ಹಿಜಾಬ್ ತೀರ್ಪು: ಬಂದ್ ಕರೆ ನೀಡಿದ ಸಂಘಟನೆಗಳ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅರ್ಜಿ – Vishwanews24

Featured, ರಾಜ್ಯ ನ್ಯೂಸ್

ಹಿಜಾಬ್ ತೀರ್ಪು: ಬಂದ್ ಕರೆ ನೀಡಿದ ಸಂಘಟನೆಗಳ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅರ್ಜಿ – Vishwanews24

ಬೆಂಗಳೂರು : ಹಿಜಾಬ್ ವಿಚಾರವಾಗಿ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿ ಬಂದ್ ಗೆ ಕರೆ ನೀಡಿದ್ದ ಸಂಘಟನೆಗಳ ವಿರುದ್ಧ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದು ಕೋರಿ ಹೈಕೋರ್ಟ್ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಬಂದ್ ಕರೆ ನೀಡಿದ ಸಂಘಟನೆಗಳು ನ್ಯಾಯಾಂಗ ನಿಂದನೆ ಕೇಸ್ ಎದುರಿಸಬೇಕಾದ ಸಂಕಷ್ಟ ಎದುರಾಗಲಿದೆ.

ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ, ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಮವಸ್ತ್ರ ಪಾಲನೆ ಮಾಡಬೇಕು ಎಂಬುದಾಗಿ ಹೈಕೋರ್ಟ್ ಕೆಲ ದಿನಗಳ ಹಿಂದಷ್ಟೇ ತೀರ್ಪು ನೀಡಿತ್ತು. ಆದರೆ, ಈ ತೀರ್ಪು ಕುರಿತು ಅಸಮಾಧಾನ ವ್ಯಕ್ತಪಡಿಸಿ ಕೆಲವು ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದರು. ಅಲ್ಲದೆ, ಕೆಲವರು ತೀರ್ಪು ನೀಡಿದ್ದ ನ್ಯಾಯಾಧೀಶರ ವಿರುದ್ಧವೇ ಮಾತನಾಡಿದ್ದರು. ಈ ನಿಟ್ಟಿನಲ್ಲಿ ಬಂದ್ ಕರೆ ಕೊಟ್ಟ ಸಂಘಟನೆಗಳ ಮೇಲೆ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಬೇಕೆಂದು ಕೋರಿ ನ್ಯಾಯವಾದಿ ಎನ್.ಪಿ. ಅಮೃತೇಶ್ ಅವರು ರಿಜಿಸ್ಟ್ರಾರ್ ಜನರಲ್ ಗೆ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದಾರೆ.

ಬಂದ್ ಗೆ ಕರೆ ನೀಡಿದ್ದ ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಕರ್ನಾಟಕ ಭಾರತೀಯ ವಿದ್ಯಾರ್ಥಿ ಇಸ್ಲಾಮಿಕ್ ಸಂಘಟನೆ, ಸ್ಟೂಡೆಂಟ್ ಕ್ರಿಶ್ಚಿಯನ್ ಮೂವ್ ಮೆಂಟ್ ಆಫ್ ಇಂಡಿಯಾ, ಕರ್ನಾಟಕ ದಲಿತ ವಿದ್ಯಾರ್ಥಿ ಪರಿಷತ್, ಬೆಂಗಳೂರಿನ ಕಲೆಕ್ಟಿವ್, ಕರ್ನಾಟಕ ವಿದ್ಯಾರ್ಥಿನಿ ಇಸ್ಲಾಮಿಕ್ ಸಂಘಟನೆ, ಕರ್ನಾಟಕ ಸಗೀರ್ ಅಹ್ಮದ್ ರಶ್ದಿ ಇಮರತ್ ಇ- ಶರಿಯತ್ ಸಹಿತ ಏಳು ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ.

ನ್ಯಾಯಾಲಯದ ಘನತೆ ಕುಂದಿಸುವ ಕೆಲಸವನ್ನು ಮಾಡಲಾಗಿದೆ. ನ್ಯಾಯಾಧೀಶರ ಬಗ್ಗೆ ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡಿದ್ದಲ್ಲದೆ, ಕೆಲವರು ತೀರ್ಪು ನೀಡಿದ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಎಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಮನವಿ ಮಾಡಲಾಗಿದೆ.

ಮಂಗಳೂರು: ಫ್ಲ್ಯಾಟ್‌ವೊಂದರಲ್ಲಿ ಅಪ್ರಾಪ್ತರ ಬಳಸಿ ವೇಶ್ಯಾವಾಟಿಕೆ ಪ್ರಕರಣ : ಬಂಧಿತರ ಸಂಖ್ಯೆ 16ಕ್ಕೆ ಏರಿಕೆ – VIshwanews24

Leave a Reply