ಅಯೋಧ್ಯೆಯ ಹಣ ದುರುಪಯೋಗ ಆರೋಪ ; ಧರ್ಮದ ಹೆಸರಿನಲ್ಲಿ ಲೂಟಿ ನಡೆದಿದೆ : ಮಲ್ಲಿಕಾರ್ಜುನ ಖರ್ಗೆ ಆಕ್ರೋಶ – vishwanews24
ಅಯೋಧ್ಯೆಯ ಹಣ ದುರುಪಯೋಗ ಆರೋಪ ; ಧರ್ಮದ ಹೆಸರಿನಲ್ಲಿ ಲೂಟಿ ನಡೆದಿದೆ : ಮಲ್ಲಿಕಾರ್ಜುನ ಖರ್ಗೆ ಆಕ್ರೋಶ
ಬೆಂಗಳೂರು : ಸುಮಾರು 5,000 ಕೋಟಿ ರೂ. ದುರುಪಯೋಗವಾಗಿದೆ ಎಂಬ ವರದಿಗಳಿವೆ. ಅರ್ಚಕರು ಹಣವನ್ನು ದೋಚುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಲೂಟಿ ನಡೆದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಟ್ರಸ್ಟ್ಗೆ ಸಂಬಂಧಿಸಿದ ಹಣ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಪದ ಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ರಾಮನ ಹೆಸರನ್ನು ಜಪಿಸಿ ಬೇರೆಯವರ ಆಸ್ತಿಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ರಾಮನ ಹೆಸರಿನಲ್ಲಿ ಲೂಟಿ ನಡೆದಿದೆ. ಕೋಟ್ಯಂತರ ರೂಪಾಯಿಗಳನ್ನು ಲೂಟಿ ಮಾಡಲು ದೇವಾಲಯವನ್ನು ನಿರ್ಮಿಸಲಾಗಿದೆ” ಎಂದು ಕಿಡಿಕಾರಿದರು.
“ದೇವಾಲಯಗಳನ್ನು ಸಾಮಾನ್ಯವಾಗಿ ಸ್ವಾಮೀಜಿಗಳು ಮತ್ತು ಮಠಾಧೀಶರು ಉದ್ಘಾಟಿಸುತ್ತಾರೆ, ಆದರೆ ರಾಮ ಮಂದಿರವನ್ನು ಪ್ರಧಾನಿಯೇ ಉದ್ಘಾಟಿಸಿದ್ದಾರೆ. ದೇವಾಲಯದ ಹುಂಡಿಯಿಂದ ಬರುವ ಹಣ ಎಲ್ಲೋ ಹೋಗುತ್ತಿದೆ. ಅವರ ಸ್ವಂತ ಜನರು ಇದರ ಹಿಂದೆ ಇದ್ದಾರೆಯೇ ಅಥವಾ ಬೇರೆ ಯಾರಾದರೂ ಇದ್ದಾರೆಯೇ ಎಂಬುದನ್ನು ತನಿಖೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
ಮುಂದುವರೆದು, “ಇದೇ ವೇಳೆ ನೀಟ್ ಪರೀಕ್ಷೆ ವಿಚಾರದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮೋದಿ ಸರ್ಕಾರ ದ್ರೋಹ ಮಾಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.
“ಮೋದಿ ಹಾಗೂ ಟ್ರಂಪ್ ತಮ್ಮನ್ನು ತಾವು ಒಳ್ಳೆಯ ಸ್ನೇಹಿತರು ಎಂದು ಕರೆದುಕೊಳ್ಳುತ್ತಾರೆ. ಆದರೆ, ಮೋದಿ ದೇಶವನ್ನು ನಾಶಪಡಿಸುತ್ತಿದ್ದರೆ, ಟ್ರಂಪ್ ಇಡೀ ಜಗತ್ತನ್ನು ನಾಶಪಡಿಸುತ್ತಿದ್ದಾರೆ. ನಿಮ್ಮಿಬ್ಬರಿಂದ ಜನರು ಬಳಲುತ್ತಿದ್ದಾರೆ” ಎಂದು ತಿಳಿಸಿದರು.
