ರಿಕ್ಷಾ ಅಪಘಾತದಲ್ಲಿ ಸಿಲುಕಿದ್ದ ಮಗುವಿನ ಶಸ್ತ್ರಚಿಕಿತ್ಸೆಗೆ ಕಾಪು ಕುಲಾಲ ಯುವ ವೇದಿಕೆಯಿಂದ ಧನ ಸಹಾಯ – Vishwanews24

Featured, ಉಡುಪಿ

ಕಾಪು. : ಸಂಬಂಧಿಕರ ಮನೆಯಲ್ಲಿ ನಡೆಯಲಿರುವ ರಾತ್ರಿಯ ಕಾರ್ಯಕ್ರಮಕ್ಕೆ ರಿಕ್ಷಾದಲ್ಲಿ ಹೊರಟಿದ್ದ ಕುಟುಂಬವೊಂದು ರಿಕ್ಷಾ ಅಪಘಾತದಲ್ಲಿ ಸಿಲುಕಿ ರಿಕ್ಷಾದಲ್ಲಿದ್ದ ಪುಟ್ಟ ಮಗುವಿನ ಕಾಲೊಂದು ತೀವ್ರ ತರದಲ್ಲಿ ಜಖಂಗೊಂಡಿತ್ತು. ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಮಗುವನ್ನು ಕೊಂಡೊಯ್ದಾಗ ಜಜ್ಜಲ್ಪಟ್ಟ ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ವೈದ್ಯರು ಸೂಚನೆ ನೀಡಿದರು. ಕೂಲಿ ಕೆಲಸ ಮಾಡುತಿದ್ದ ಮಗುವಿನ ಪಾಲಕರು ಶಸ್ತ್ರ ಚಿಕಿತ್ಸೆಗೆ ತಗಲುವ ದುಬಾರಿ ವೆಚ್ಚವನ್ನು ಕೇಳಿಯೇ ಹೌಹಾರಿದ್ದರು. ಮಗುವಿನ ಭವಿಷ್ಯವನ್ನು ನೆನೆದು ಕಣ್ಣೀರಾದ ಪಾಲಕರು ಕಾಪು ಕುಲಾಲ ಯುವ ವೇದಿಕೆಗೆ ಸಹಕಾರಕ್ಕಾಗಿ ವಿನಂತಿಸಿಕೊಂಡರು.

ಕಾಪು ಕುಲಾಲ ಯುವ ವೇದಿಕೆಯು ಪುಟ್ಟ ಮಗು ದೈವಿಕ್ ನ ವಸ್ತುಸ್ಥಿತಿ ವಿವರಣೆಯ ಸಚಿತ್ರ ವರದಿಯೊಂದಿಗೆ ಸಹೃದಯಿ ದಾನಿಗಳಿಂದ ಧನ ಸಹಾಯಕ್ಕಾಗಿ ಮಾಡಿದ ಕಳಕಳಿಯ ಮನವಿಗೆ ಶೀಘ್ರ ಗತಿಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದ ಪರಿಣಾಮ ಸಂಗ್ರಹವಾದ ತುರ್ತು ಸಹಾಯ ಧನವನ್ನು ದೈವಿಕ್ ನ ಪಾಲಕರಿಗೆ ದಿನಾಂಕ 17/ 02/ 2019 ರಂದು ಹಸ್ತಾಂತರಿಸಲಾಯಿತು.

ಸಹೃದಯಿ ಬಂಧುಗಳು ತಮ್ಮ ಶಕ್ತ್ಯಾನುಸಾರ ನೀಡಿದ ಧನ ಸಹಾಯ ₹ 39000/- ಸಾವಿರವನ್ನು ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರಿಸುವ ಸಂದರ್ಭ ಉದಯ ಕುಲಾಲ್ ಕಳತ್ತೂರು ಅಧ್ಯಕ್ಷರು ಕಾಪು ಕುಲಾಲ ಯುವವೇದಿಕೆ, ಸಂದೀಪ್ ಬಂಗೇರ ಶಂಕರಪುರ ಉಪಾಧ್ಯಕ್ಷರು ಕುಲಾಲ ಸಂಘ(ರಿ) ಕಾಪುವಲಯ, ಧೀರಜ್ ಕುಲಾಲ್ ಕುತ್ಯಾರು, ದಿನೇಶ್ ಶಂಕರಪುರ,ರವಿರಾಜ್ ಆಚಾರ್ಯರವರು ಉಪಸ್ಥಿತರಿದ್ದರು.

ಸಹಾಯ ಧನ ಸ್ವೀಕರಿಸಿದ ದೈವಿಕ್ ನ ಪಾಲಕರು ಧನ್ಯತಾ ಭಾವದಲಿ ಸಹೃದಯಿ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಹಾಗೂ ತುರ್ತು ಸಹಾಯಕ್ಕೆ ಕೈ ಜೋಡಿಸಿದ ಸರ್ವರಿಗೂ ಕಾಪು ಕುಲಾಲ ಯುವ ವೇದಿಕೆಯ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದರು.

ಇನ್ನೂ ಹೆಚ್ಚಿನ ಧನ ಸಹಾಯದ ಅಗತ್ಯವಿರುವ ಕಾರಣ ಸಹಾಯ ಧನ ನೀಡುವ ಸಹೃದಯರು ಮಗುವಿನ ತಂದೆ ಸಂತೋಷ್ ಕುಲಾಲ್ ರವರನ್ನು ಸಂಪರ್ಕಿಸಿ ನೀಡಬಹುದು

(9945713444)