸಮನ್ವಯಧಿಕಾರಿ ವಿಫ್ರೆಡ್ ಡಿಸೋಜಾ ಪ್ರಸ್ತಾವನೆಗೈದರು. ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ, ಯುವಜನ ಸಂಯುಕ್ತ ಮಂಡಳಿ ಕಾರ್ಯದರ್ಶಿ ಆರ್.ಕೆ. ಮಹಮ್ಮದ್, ಕಾರ್ಯಕ್ರಮ ಸಂಯೋಜಕ ಪ್ರವೀಣ್ ಕುಮಾರ್ ಎ.ಎಂ. ವೇದಿಕೆಯಲ್ಲಿದ್ದರು.

ಸಮಾರಂಭದಲ್ಲಿ ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮತದಾನ ಜಾಗೃತಿ ಕುರಿತು ಪ್ರಮಾಣ ವಚನ ಬೋಧಿಸಿದರು. ತಾಲೂಕಿನ ವಿವಿಧ ಸಂಘ ಸಂಸ್ಥೆಗಳಿ ಕ್ರೀಡೋಪಕರಣ ವಿತರಿಸಲಾಯಿತು. ನಿರ್ಮಾಲಾ ಭಾರತ ನಿರ್ಮಾಣ, ಸ್ವ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ದಿ, ನಗದು ರಹಿತ ವ್ಯವಹಾರ ಮತ್ತಿತ್ತರ ವಿಚಾರಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.