ಸಿದ್ದರಾಮಯ್ಯರ ತಾಕತ್ತಿಗೆ ಶರಣಾಯ್ತಾ ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟ..!?
ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ಸರಕಾರಕ್ಕೆ ಭಾರೀ ತಲೆನೋವಾಗಿ ಪರಿಣಮಿಸಿದ್ದ ಬಜೆಟ್ ರಗಳೆ ಇದೀಗ ಮುಕ್ತಾಯ ಪಡೆಯಬಹುದೇನೋ ಎಂಬ ಅಂತ ತಲುಪಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಿಗಿ ಪಟ್ಟಿಗೆ ಕುಮಾರಸ್ವಾಮಿ ಅವರು ಸೇರಿದಂತೆ ಸಮ್ಮಿಶ್ರ ಸರಕಾರದ ಎಲ್ಲ ನಾಯಕರು ಶರಣಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಮೈತ್ರಿ ಸರಕಾರ ಈ ಮೊದಲು ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಒಲವನ್ನು ತೋರಿಸಿತ್ತು. ಆದರೆ ಸಿದ್ದರಾಮಯ್ಯತ ವಿರೋಧದಿಂದಾಗಿ ಇದರ ಬದಲಿಗೆ ಅಯವ್ಯಯ ಪರಿಷ್ಕೃತ ರೂಪ ಮಂಡನೆಗೆ ನಿರ್ಧಾರ ಮಾಡಿದೆ.
ಈ ಸಮ್ಮಿಶ್ರ ಸರಕಾರ ರಚನೆ ದಿನದಿಂದಲೂ ಈ ಮೈತ್ರಿಕೂಟದಲ್ಲಿರುವ ಸಿದ್ದರಾಮಯ್ಯರ ವಿರೋಧಿಗಳು ಅವರನ್ನು ಮೂಲೆಗುಂಪು ಮಾಡಿದ್ದರು. ಇವರ ಆಪ್ತರನ್ನು ಸಹ ಮಂತ್ರಿ ಮಂಡಲ ರಚನೆ ಸಂದರ್ಭ ಕಡೆಗಣಿಸಲಾಗಿತ್ತು. ಸಿದ್ದರಾಮಯ್ಯರಿಗೆ ಸಮನ್ವಯ ಸಮಿತಿ ಅಧ್ಯಕ್ಷ ಎಂಬ ನಾಮಕಾವಸ್ಥೆ ಪಟ್ಟ ನೀಡಿ ಸಮಾಧಾನ ಪಡಿಸುವ ಯತ್ನವನ್ನು ಮೈತ್ರಿಕೂಟ ಮಾಡಿತ್ತು. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಿದ್ದರಾಮಯ್ಯನವರು ಆ ಸಮಯದಲ್ಲಿ ಏನನ್ನೂ ಮಾತನಾಡದೆ ತಾಳ್ಮೆಯಿಂದ ಇದ್ದರು. ಆದರೆ ನಂತರದ ದಿನಗಳಲ್ಲಿ ಸಿದ್ದರಾಮಯ್ಯ ಸರಕಾರ ತಮ್ಮ ಅವಧಿಯಲ್ಲಿ ಮಂಡಿಸಿದ್ದ ಬಜೆಟ್ ನ ಬದಲಿಗೆ ಪ್ರತ್ಯೇಕ ಬಜೆಟ್ ಮಂಡನೆಗೆ ಈ ಸರಕಾರ ಮುಂದಾಯಿತೋ ಆ ದಿನದಿಂದ ಸಿದ್ದರಾಮಯ್ಯ ಅವರು ಹಾಗೂ ಇವರ ಬೆಂಬಲಿಗರು ಅಸಮಾಧಾನಗೊಂಡು ಕುಮಾರಸ್ವಾಮಿ ಅವರ ವಿರುದ್ಧ ಬಹಿರಂಗವಾಗಿಯೇ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.
ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯಲು ಆಗಮಿಸಿದ್ದ ಸಿದ್ದರಾಮಯ್ಯ ಅವರು ಇಲ್ಲಿಂದಲೇ ಹಲವಾರು ರಾಜಕೀಯ ಪಟ್ಟುಗಳನ್ನು ಬಿಟ್ಟು ಸರಕಾರದ ರಿಮೋಟ್ ಇನ್ನೂ ತನ್ನ ಕೈಯಲ್ಲೇ ಇದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಕುಮಾರಸ್ವಾಮಿ ಅವರಂತೂ ಪೂರ್ಣ ಬಜೆಟ್ ಮಂಡನೆಗೆ ಮಾಡಿದ್ದ ಎಲ್ಲ ಸಿದ್ಧತೆಗಳು ಇದೀಗ ವ್ಯರ್ಥವಾಗಿದ್ದು ಸಿದ್ದರಾಮಯ್ಯನವರು ರಾಹುಲ್ ಗಾಂಧಿ ಅವರು ನೀಡಿದ್ದ ಸೂಚನೆಯನ್ನು ಸಹ ಧಿಕ್ಕರಿಸಿದ್ದಾರೆ. ಈ ಬಗ್ಗೆ ರಾಜ್ಯ ಹಣಕಾಸು ಇಲಾಖೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು 2018 – 19 ನೇ ಸಾಲಿನ ಪರಿಷ್ಕ್ರತ ಆಯವ್ಯಯವನ್ನು ಜುಲೈ 05 ರಂದು ಮಂಡನೆ ಮಾಡಲಿದ್ದಾರೆ ಎಂಬುದಾಗಿ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಧರ್ಮಸ್ಥಳದ ಶಾಂತಿವನದಲ್ಲಿ ವಿಶ್ರಾಂತಿಯಲ್ಲಿದ್ದರೂ ಸಹ ಪದೇ ಪದೇ ತಮ್ಮ ಬೆಂಬಲಿಗರನ್ನು ತಾವಿದ್ದಲ್ಲಿಗೆ ಕರೆಸಿಕೊಂಡು ತಮ್ಮ ಬಲ ಪ್ರದರ್ಶನವನ್ನು ನಡೆಸುತ್ತಿದ್ದರು. ಈ ಮೂಲಕ ಬಜೆಟ್ ಪಟ್ಟನ್ನು ಮುಂದಿಟ್ಟು ಅದಕ್ಕೆ ಸರಕಾರ ಮಣಿಯದಿದ್ದಲ್ಲಿ ಭಿನ್ನ ಹಾದಿ ತುಳಿಯುವ ಎಚ್ಚರಿಕೆಯನ್ನೂ ಸಹ ನೀಡಿದ್ದರು. ಈ ಎಚ್ಚರಿಕೆಗೆ ಮಣಿದ ಸರಕಾರ ಆಯವ್ಯಯ ಪರಿಷ್ಕ್ರತ ಬಜೆಟ್ ಮಂಡನೆಗೆ ಮುಂದಾಗುವ ಮೂಲಕ ಸಿದ್ದರಾಮಯ್ಯ ಕೈ ಮೇಲಾಗಿದೆ. ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದ ಕುಮಾರಸ್ವಾಮಿ ಅವರಿಗೆ ಇದೀಗ ನಿರಾಸೆಯಾಗಿದ್ದು ಅವರ ಮುಂದಿನ ನಡೆ ಏನಿರಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
