ಸೊರಕೆ ಅಧಿಕಾರ ದುರ್ಬಳಕೆ ಫಲ ಹೆಜಮಾಡಿ -ಪಡುಬಿದ್ರಿ ಅವೈಜ್ಞಾನಿಕ ಸೇತುವೆ : ಶೋಭಾ

Featured, ಉಡುಪಿ

ಪಡುಬಿದ್ರಿ : “ಹೆಜಮಾಡಿ ಸಮುದ್ರ ತೀರದ ಮುಟ್ಟಾಲುವೆ ಬಳಿ ಹೆಜಮಾಡಿ ಹಾಗೂ ಪಡುಬಿದ್ರಿ ಸಂಪರ್ಕ ರಸ್ತೆ ನಡೆಸುವ ನಿಟ್ಟಿನಲ್ಲಿ ಮಾಜಿ ಶಾಸಕರ ಉಸ್ತುವಾರಿಯಲ್ಲಿ ನಡೆದ ಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇದು ಅಂದಿನ ಶಾಸಕರ ಅಧಿಕಾರ ದುರುಪಯೋಗದ ಫಲ” ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದರು.

ಹಾಲಿ ಶಾಸಕ ಲಾಲಾಜಿ ಆರ್ ಮೆಂಡನ್ ಹಾಗೂ ಕಾರ್ಯಕರ್ತರೊಂದಿಗೆ ಹೆಜಮಾಡಿ ಸೇತುವೆಯ ಬಳಿಗೆ ಆಗಮಿಸಿ ಪರಿಶೀಲಿಸಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, “ಮೇಲ್ನೋಟಕ್ಕೆ ಈ ಒಟ್ಟು ಕಾಮಗಾರಿಯೇ ಅವೈಜ್ಞಾನಿಕವಾಗಿ ಕಾಣುತ್ತಿದ್ದು, ಮಾಜಿ ಶಾಸಕ ವಿನಯಕುಮಾರ್ ಸೊರಕೆ ಒತ್ತಡ ಹೇರಿದ್ದರಿಂದ ಅಧಿಕಾರಿಗಳು ತಪ್ಪು ಕೆಲಸ ಮಾಡಿದ್ದಾರೆ. ಇಲ್ಲಿ ಸಮುದ್ರಕ್ಕೆ ನೀರು ಹರಿದು ಹೋಗುವ ಬದಲು ಸಮುದ್ರದಿಂದ ಹೊರಗಡೆ ನೀರು ಹರಿಯುವಂತಾಗಿದೆ. ಕೃಷಿ ಚಟುವಟಿಕೆ ನಡೆಸಲಾಗದೆ ಈ ಭಾಗದ ಕೃಷಿಕರು ಈ ಕಾಮಗಾರಿಯಿಂದ ಕಂಗಾಲಾದ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಅಧಿಕಾರಿಗಳಲ್ಲಿ ಚರ್ಚಿಸಿ ಈ ಕಾಮಗಾರಿಯನ್ನು ಉಳಿಸಬೇಕೋ, ಅಳಿಸಬೇಕೋ ನಿರ್ಧರಿಸಲಾಗುವುದು” ಎಂದರು. ಈ ಸಂದರ್ಭ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜೊತೆಗಿದ್ದರು.