ಸಂಕ್ರಾಂತಿ ನಂತರ ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇರುವುದಿಲ್ಲ : ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಭವಿಷ್ಯ -Vishwanews24
ಸಂಕ್ರಾಂತಿ ನಂತರ ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇರುವುದಿಲ್ಲ : ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಭವಿಷ್ಯ -Vishwanews24
ಶಿವಮೊಗ್ಗ : ಸಿಎಂ ಬಿ.ಎಸ್. ಯಡಿಯೂರಪ್ಪಗೆ ಸಿಗಂದೂರು ದೇವಿಯ ಶಾಪ ತಟ್ಟಿದ್ದು, ಸಂಕ್ರಾಂತಿ ನಂತರ ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನದಲ್ಲಿ ಬದಲಾವಣೆ ಆಗುತ್ತೆ ಎಂದು ಭವಿಷ್ಯ ಹೇಳುತ್ತಿಲ್ಲ. ತನಗೆ ಬಂದ ಮಾಹಿತಿ ಪ್ರಕಾರ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಪ್ರಯತ್ನಗಳು ನಡೆಯುತ್ತಿವೆ. ಜನವರಿ 16 ರ ನಂತರ ಅವರು ಅಧಿಕಾರದಲ್ಲಿ ಮುಂದುವರಿಯುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.
ಸಿಗಂದೂರು ಕ್ಷೇತ್ರದ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿ ಯಡಿಯೂರಪ್ಪ ದೇವಿಯ ಶಾಪಕ್ಕೆ ತುತ್ತಾಗಿದ್ದಾರೆ. ಹೀಗಾಗಿಯೇ ಅವರ ವಿರುದ್ಧ ಮತ್ತೊಂದು ಡೀನೋಟಿಫಿಕೇಶನ್ ಪ್ರಕರಣ ಬಂದಿದೆ. ಇದು ದೇವಿಯ ಶಾಪ ತಟ್ಟಿರುವುದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.
ಹೊಸ ವರ್ಷಾಚರಣೆ ಸರ್ಕಾರ ನಿಷೇಧ ಹೇರಿರುವುದು ಖಂಡನೀಯ. ಯುವ ಪೀಳಿಗೆಯ ಸಂಭ್ರಮಾಚರಣೆಗೆ ಕಡಿವಾಣ ಹಾಕುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಆರ್ ಎಸ್ಎಸ್ ಪ್ರೇರಿತ ಸಿದ್ಧಾಂತಗಳನ್ನು ಸರ್ಕಾರ ಜಾರಿಗೊಳಿಸಲು ಮುಂದಾಗಿದೆ. ಇದರ ಭಾಗವಾಗಿ ಕ್ರಿಸ್ಮಸ್ ಆಚರಣೆಗೆ ಗುಂಪು ಗೂಡುವುದನ್ನು ನಿಷೇಧಿಸಿತು., ಇದೀಗ ಯುವಕರ ಹೊಸ ವರ್ಷಾಚರಣೆಗೆ ಕಡಿವಾಣ ಹಾಕುತ್ತಿದೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ ಎಂದು ಟೀಕಿಸಿದರು.
ಆರ್ ಆರ್ ನಗರ ಉಪ ಚುನಾವಣೆ ವೇಳೆಯಲ್ಲಿ 20 ಸಾವಿರ ಜನರ ಸೇರಿಸಿ ಸಭೆ, ಮೆರವಣಿಗೆ ಮಾಡಿದರು. ಆವಾಗ ಸರ್ಕಾರಕ್ಕೆ ಕೋವಿಡ್ ನೆನಪು ಇರಲಿಲ್ಲಲ್ವಾ, ಯಡಿಯೂರಪ್ಪ ಏನು ತಜ್ಞರೇ. ಯಾರಿಗೂ ಹೇಳದೆ, ಕೇಳದೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿದರು. ಆದರೆ ಮರುದಿನವೇ ಅದನ್ನು ಹಿಂತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ ಎಂದರು.
