ಅಯ್ಯಪ್ಪ ಸ್ವಾಮಿ ಪ್ರಸಾದಕ್ಕೆ ಬಳಸುವ ಏಲಕ್ಕಿಯಲ್ಲಿ ಕೀಟನಾಶಕ ಬಳಕೆ: ಅರವಣ ಪ್ರಸಾದ ವಿತರಣೆಗೆ ಹೈಕೋರ್ಟ್ ನಿಷೇಧ – Vishwanews24
ಅಯ್ಯಪ್ಪ ಸ್ವಾಮಿ ಪ್ರಸಾದಕ್ಕೆ ಬಳಸುವ ಏಲಕ್ಕಿಯಲ್ಲಿ ಕೀಟನಾಶಕ ಬಳಕೆ: ಅರವಣ ಪ್ರಸಾದ ತಕ್ಷಣ ನಿಲ್ಲಿಸುವಂತೆ ಹೈಕೋರ್ಟ್ ಆದೇಶ
ಕೊಚ್ಚಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಅರವಣ ಪ್ರಸಾದ ವಿತರಣೆಯನ್ನು ತಕ್ಷಣ ನಿಲ್ಲಿಸುವಂತೆ ಕೇರಳ ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ.
ಅಯ್ಯಪ್ಪಸ್ವಾಮಿ ಪ್ರಸಾದಕ್ಕೆ ಬಳಕೆಯಾಗುವ ಏಲಕ್ಕಿಯನ್ನು ತಪಾಸಣೆಗೆ ಒಳಪಡಿಸಿದಾಗ ಕೀಟನಾಶಕದ ಉಳಿಕೆ ಪ್ರಮಾಣವು ಅಪಾಯಕಾರಿ ಮಟ್ಟದಲ್ಲಿದ್ದ ಸಂಗತಿ ಬೆಳಕಿಗೆ ಬಂದಿದೆ.. ‘ಮನುಷ್ಯರ ಬಳಕೆಗೆ ಇದು ಸುರಕ್ಷಿತ ಅಲ್ಲ’ ಎಂದು ಆಹಾರ ವಿಜ್ಞಾನಿಗಳು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಪ್ರಸಾದ ವಿತರಣೆ ನಿಲ್ಲಿಸುವಂತೆ ಆದೇಶ ಹೊರಡಿಸಿತು.

ಏಲಕ್ಕಿಯಲ್ಲಿ 14 ಕೀಟನಾಶಕಗಳ ಉಳಿಕೆ ಪತ್ತೆ
ಅಪಾಯಕಾರಿ ಮಟ್ಟದಲ್ಲಿ ಕೀಟನಾಶಕದ ಉಳಿಕೆ ಇರುವ ಏಲಕ್ಕಿ ಬಳಸಿ ಸಿದ್ಧಪಡಿಸಿದ ಪ್ರಸಾದವನ್ನು ಭಕ್ತರಿಗೆ ನೀಡುವಂತಿಲ್ಲ. ಈ ಆದೇಶ ಪಾಲನೆಯ ಖಾತ್ರಿಯ ಹೊಣೆಯು ಆಹಾರ ಸುರಕ್ಷಾ ಆಯುಕ್ತರದು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಪ್ರಯೋಗಾಲಯದ ವರದಿಯ ಪ್ರಕಾರ, ಈ ಏಲಕ್ಕಿಯಲ್ಲಿ 14 ಕೀಟನಾಶಕಗಳ ಉಳಿಕೆ ಪ್ರಮಾಣವು ಗರಿಷ್ಠ ಮಿತಿಯನ್ನು ಮೀರಿದೆ (Maximum Residue Limit – MRL). ಡಿತಿಯೊಕಾರ್ಬಮೇಟ್ಸ್, ಸೈಪರ್ಮೆತರಿನ್, ಇಮಿಡಾಕ್ಲೊಪ್ರಿಡ್ ಪ್ರಮಾಣ ಗಣನೀಯ ಮಟ್ಟದಲ್ಲಿದೆ.
