ಸಂಧಾನದ ಮೂಲಕ ರಾಮ ಜನ್ಮಭೂಮಿ ಅಯೋಧ್ಯೆ ವಿವಾದವನ್ನು ಬಗೆಹರಿಸಿ : ಸುಪ್ರೀಂ ಆದೇಶ- Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ಹಲವು ದಶಕಗಳಿಂದ ಪರಿಹಾರ ಕಾಣದ ಸಮಸ್ಯೆಯಾಗಿರುವ ರಾಮಜನ್ಮಭೂಮಿ ವಿವಾದಕ್ಕೆ ಇದೀಗ ತಾರ್ಕಿಕ ಅಂತ್ಯವೊಂದು ಲಭಿಸುವ ಸೂಚನೆ ಸಿಕ್ಕಿದೆ. ಜನ್ಮಭೂಮಿ ವಿವಾದವನ್ನು ದಾವೆದಾರರು ಪರಸ್ಪರ ರಾಜೀ ಸಂಧಾನದ ಮೂಲಕವೇ ಬಗೆಹರಿಸಿಕೊಳ್ಳುವಂತೆ ದೇಶದ ಉಚ್ಛ ನ್ಯಾಯಾಲಯದ ಸಾಂವಿಧಾನಿಕ ಪೀಠವು ಇಂದು ಮಹತ್ವದ ತೀರ್ಪು ನೀಡಿದೆ.

ಇನ್ನೊಂದು ವಾರದಲ್ಲಿ ಸಂಧಾನ ಪ್ರಕ್ರಿಯೆ ಶುರುವಾಗಬೇಕು ಹಾಗೂ 2 ತಿಂಗಳ ಒಳಗೆ ಸಂಧಾನ ಪ್ರಕ್ರಿಯೆ ಅಂತ್ಯವಾಗಬೇಕು. ಉತ್ತರ ಪ್ರದೇಶದ ಫೈಜಾಬಾದ್ ನಲ್ಲಿ ಸಂಧಾನ ಮಾತುಕತೆ ನಡೆಸಿ ಇನ್ನೊಂದು ತಿಂಗಳಲ್ಲಿ ಸಂಧಾನದ ಫಲಶೃತಿ ಬಗ್ಗೆ ನಮಗೆ ಹೇಳಬೇಕು ಎಂದು ಖಲೀಫುಲ್ಲಾ ಸಂಧಾನಕಾರರ ತಂಡಕ್ಕೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಸೂಚಿಸಿದೆ.

ಕಾಲಮಿತಿಯಲ್ಲಿ ರಾಮ ಜನ್ಮಭೂಮಿ – ಬಾಬರಿ ಮಸೀದಿ ಜಮೀನು ವಿವಾದವನ್ನು ಸಂಧಾನ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ನ ಸಾಂವಿಧಾನಿಕ ಪೀಠ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಉತ್ತರಪ್ರದೇಶದ ಫೈಸಲಾಬಾದ್ ನಲ್ಲಿ ಈ ಸಂಧಾನ ಪ್ರಕ್ರಿಯೆ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ನ್ಯಾಯಾಲವು ತಾನು ನಿಯಮಿಸುವ ಸಂಧಾನಕಾರರ ನೇತೃತ್ವದಲ್ಲಿ ಮತ್ತು ತನ್ನ ನಿಗಾವಹಣೆಯಲ್ಲಿ ಈ ಪ್ರಕ್ರಿಯೆ ನಡೆಯಬೇಕು ಎಂದು ಸ್ಪಷ್ಟಪಡಿಸಿದೆ.