ಹುಸೈನಬ್ಬ ಕೊಲೆ: ಬಜರಂಗಿಗಳೊಂದಿಗೆ ಪೊಲೀಸರು ಶಾಮೀಲಾಗಿರುವುದು ಖಂಡನಾರ್ಹ: ಪ್ರಮೋದ್
ಈ ಮೂಲಕ ಪ್ರಮೋದ್ ಮಧ್ವರಾಜ್ ಅವರು ತನ್ನ ರಾಜಕೀಯ ವಿರೋಧಿ ಮತ್ತು ಶಾಸಕ ರಘುಪತಿ ಭಟ್ ಅವರ ವಿರುದ್ದ ಟೀಕಾಸ್ತ್ರ ಬಿಟ್ಟಿದ್ದಾರೆ.
ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ(61) ಶಂಕಾಸ್ಪದ ಸಾವಿನ ಪ್ರಕರಣದಲ್ಲಿ ಬಂಧಿತ ಹಿರಿಯಡ್ಕ ಎಸ್ಸೈ ಮತ್ತು ಇಬ್ಬರು ಪೊಲೀಸ್ ಸಿಬಂದಿಯನ್ನು ಕಾರವಾರ ಜೈಲಿನಲ್ಲಿ ಇರಿಸಲಾಗಿದೆ.
ಜೂನ್ 3ರ ರಾತ್ರಿ ಆರೋಪಿಗಳನ್ನು ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ. ಆರೋಪಿಗಳನ್ನು ಕಾರವಾರ ಜೈಲಿನಲ್ಲಿ ಇರಿಸುವಂತೆ ಸೂಚಿಸಲಾಗಿದ್ದು, ಸೋಮವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಮತ್ತೆ ಹಾಜರುಪಡಿಸಲಾಗುವುದು.
ಹಿರಿಯಡ್ಕ ಎಸ್ಸೈ ಡಿ.ಎನ್. ಕುಮಾರ್, ಠಾಣೆಯ ಜೀಪ್ ಚಾಲಕ ಗೋಪಾಲ, ಎಚ್. ಸಿ ಮೋಹನ ಕೊತ್ವಾಲ, ಬಜರಂಗದಳ ಕಾರ್ಯಕರ್ತರಾದ ಪೆರ್ಡೂರು ಪಕಾಲುವಿನ ಚೇತನ್ ಯಾನೆ ಚೇತನ್ ಆಚಾರ್ಯ(22), ಪೆರ್ಡೂರು ಅಲಂಗಾರು ನಿವಾಸಿ ಶೈಲೇಶ ಶೆಟ್ಟಿ(20). ಪೆರ್ಡೂರು ಕೆನ್ನೆತ್ ಬೈಲುವಿನ ಗಣೇಶ ನಾಯ್ಕ(24) ಸೇರಿದಂತೆ ಒಟ್ಟು ಹತ್ತು ಮಂದಿಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.
ಬಜರಂಗದಳ ಕಾರ್ಯಕರ್ತರು ಹಲ್ಲೆಗೈದ ಬಳಿಕ ಹುಸೈನಬ್ಬ ಅವರನ್ನು ಪೊಲೀಸರಿಗೆ ನೀಡಿದ್ದರು. ಈ ವೇಳೆ ಜೀಪಿನ ಹಿಂಬದಿ ಇದ್ದ ಹುಸೈನಬ್ಬ ಅಲ್ಲೇ ಸಾವಪ್ಪಿದ್ದರು. ದನ ಸಾಗಾಟದ ಸ್ಕಾರ್ಪಿಯೊವನ್ನು ಸುರೇಶ್ ಮೆಂಡನ್ ಮತ್ತು ಇತರ ಆರೋಪಿಗಳು ಠಾಣೆಗೆ ತಂದಿದ್ದರು ಎಂಬ ಸಂಗತಿ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಜರಂಗಿಗಳಿಂದ ಹಲ್ಲೆಗೊಳಗಾಗಿದ್ದ ಹುಸೈನಬ್ಬ ಅವರು ಪೊಲೀಸ್ ಜೀಪಿನಲ್ಲೇ ಸಾವಪ್ಪಿರುವುದು ತನಿಖೆಯಿಂದ ಬಯಲಾಗುವ ಮೂಲಕ ಕರಾವಳಿಯಲ್ಲಿ ಹಲವು ಪೊಲೀಸರು ಸಂಘಪರಿವಾರದ ಕಾರ್ಯಕರ್ತರೊಂದಿಗೆ ಕೈಮಿಲಾಯಿಸಿದ್ದಾರೆ ಎಂಬ ಅನುಮಾನಗಳಿಗೆ ಪುಷ್ಠಿ ಬಂದಿದೆ.
