ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿ: ಪ್ರಮೋದ್‌ ಮುತಾಲಿಕ್ -Vishwanews24

Featured, ರಾಜ್ಯ ನ್ಯೂಸ್

ವಿಜಯಪುರ: ‘ರಾಮಮಂದಿರ ಕೆಡವಿ ಮತ್ತೆ ಅದೇ ಜಾಗದಲ್ಲಿ ಬಾಬರಿ ಮಸೀದಿ ನಿರ್ಮಿಸುತ್ತೇವೆ’ ಎಂಬ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಮುಸ್ಲಿಂ ‍ಪರ್ಸನಲ್‌ ಲಾ ಬೋರ್ಡ್)‌ಯನ್ನು ನಿಷೇಧಿಸಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಗಸ್ಟ್‌ 22ರಿಂದ ನಡೆಯಲಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡದಿದ್ದರೂ ಆಚರಿಸುವುದು ನಿಶ್ಚಿತ. ಸರ್ಕಾರ ಬೇಕಾದರೆ ನಮ್ಮನ್ನು ಬಂಧಿಸಲಿ, ಗಣೇಶನ ಮೂರ್ತಿಗಳನ್ನು ಬೇಕಾದರೆ ಸೀಜ್‌ ಮಾಡಲಿ ನೋಡಿಕೊಳ್ಳುತ್ತೇವೆ’ ಎಂದು ಮುತಾಲಿಕ್‌ ಸವಾಲು ಹಾಕಿದರು.

ಸಾರ್ವಜನಿಕ ಗಣೇಶ ಉತ್ಸವ ಆಚರಣೆಗೆ ಸರಕಾರ ಈವರೆಗೆ ಅವಕಾಶ‌ ನೀಡಿಲ್ಲ. ಆದರೆ, ಕೊವಿಡ್ ನಿಯಮಗಳ ಪ್ರಕಾರವೇ ಆಚರಣೆಗೆ ಅವಕಾಶ ನೀಡಬೇಕು. ಮಾಲ್ ಮತ್ತು ಬಾರ್ ಹಾಗೂ ಹೋಟೇಲುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿದರೆ ನಾವು ತೀರ್ಥ ಕೊಡುವುದಿಲ್ಲ. ಪ್ರಸಾದ ವಿತರಿಸುವುದಿಲ್ಲ. ಭಜನೆಯನ್ನೂ‌ ಮಾಡುವುದಿಲ್ಲ. ನಿಯಮದ ಪ್ರಕಾರವೇ ಸಾರ್ವಜನಿಕವಾಗಿ ಗಣೇಶ ಉತ್ಸವ ಆಚರಣೆ ಮಾಡುತ್ತೇವೆ. ಮಹಾರಾಷ್ಟ್ರ ಮಾದರಿಯಲ್ಲಿ ಸಾರ್ವಜನಿಕ ಗಣೇಶ ಉತ್ಸವಕ್ಕೆ ಅವಕಾಶ ನೀಡಬೇಕು. ಒಂದು ವೇಳೆ ಅವಕಾಶ ನೀಡದಿದ್ದರೆ ಆಚರಣೆ ನಿಲ್ಲಿಸುವುದಿಲ್ಲ. ಬೇಕಿದ್ದರೆ ಬಂಧಿಸಿ ಎಂದು ಅವರು ಸವಾಲು ಹಾಕಿದರು.

ಸಾರ್ವಜನಿಕ‌ ಗಣೇಶ ಉತ್ಸವ ಆಚರಣೆ ಕುರಿತು‌ ಸರಕಾರ ಈ ಕೂಡಲೇ ಹೇಳಿಕೆ ಬಿಡುಗಡೆ ಮಾಡಬೇಕು. ಸಾರ್ವಜನಿಕ ದೇವಸ್ಥಾನಗಳನ್ನು ಓಪನ್ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಸಾರ್ವಜನಿಕ ಗಣೇಶ ಉತ್ಸವಕ್ಕೆ ಯಾಕೆ ವಿರೋಧ ಮಾಡುತ್ತಿದ್ದೀರಿ? ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಓಪಿ) ಗಣೇಶ ಮೂರ್ತಿಗಳನ್ನು ನಿಷೇಧಿಸಿ ಎಂದು ಪ್ರಮೋದ ಮುತಾಲಿಕ ಈ ಸಂದರ್ಭದಲ್ಲಿ ಆಗ್ರಹಿಸಿದರು.

ಮಹಾರಾಷ್ಟ್ರ ಸರ್ಕಾರ ಈಗಾಗಲೇ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿದೆ. ರಾಜ್ಯದಲ್ಲೂ ಅವಕಾಶ ನೀಡಬೇಕು. ಕೋವಿಡ್‌ ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲಿಸುತ್ತೇವೆ ಎಂದರು.

ಶ್ರೀರಾಮ ಸೇನೆಯ ಮುಖಂಡರಾದ ನೀಲಕಂಠ ಕಂದಗಲ್‌, ಗಂಗಾಧರ ಕುಲಕರ್ಣಿ, ರಾಕೇಶ್‌ಮಠ, ಬಸವರಾಜ ಕಲ್ಯಾಣಪ್ಪಗೋಳ, ಆನಂದ ಕುಲಕರ್ಣಿ ಇದ್ದರು.