ರಾಯರ ಊರಿಗೆ ಬಂದ ಆಂಜನೇಯ
ರಾಯಚೂರು: ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಹೊರಟಿದ್ದ ಮೂವತ್ತಮೂರು ಅಡಿ ಎತ್ತರದ ಏಕಶಿಲಾ ಆಂಜನೇಯ ದೇವರ ವಿಗ್ರಹ ಮಂತ್ರಾಲಯಕ್ಕೆ ತಲುಪಿದೆ.
ಶ್ರೀ ರಾಘವೇಂದ್ರಸ್ವಾಮಿ ಮಠದಿಂದ ಪ್ರತಿಷ್ಠಾಪಿಸಲು ಉದ್ದೇಶಿಸಿರುವ 33 ಅಡಿ ಎತ್ತರದ ಏಕಶಿಲಾ ಆಂಜನೇಯ ವಿಗ್ರಹಕ್ಕೆ ಮಂತ್ರಾಲಯದಲ್ಲಿ ಬುಧವಾರ ಭವ್ಯ ಸ್ವಾಗತ ನೀಡಲಾಯಿತು.
ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ಎಮ್ಮಿಗನೂರು ರಸ್ತೆಯಲ್ಲಿರುವ ಬಸ್ ನಿಲ್ದಾಣ ಬಳಿ ವಿಗ್ರಹಕ್ಕೆ ಪೂಜೆ ನೆರವೇರಿಸಿ ಬರಮಾಡಿಕೊಂಡರು. ನಂತರ ಗ್ರಾಮದ ಮುಖ್ಯರಸ್ತೆಯಲ್ಲಿ ಭಜನೆ ಸಂಕೀರ್ತನೆ, ಮಂಗಳ ವಾದ್ಯ ಮೇಳದೊಂದಿಗೆ ವಿಗ್ರಹವನ್ನು ಶ್ರೀಮಠದ ಗೋಶಾಲೆ ಬಳಿಯ ನೂತನ ವಿದ್ಯಾಪೀಠದವರೆಗೆ ಮೆರವಣಿಗೆಯಲ್ಲಿ ತರಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ಆಂಜಿನೇಯ ದೇವರ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
