ಸಾವಿನಲ್ಲೂ ಐದು ಮಕ್ಕಳ ಬಾಳಿಗೆ ಬೆಳಕಾದ 10 ತಿಂಗಳ ಮಗು : ಕೇರಳದಲ್ಲಿ ಅತ್ಯಂತ ಕಿರಿಯ ಅಂಗಾಂಗ ದಾನಿ – vishwanews24

Featured, ರಾಷ್ಟ್ರ ನ್ಯೂಸ್

ಸಾವಿನಲ್ಲೂ ಐದು ಮಕ್ಕಳ ಬಾಳಿಗೆ ಬೆಳಕಾದ 10 ತಿಂಗಳ ಮಗು : ಕೇರಳದಲ್ಲಿಅತ್ಯಂತ ಕಿರಿಯ ಅಂಗಾಂಗ ದಾನಿ

ಕೇರಳ: ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ 10 ತಿಂಗಳ ಮಗುವಿನ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಈ ಮೂಲಕ ಪುಟ್ಟ ಕಂದಮ್ಮ ಸಾವಿನಲ್ಲೂ ಐದು ಮಕ್ಕಳ ಬಾಳಿಗೆ ಬೆಳಕಾಗಿದ್ದಾಳೆ.

ತಮ್ಮ ಮಗಳು ಆಲಿನ್​ ಶೆರಿನ್​ ಅಬ್ರಹಾಂಳನ್ನು ಕಳೆದುಕೊಂಡ ತೀವ್ರ ದುಃಖದ ನಡುವೆಯೂ ಪೋಷಕರು ಆಕೆಯ ಪ್ರಮುಖ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾದರಿಯೆನಿಸಿದ್ದಾರೆ.

ಪಟ್ಟನಂತಿಟ್ಟು ಜಿಲ್ಲೆಯ ಮಲ್ಲಪ್ಪಳ್ಳಿಯ ಅರುಣ್​ ಅಬ್ರಹಾಂ, ಪತ್ನಿ ಶೆರಿನ್, 10 ತಿಂಗಳ ಮಗಳು,​ ಹಾಗು ತಂದೆ ತಾಯಿ ಜೊತೆ ಫೆ. 5ರಂದು ಕೊಟ್ಟಾಯಂನಿಂದ ತಿರುವಲ್ಲಾಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅಂದು ಮಧ್ಯಾಹ್ನ 2.30ರ ಸುಮಾರಿಗೆ ಅರುಣ್​ ಅವರು ಚಲಾಯಿಸುತ್ತಿದ್ದ ಕಾರು ಕೊಟ್ಟಾಯಂನ ಪಲ್ಲಂ ಬಳಿ ಇನ್ನೊಂದು ಕಾರಿಗೆ ಮುಖಾಮುಖಿ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಮಗು ಆಲಿನ್​ ಗಂಭೀರವಾಗಿ ಗಾಯಗೊಂಡಿತ್ತು.

ಇದನ್ನೂ ಓದಿ: 

ಗೋಧಾಮದ ಮೂಲಕ ಮುನಿಯಾಲಿನ ಹೆಸರು ಜಾಗತಿಕ ಮಟ್ಟದಲ್ಲಿ ರಾರಾಜಿಸುವಂತೆ ಆಗಿದೆ : ಉದಯ ಕುಮಾರ್ ಶೆಟ್ಟಿ – vishwanews24

ತಕ್ಷಣವೇ ಮಗುವನ್ನು ಚಂಗನಶ್ಶೇರಿಯ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ನಂತರ ಹೆಚ್ಚಿನ ಚಿಕಿತ್ಸೆಗೆ ಚೆತಿಪುಳದಲ್ಲಿರುವ ಸೇಂಟ್ ಥಾಮಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ನಂತರ ಬಿಲೀವರ್ಸ್ ಚರ್ಚ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗುವಿನ ಆರೋಗ್ಯದಲ್ಲಿ ಯಾವುದೇ ಸುಧಾರಣೆಯಾಗದ ಕಾರಣ, ಫೆ. 6ರಂದು ರಾತ್ರಿ ಕೊಚ್ಚಿನ್​ನ ಅಮೃತ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಕಳೆದ ಒಂದು ವಾರದಿಂದ ತಜ್ಞ ವೈದ್ಯಕೀಯ ತಂಡ ನಿರಂತರವಾಗಿ ಮಗುವಿನ ಚೇತರಿಕೆಗಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ. ಮಗುವಿಗೆ ಪ್ರಜ್ಞೆ ಬಾರದ ಕಾರಣ, ನಂತರ ಮೆದುಳು ನಿಷ್ಕ್ರಿಯವಾಗಿದೆ ಎಂದು ಘೋಷಿಸಲಾಯಿತು.

ಅತೀವ ದುಃಖದ ನಡುವೆಯೇ ಮಗುವಿನ ತಂದೆ ಅರುಣ್​ ಹಾಗೂ ತಾಯಿ ಶೆರಿನ್​ ಅವರು ಆಕೆಯ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ಹಾಗಾಗಿ ಆಲಿನ್​ ಪೋಷಕರ ಸಮ್ಮತಿಯ ಮೇರೆಗೆ ಮಗುವಿನ ಅಂಗಾಂಗಗಳನ್ನು ಕೇರಳದ ವಿವಿಧ ಆಸ್ಪತ್ರೆಗಳಿಗೆ ನೀಡಲಾಗಿದೆ. ಈ ಪ್ರಕರಣ ಇಡೀ ದೇಶದ ಗಮನ ಸೆಳೆದಿದೆ.

ಇದನ್ನೂ ಓದಿ: 

₹ 59 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಮಣಿಪಾಲ ಪೆರಂಪಳ್ಳಿ ರಸ್ತೆ ಉದ್ಘಾಟಿಸಿದ ಶಾಸಕ ಯಶ್ಪಾಲ್ ಸುವರ್ಣ – vishwanews24

Leave a Reply