ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿವಾದ ಪ್ರಸ್ತಾಪಿಸಿದರೆ ಪಾಕಿಸ್ತಾನದ ಮಾನ ಹರಾಜಾಗುತ್ತದೆ , ಭಾರತದ ಗೌರವ, ಘನತೆ ಮತ್ತಷ್ಟು ಹೆಚ್ಚಾಗುತ್ತದೆ : ಸೈಯದ್ ಅಕ್ಬರುದ್ದೀನ್ -Vishwanews24
ಯುನೈಟೆಡ್ ನೇಷನ್ಸ್: ಮುಂದಿನ ವಾರ ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿದರೆ ಪಾಕಿಸ್ತಾನದ ಮಾನ ಹರಾಜಾಗುತ್ತದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೈಯದ್ ಅಕ್ಬರುದ್ದೀನ್ ದೇಶದ ವಿಚಾರದಲ್ಲಿ ಜಾಗತಿಕ ವೇದಿಕೆಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ದೇಶಗಳು ಅರ್ಥ ಮಾಡಿಕೊಳ್ಳಬೇಕು, ಪಾಕಿಸ್ತಾನ ಮುಂದಿನ ವಾರ ಕಾಶ್ಮೀರ ವಿವಾದ ಪ್ರಸ್ತಾಪಿಸಿದರೆ ಅದರ ಮಟ್ಟ ಕೆಳಗಿಳಿಯುತ್ತದೆ, ಭಾರತ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತದೆ. ಪ್ರಧಾನ ಮಂತ್ರಿಗಳು ನಡೆಸುವ ಸಭೆಗಳು, ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಭಾರತದ ಸ್ಥಾನ ವಿಶ್ವಸಂಸ್ಥೆಯಲ್ಲಿ ಹೆಚ್ಚಾಗುತ್ತದೆ ಎಂದರು.
ಪಾಕಿಸ್ತಾನ ಏನು ಮಾಡುತ್ತದೆ ಎಂಬುದು ಅದಕ್ಕೆ ಬಿಟ್ಟದ್ದು. ಪಾಕಿಸ್ತಾನ ಹೇಗೆ ಭಯೋತ್ಪಾದನೆಯ ತಾಣವಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಈಗ ದ್ವೇಷದ ಮಾತುಗಳ ಮೂಲಕ ತಮ್ಮ ಸ್ಥಾನಮಾನವನ್ನು ಕೆಳಹಂತಕ್ಕೆ ತರಬೇಕೆಂದರೆ ತಂದುಕೊಳ್ಳಲಿ ಅದು ಅವರ ಇಷ್ಟ, ದ್ವೇಷ, ವಿಷಯ ಮಾತುಗಳು, ಬರಹಗಳು ಹೆಚ್ಚು ಸಮಯ ಬಾಳುವುದಿಲ್ಲ ಎಂದರು.
