ಸತ್ಯದ ಕಮಲ, ಸಜ್ಜನರ ಮೊಗದಲ್ಲಿ ನಗು ಶೀಘ್ರ : ಬಿಎಸ್‌ವೈ

Featured, ರಾಜ್ಯ ನ್ಯೂಸ್

ಬಿ.ಎಸ್. ಯಡಿಯೂರಪ್ಪ. ಈ ರಾಜ್ಯ ಕಂಡಂತಹ ಅಗ್ರಗಣ್ಯ ನಾಯಕರಲ್ಲಿ ಒಬ್ಬರು. ಹುಟ್ಟು ಹೋರಾಟ ಹಾಗು ರೈತ ಪರ ಕಾಳಜಿಯಿಂದಲೇ ರಾಜ್ಯದ ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಗೇರಿದವರು. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ಕೇವಲ ಎರಡು ಸ್ಥಾನದಿಂದ ಅಧಿಕಾರಕ್ಕೆ ಏರಿಸಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ. ಎಂದಿಗೂ ಯಾರಿಗೂ ತಲೆಬಾಗದೆ ತನ್ನ ಹಠ, ಹೋರಾಟ, ಛಲದಿಂದಲೇ ರಾಜ್ಯದ ಮನೆ ಗೆದ್ದಂತಹ ನಾಯಕ ಯಡಿಯೂರಪ್ಪನವರು.

ರಾಜಕೀಯದಲ್ಲಿಯಶಸ್ಸಿನ ಉತ್ತುಂಗ ತಲುಪಿ ಹಲವಾರು ಕಠಿಣ ಸವಾಲುಗಳನ್ನು ಎದುರಿಸಿ ರಾಜ್ಯದ ದುರಂತ ನಾಯಕ ಎನಿಸಿಕೊಂಡಿದ್ದು ಈಗ ಇತಿಹಾಸ. ರಾಜ್ಯದ ಜನರು ಯಡಿಯೂರಪ್ಪನವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ಆಸೆಯಿಂದ ಭಾರತೀಯ ಜನತಾ ಪಕ್ಷಕ್ಕೆ ಈ ಬಾರಿಯ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆಲ್ಲಿಸಿಕೊಟ್ಟರು. ಆದರೆ ದುರದೃಷ್ಟವಷಾತ್ ಕೊನೆ ಕ್ಷಣದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು.

ಕೇವಲ ಮೂರು ದಿನದ ಮಟ್ಟಿಗೆ ರಾಜ್ಯವನ್ನು ಆಳ ಬೇಕಾಯಿತು. ರಾಜಕೀಯ ಬದ್ಧ ವೈರಿಗಳು ಯಡಿಯೂರಪ್ಪನವರ ವಿರುದ್ಧ ಕೈ ಜೋಡಿಸಿದ ಪರಿಣಾಮ ಬಿಜೆಪಿ ಕಾರ್ಯಕರ್ತರು ಆಘಾತಕ್ಕೊಳಗಾಗ ಬೇಕಾಯಿತು. ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಆದರೂ ಯಡಿಯೂರಪ್ಪನವರು ಧೃತಿಗೆಟ್ಟಿಲ್ಲ. ವಿಧಾನಸಭೆಯಲ್ಲಿ ಯಡಿಯೂರಪ್ಪನವರು ಮಾಡಿದ ವಿದಾಯ ಭಾಷಣ ರಾಜ್ಯದ ಜನರ ಮನಸ್ಸನ್ನು ಮತ್ತೊಮ್ಮೆ ಗೆದ್ದಿದೆ. ವಿರೋಧ ಪಕ್ಷಗಳ ಅವಕಾಶವಾದಿ ಹಾಗೂ ಷಡ್ಯಂತ್ರ ರಾಜಕಾರಣವನ್ನು ಇಡೀ ರಾಜ್ಯದ ಜನರ ಮುಂದೆ ಯಡಿಯೂರಪ್ಪನವರು ವಿಧಾನಸೌಧದಲ್ಲಿ ತೆರೆದಿಟ್ಟಿದ್ದರು.

