ಸಾಲವಾಗಿ ನೀಡಿದ್ದ ಹಣ ಮರುಪಾವತಿಯಾಗದೇ , ಕಾಲೇಜು ಶುಲ್ಕ ಪಾವತಿಸಲಾಗದೇ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ – vishwanews24
ಸಾಲವಾಗಿ ನೀಡಿದ್ದ ಹಣ ಮರುಪಾವತಿಯಾಗದೇ ಕಾಲೇಜು ಶುಲ್ಕ ಪಾವತಿಸಲಾಗದೇ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
ಕಾರವಾರ: ಕಾಲೇಜು ಶುಲ್ಕ ಕಟ್ಟಲು ತಂದೆ ನೀಡಿದ್ದ ಹಣವನ್ನು ಪರಿಚಯಸ್ಥನಿಗೆ ಸಾಲವಾಗಿ ನೀಡಿದ್ದ ವಿದ್ಯಾರ್ಥಿನಿಯೊಬ್ಬಳು, ಆ ಹಣ ಮರಳಿ ಸಿಗದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ ನಡೆದಿದೆ.
ಭಟ್ಕಳದಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಗಾಯತ್ರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಇದನ್ನೂ ಓದಿ:
ಕಾಲೇಜು ಶುಲ್ಕ ಪಾವತಿಸಲು ತಂದೆ ನಾಗರಾಜ ಲಚ್ಚಯ್ಯ ನಾಯ್ಕ ಅವರು ಗಾಯತ್ರಿಗೆ 10 ಸಾವಿರ ರೂಪಾಯಿ ನೀಡಿದ್ದರು. ಇದೇ ವೇಳೆ ಊರಿನ ಪರಿಚಯಸ್ಥ ಸಂತೋಷ ಮಾಧೇದ ನಾಯ್ಕ ಎಂಬಾತ ನಿಗದಿತ ಸಮಯಕ್ಕೆ ಮರಳಿ ನೀಡುವುದಾಗಿ ಹೇಳಿ ಆಕೆಯಿಂದ 10 ಸಾವಿರ ರೂಪಾಯಿ ಸಾಲ ಪಡೆದಿದ್ದ.
ಆದರೆ ನಿಗದಿತ ಸಮಯ ಕಳೆದರೂ ಹಣವನ್ನು ಮರಳಿ ನೀಡಿರಲಿಲ್ಲ. ಇದರಿಂದ ಗಾಯತ್ರಿಗೆ ಕಾಲೇಜು ಶುಲ್ಕ ಪಾವತಿಸಲು ಸಾಧ್ಯವಾಗಿರಲಿಲ್ಲ. ಶುಲ್ಕ ಕಟ್ಟದ ಕಾರಣ ಪರೀಕ್ಷೆಯ ಹಾಲ್ಟಿಕೆಟ್ ಕೂಡ ದೊರೆತಿರಲಿಲ್ಲ. ಇದರಿಂದ ಮನನೊಂದ ಗಾಯತ್ರಿ ಗ್ರಾಮದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
