ಆರ್ಥಿಕತೆ ಸುಧಾರಿಸುವುದಾದರೆ ನಮ್ಮನ್ನೂ ಬಂಧಿಸಿ : ರಮೇಶ್ಕುಮಾರ್ ಸವಾಲು -Vishwanews24
ಬೆಂಗಳೂರು: ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಆರ್.ರಮೇಶ್ಕುಮಾರ್ ಮಾತನಾಡಿ, ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಶಿವಕುಮಾರ್ ಬಂಧಿಸಿದರೆ ದೇಶದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದರೆ ನಮ್ಮನ್ನೆಲ್ಲಾ ಬಂಧಿಸಿ ಎಂದು ಸವಾಲು ಎಸೆದರು.
ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಸಾಂವಿಧಾನಿಕ ಸಂಸ್ಥೆಗಳನ್ನು ರಾಜಕೀಯ ಎದುರಾಳಿಗಳ ಧ್ವನಿ ಅಡಗಿಸಲು ದಾಳವಾಗಿ ಬಳಸಲಾಗುತ್ತಿದೆ. ಈ ಮೂಲಕ ಪ್ರಜಾಪ್ರಭುತ್ವ ನಾಶ ಮಾಡುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ದೇಶದ ಜನರು ಹಾಗೂ ಮಾಧ್ಯಮಗಳು ವಾಕ್ ಸ್ವಾತಂತ್ರ್ಯದ ರಕ್ಷಣೆಗೆ ಬರಬೇಕು ಎಂದರು.
ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಮಾತನಾಡಿ, ಶಿವಕುಮಾರ್ ಕೇವಲ ಒಕ್ಕಲಿಗ ಸಮುದಾಯದ ಮುಖಂಡ ಅಲ್ಲ. ಇಡೀ ಕರ್ನಾಟಕ ರಾಜ್ಯಾದ್ಯಂತ ಡಿ.ಕೆ. ಶಿವಕುಮಾರ್ ತಮ್ಮ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಶಿವಕುಮಾರ್ ಬಂಧನ ಸಹಜವಾಗಿಯೇ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಇದು ಅವಶ್ಯಕತೆ ಇತ್ತೇ ಎಂಬ ಮಾತು ಕೇಳಿಬರುತ್ತಿದೆ. ದ್ವೇಷ ಸಾಧನೆಗಾಗಿಯೇ ಮಾಡಿದ್ದಾರೆಯೇ ಎಂದು ಸಮುದಾಯದಲ್ಲಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
