ಲಗ್ನಪತ್ರಿಕೆ ನೀಡುವ ನೆಪದಲ್ಲಿ ಸುಲಿಗೆ ; ಸಾರ್ವಜನಿಕರಿಂದ ಬಿತ್ತು ಗೂಸಾ- Vishwanews24

Featured, ಉಡುಪಿ

ಉಡುಪಿ,: : ಮದುವೆ ಆಮಂತ್ರಣ ನೀಡೋ ನೆಪದಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ ಸುಲಿಗೆ ಮಾಡಲು ಯತ್ನಿಸಿದ ಕೊಲೆ ಆರೋಪಿಗಳಿಗೆ ಸಾರ್ವಜನಿಕರು ಸಖತ್ ಗೂಸಾ ನೀಡಿ ಪೋಲಿಸರಿಗೆ ಒಪ್ಪಿಸಿದ ಘಟನೆ ಕುಂದಾಪುರ ಜಿ .ಎಂ ರೋಡ್ ಮಸೀದಿ ಬಳಿ‌ ನಡೆದಿದೆ. ಕಾಪು ಮಜೂರಿನ ಮಹಿಳೆ ಫಿರ್ದೋಸ್ (29) ಕಾರ್ಕಳ ಕುಂಟಲಪಾಡಿ ನಿವಾಸಿ ಮಹಮ್ಮದ್ ಆಸೀಫ್ ಬಂಧಿತ ಆರೋಪಿಗಳು.

ಆಸೀಫ್ ಕುಂದಾಪುರ ಜಿ.ಎಂ.ರೋಡ್ ನಿವಾಸಿ ಮೆಹರುನ್ನೀಸಾ(74) ಕುಟುಂಬಕ್ಕೆ ಡ್ರೈವರ್ ಆಗಿದ್ದ. ಹಳೆಯ ಪರಿಚಯದ ನೆಪದಲ್ಲಿ ಕುಟುಂಬದ ಮತ್ತು ಮನೆಯ ಆಗು ಹೋಗುಗಳ ಮಾಹಿತಿಯನ್ನು ತಿಳಿದುಕೊಂಡಿದ್ದ. ಇಂದು ಶುಕ್ರವಾರ ಆದ ಕಾರಣ ಮೆಹರುನ್ನೀಸಾ ಅವರ ಪತಿ ಅಬು ಮಹಮ್ಮದ್ ಮಸೀದಿಗೆ ತೆರಳಿದ್ದರು. ಇದೇ ಸಂದರ್ಭ ಮದುವೆ ಆಮಂತ್ರಣ ಪತ್ರಿಕೆ ಕೊಡೋ ನೆಪದಲ್ಲಿ ಮಧ್ಯಾಹ್ನದ ಹೊತ್ತಿಗೆ ಮನೆಗೆ ಬಂದ ಇಬ್ಬರು ಆರೋಪಿಗಳು ಮೆಹರುನ್ನೀಸಾ ಅವರ ಕೈಯನ್ನು ಕಟ್ಟಿ ಕುತ್ತಿಗೆಯಲ್ಲಿದ್ದ ಚಿನ್ನದ ಒಡವೆಗಳನ್ನು ಸುಲಿಗೆ ಮಾಡಲು ಯತ್ನಿಸಿದ್ದಾರೆ. ಇದೇ ಸಂದರ್ಭ ಮೆಹರುನ್ನೀಸಾ ಬೊಬ್ಬೆಯನ್ನು ಕೇಳಿದ ಸಾರ್ವಜನಿಕರು ಆಗಮಿಸಿ ಇಬ್ಬರಿಗೂ ಚೆನ್ನಾಗಿ ಗೂಸಾ ನೀಡಿ ಪೋಲಿಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಮಹಿಳೆ ಫಿರ್ದೋಸ್ ಆಸೀಫ್ ಜೊತೆ ಸೇರಿ ತನ್ನ ಪತಿ ಸಮೀರ್ ನನ್ನು ತಮಿಳುನಾಡಿಗೆ ಕರೆದುಕೊಂಡು ಮೋಸದಿಂದ ಕೊಲೆ ಗೈದ ಆರೋಪಿಗಳಾಗಿದ್ದಾರೆ.ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ,ಕಳೆದ ತಿಂಗಳಷ್ಟೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಮತ್ತೆ ಇಬ್ಬರು ಸೇರಿ ಈ ಕ್ರತ್ಯ ಎಸಗಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.