ಸುರತ್ಕಲ್ನಲ್ಲಿ ರಾಜ್ಯದ ಮೊದಲ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ – Vishwanews24
ಸುರತ್ಕಲ್ನಲ್ಲಿ ರಾಜ್ಯದ ಮೊದಲ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ
ಮಂಗಳೂರು: ರಾಜ್ಯದ ಮೊದಲ ಹೈಟೆಕ್ ಬಸ್ ನಿಲ್ದಾಣ ಮಂಗಳೂರಿನ ಸುರತ್ಕಲ್ನಲ್ಲಿ ನಿರ್ಮಾಣವಾಗಿದೆ. ಸುರತ್ಕಲ್ ಗೋವಿಂದಾಸ್ ಕಾಲೇಜು ಮುಂಭಾಗ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಿದ್ದು, ಈ ಹೈಟೆಕ್ ಬಸ್ ನಿಲ್ದಾಣವನ್ನು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೆಚ್ಚು ಭಧ್ರತೆಯ ಸಾಧನಗಳನ್ನು ಬಳಸಿ ನಿರ್ಮಾಣ ಮಾಡಲಾಗಿದೆ.

ಶಾಸಕ ಡಾ.ವೈ ಭರತ್ ಶೆಟ್ಟಿ ಅವರ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುರತ್ಕಲ್ ಬಸ್ ನಿಲ್ದಾಣ ಇದಾಗಿದ್ದು, ಸ್ಮಾರ್ಟ್ ಮತ್ತು ಡಿಜಿಟಲ್ ಸುರತ್ಕಲ್ ಧ್ಯೇಯದಡಿ ಇದನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸುರತ್ಕಲ್ನ ಹೈಟೆಕ್ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸುರಕ್ಷತೆ ಎಸ್ಒಎಸ್ ಅಳವಡಿಕೆ ಮಾಡಲಾಗಿದೆ. ಅಪಾಯದ ಸಂಧರ್ಭದಲ್ಲಿ ಮಹಿಳೆಯರು ಎಸ್ಒಎಸ್ ಬಟನ್ ಒತ್ತಿದರೆ ಪೊಲೀಸರಿಗೆ ಆಟೋಮ್ಯಾಟಿಕ್ ಕಾಲ್ ಹೋಗಲಿದೆ. ಪೊಲೀಸ್ ಅಧಿಕಾರಿಗಳು, ಪಾಲಿಕೆಯ ಅಧಿಕಾರಿಗಳ ನಂಬರ್ಗಳಿಗೆ ಆಟೋಮ್ಯಾಟಿಕ್ ಕಾಲ್, ಸಂದೇಶ ಹೋಗಲಿದೆ. ಈ ಬಸ್ ನಿಲ್ದಾಣದಲ್ಲಿ ಮೂರು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸಿಸಿ ಕ್ಯಾಮೆರಾಗಳ ನೇರ ದೃಶ್ಯ ಪೊಲೀಸ್ ಠಾಣೆ, ಪಾಲಿಕೆಯ ಕಛೇರಿ ಮತ್ತು ಪೊಲೀಸ್ ಅಧಿಕಾರಿಗಳ ಮೊಬೈಲ್ಗೆ ಹೋಗಲಿದೆ.

ಅಲ್ಲದೇ ಈ ಬಸ್ ನಿಲ್ದಾಣದಲ್ಲಿ ಉಚಿತ ಅನ್ ಲಿಮಿಟೆಡ್ ವೈಫೈ, ಮೂರು ಸಿಸಿ ಕ್ಯಾಮೆರಾಗಳು, ಶುದ್ಧ ಕುಡಿಯುವ ನೀರು, ಎಫ್ಎಂ ರೇಡಿಯೋ, ಇನ್ವಾಟರ್ ವ್ಯವಸ್ಥೆಯನ್ನೂ ಕೂಡ ಕಲ್ಪಿಸಲಾಗಿದೆ. ಪ್ರಯಾಣಿಕರ ಅನುಕೂಲತೆಗಾಗಿ ಫ್ಯಾನ್, ಬೆಂಕಿ ನಿರೋಧಕ ಸಾಧನ, ಮೊಬೈಲ್, ಲ್ಯಾಪ್ ಟಾಪ್ ಚಾರ್ಜಿಂಗ್ ವ್ಯವಸ್ಥೆ, ಪ್ರಥಮ ಚಿಕಿತ್ಸೆಯ ಬಾಕ್ಸ್ ಅಳವಡಿಸಲಾಗಿದೆ. ಹಾಗೂ ಈ ಬಸ್ ನಿಲ್ದಾಣದಲ್ಲಿ 12 ಚೇರ್ಗಳನ್ನು ಹಾಕಲಾಗಿದೆ.

ಹಾಗೆಯೇ ಬಸ್ ನಿಲ್ದಾಣದಲ್ಲಿ ವಿಶೇಷವಾಗಿ ಟಚ್ ಸ್ಕ್ರೀನ್ ಡಿಸ್ ಪ್ಲೇ ಅಳವಡಿಸಲಾಗಿದ್ದು, ಈ ಡಿಸ್ ಪ್ಲೇನಲ್ಲಿ ಬಸ್ಗಳ ಸಮಯ, ಬಸ್ ಬರುತ್ತಿರುವ ನಿರ್ದಿಷ್ಟ ಸ್ಥಳ, ಮತ್ತು ಸುತ್ತಮುತ್ತಲಿನ ಪ್ರವಾಸೋದ್ಯಮ ಸ್ಥಳಗಳ ಮಾಹಿತಿಯೂ ಇರಲಿದೆ. ಮತ್ತು ಐ ಲವ್ ಸುರತ್ಕಲ್ ಎಂಬ ಸೆಲ್ಫೀ ಪಾಯಿಂಟ್ ಕೂಡ ಇದೆ. ಇನ್ನು ಬಸ್ ನಿಲ್ದಾಣದ ಹಿಂಭಾಗ ಎಂಸಿಎಫ್ ಪ್ರಾಯೋಜಕತ್ವದ ಅಡಿಯಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಾಣವಾಗಲಿದೆ.

ಈ ಬಸ್ ನಿಲ್ದಾಣವನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಉದ್ಘಾಟನೆ ಮಾಡಿದ್ದಾರೆ. ಅಲ್ಲದೇ ಅವರು ಸಾರ್ವಜನಿಕರು ಇದರ ಉಪಯೋಗ ಪಡೆಯುವಂತೆ ಕೋರಿದ್ದಾರೆ. ಇದರ ನಿರ್ವಹಣೆಗೆ ಓರ್ವ ಖಾಯಂ ಸಿಬ್ಬಂದಿಯನ್ನು ನೇಮಿಸಲಾಗಿದೆ. ರಾತ್ರಿ ಬೆಂಗಳೂರು ಬಸ್ಗಳು ಇದೇ ನಿಲ್ದಾಣಕ್ಕೆ ಬರುವುದರಿಂದ ಸಾರ್ವಜನಿಕರು ನಿರ್ಭೀತಿಯಾಗಿ ಇಲ್ಲಿನ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಶಾಸಕ ಭರತ್ ಶೆಟ್ಟಿ ಮಾಹಿತಿ ನೀಡಿದರು.