ನಾನಿನ್ನೂ ದಣಿದಿಲ್ಲ. ದಣಿಯುವುದೂ ಇಲ್ಲ. ಧಣಿ ಎಂದು ನೀವು ಕರೆದ ಮೇಲೆ ನಿಮ್ಮ ಧ್ವನಿಯಾಗಿ ಇರುವುದೇ ನನ್ನ ಕಾಯಕ. ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸಾಲು ಸಾಲು ರೈತರು ಆತ್ಮಹತ್ಯೆ ಮಾಡಿಕೊ‌ಂಡಾಗ ನನಗೆ ಸಹಿಸಲಾಗಲಿಲ್ಲ. ರೈತರು ಗರ್ವದಿಂದ ‘ನಾನು ರೈತ’ ಎಂದು ಹೇಳಿಕೊಳ್ಳುವ ಹಾಗೆ ಮಾಡುವುದು ನನ್ನ ಸರ್ಕಾರದ ಆಶಯವಾಗಿತ್ತು. ಈಗಲೂ ಹಾಗೇ ಇದೆ. ಖುದ್ದು ಕೆಲಸ ಮಾಡಲಾಗದೇ ಇದ್ದರೂ ವಿರೋಧ ಪಕ್ಷದಲ್ಲಿ ಕುಳಿತು ಮಾಡಿಸುತ್ತೇನೆ. ಏಕೆಂದರೆ, ನಾನು ನಿಮ್ಮವನು, ನಿಮ್ಮಲ್ಲಿ ಒಬ್ಬನು.‌

ಯಾವ ಜನ್ಮದ‌ ಪುಣ್ಯವೋ ಏನೋ ನಿಮ್ಮಂಥ ಕಾರ್ಯಕರ್ತರು, ಬೆಂಬಲಿಗರನ್ನು, ಮನತುಂಬಿ ಹರಸುವ ಜನರನ್ನು ನಾನು ಪಡೆದಿದ್ದೇನೆ. ನಿಮ್ಮ ಪ್ರೀತಿಯನ್ನು ಸಂಪಾದಿಸಿದ್ದೇನೆ. ಗುಮಾಸ್ತನನ್ನು ನಾಯಕನನ್ನಾಗಿ ಮಾಡಿದವರು ನೀವು. ಈಗಲೂ ಅಷ್ಟೆ, ನೀವು ನನ್ನ ಕೈಬಿಟ್ಟಿಲ್ಲ. ಇನ್ನಷ್ಟು ಬಲಪಡಿಸಿದ್ದೀರಿ, ಗೆಲ್ಲಿಸಿದ್ದೀರಿ.‌ ಆದರೆ, ವಿರೋಧ ಪಕ್ಷಗಳ ಪ್ರಜಾಪ್ರಭುತ್ವ ವಿರೋಧಿ ತಂತ್ರ, ಕುತಂತ್ರಗಳಿಂದ ಸರ್ಕಾರ ರಚಿಸಲಾಗಲಿಲ್ಲ. ಆದರೇನಂತೆ? ನಾನು ಬದುಕಿರುವವರೆಗೂ ಹೋರಾಟ ಮಾಡುತ್ತಲೇ ಇರುತ್ತೇನೆ‌‌. ರೈತರಿಗಾಗಿ ಶ್ರಮಿಸುತ್ತಲೇ ಇರುತ್ತೇನೆ‌.

‘ಕೆಲ ತಿಂಗಳು ಮನೆ ಬಿಟ್ಟು ಬಿಜೆಪಿ ಪರವಾಗಿ ಕೆಲಸ ಮಾಡಿ’ ಎಂದು ಪರಿವರ್ತನಾ ಯಾತ್ರೆಯಲ್ಲಿ ನಾನು ಕೊಟ್ಟ ಕರೆಗೆ ನೀವೆಲ್ಲ ಬಂದಿದ್ದೀರ, ದುಡಿದಿದ್ದೀರ. ಅಂದು ನೀವು ಪಟ್ಟ ಶ್ರಮ, ಇಂದು ನೀವು ಹಾಕಿದ ಕಣ್ಣೀರು ಯಾವುದೂ ವ್ಯರ್ಥವಾಗುವುದಕ್ಕೆ ನಾನು ಬಿಡುವುದಿಲ್ಲ. ನೀವ್ಯಾರೂ ಎದೆಗುಂದಬೇಡಿ. ನೀವು ಧೈರ್ಯದಿಂದ ಇದ್ದರೆ ನನ್ನ ಧೈರ್ಯ ನೂರ್ಮಡಿಯಾಗುತ್ತದೆ.

ಸದ್ಯಕ್ಕೆ ಸ್ವಲ್ಪ ತಾಳ್ಮೆಯಿಂದಿರಿ. ಮನೆಯವರೊಂದಿಗೆ ಕಾಲ ಕಳೆಯಿರಿ. ಮತ್ತೆ ನಿಮ್ಮೊಂದಿಗೆ ಬರುತ್ತೇನೆ. ಸ್ವಸ್ಥ, ಸದೃಢ, ಸಮರ್ಥ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಒಟ್ಟಾಗಿ ಸಾಗೋಣ. ಮೊದಲೇ ಹೇಳಿದಂತೆ, ನಾನು ದಣಿದಿಲ್ಲ. ನಿಮಗಾಗಿ ಕೆಲಸ ಮಾಡುವುದೇ ನನ್ನ ಜೀವನದ ಧ್ಯೇಯ.