ಸಂಚಾರಿ ನಿಯಮ ಉಲ್ಲಂಘನೆ : ಮೊದಲ ದಿನವೇ 30 ಲಕ್ಷ ರೂ. ದಂಡ ವಸೂಲಿ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಪರಿಷ್ಕೃತ ಸಂಚಾರಿ ನಿಯಮ ಉಲ್ಲಂಘನೆ ದಂಡ ಜಾರಿಯಾದ ಮೊದಲ ದಿನವೇ 30 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಅಂತ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಹೇಳಿದ್ದಾರೆ.

ಅವರು ಗುರುವಾರ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ಇನ್ನು ಇದೇ ವೇಳೆ ಅವರು ದಂಡ ಪರಿಷ್ಕರಣೆ ಮಾಡಿರುವುದು ಆದಾಯ ಸಂಗ್ರಹಕ್ಕಲ್ಲ, ಜನರ ಸುರಕ್ಷತೆ ದೃಷ್ಟಿಯಿಂದ. ಮದ್ಯ ಸೇವಿಸಿ ಚಾಲನೆ ಮಾಡಿದರೆ ಪ್ರಾಣಹಾನಿ ಉಂಟಾಗುತ್ತದೆ ಎಂಬುದು ಗೊತ್ತಿದ್ದರೂ ತಪ್ಪು ಮಾಡುತ್ತಾರೆ. ಏಕಮುಖ ಸಂಚಾರ, ರಾಂಗ್ ಸೈಡ್​ನಲ್ಲಿ ವಾಹನ ಚಾಲನೆ ಮಾಡುತ್ತಾರೆ. ಹೆಲ್ಮೆಟ್​ರಹಿತ ಚಾಲನೆ ಪ್ರಾಣ ಹಾನಿಗೆ ಕಾರಣವಾಗಿದೆ.

ಈ ಸಂಗತಿ ಗೊತ್ತಿದ್ದರೂ ಕಾನೂನು ಉಲ್ಲಂಘಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಜನರಿಗೆ ಬುದ್ಧಿ ಹೇಳುವ ಅಗತ್ಯ ಇಲ್ಲ ಅಂತ ಹೇಳಿದರು ಇನ್ನು ವಾಹನ ನಿಲುಗಡೆ ನೀತಿ ಜಾರಿಗೊಳಿಸುವಂತೆ ಕೋರಿ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಶಾಲಾ- ಕಾಲೇಜು, ಸಿಬಿಡಿ ಮತ್ತು ಜನವಸತಿ ಪ್ರದೇಶಗಳಲ್ಲಿ ವಾಹನಗಳನ್ನು ರಸ್ತೆಗಳಲ್ಲಿ ಅಡ್ಡಾದಿಡ್ಡಿ ನಿಲುಗಡೆ ಮಾಡದಿರಲು ನೀತಿ ರೂಪಿಸುವಂತೆ ಬಿಬಿಎಂಪಿಗೆ ಮನವಿ ಮಾಡಲಾಗಿದೆ.

ಸಿಬಿಡಿ ವ್ಯಾಪ್ತಿಯಲ್ಲಿ ಇರುವ ಶಾಲೆ-ಕಾಲೇಜು ಆಡಳಿತ ಮಂಡಳಿ ತಮ್ಮ ವಾಹನಗಳಿಗೆ ಶಾಲಾ ಆವರಣದಲ್ಲಿ ರ್ಪಾಂಗ್​ವ್ಯವಸ್ಥೆ ಮಾಡಲಿ. ರಸ್ತೆಬದಿ ನಿಲ್ಲಿಸಿ ಜನರಿಗೆ ತೊಂದರೆ ಕೊಟ್ಟರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಜಾಗ ಇಲ್ಲದಿದ್ದರೆ ನಗರ ಬಿಟ್ಟು ಹೊರಗಡೆ ಹೋಗಿ ಎಂದು ಶಾಲಾ ಆಡಳಿತ ಮಂಡಳಿಗಳಿಗೆ ಭಾಸ್ಕರ್ ರಾವ್ ಖಡಕ್ ವಾರ್ನಿಂಗ್ ನೀಡಿದರು.