ಎಸ್ಎಸ್ಎಲ್ ಸಿ ಪರೀಕ್ಷೆ : ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯಲು ಕುಳಿತ ವಿದ್ಯಾರ್ಥಿನಿಯರು – Vishwanews24
ಎಸ್ಎಸ್ಎಲ್ ಸಿ ಪರೀಕ್ಷೆ : ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯಲು ಕುಳಿತ ವಿದ್ಯಾರ್ಥಿನಿಯರು – Vishwanews24
ಬೆಂಗಳೂರು: ಹಿಜಾಬ್ ವಿವಾದ-ಹಿಂದೂ ಮುಸ್ಲಿಂ ವ್ಯಾಪಾರಿಗಳ ನಡುವಿನ ಸಂಘರ್ಷ ಮಧ್ಯೆ ಇಂದು ಸೋಮವಾರ ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಿದೆ. ಈ ಹಿಂದೆ ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೆ ತರಗತಿಯೊಳಗೆ ಬಿಡುವುದಿಲ್ಲ ಎಂದು ಹಠ ಮಾಡುತ್ತಿದ್ದ ಹಲವು ಮುಸ್ಲಿಂ ವಿದ್ಯಾರ್ಥಿನಿಯರು ಈಗ ಶಾಲೆಯವರೆಗೆ ಹಿಜಾಬ್ ಧರಿಸಿಕೊಂಡು ಬಂದು ನಂತರ ತರಗತಿಯೊಳಗೆ ಪರೀಕ್ಷೆ ಬರೆಯಲು ಹೋಗುವಾಗ ತೆಗೆದಿಟ್ಟು ಹೋಗುತ್ತಿರುವ ದೃಶ್ಯ ಕಂಡುಬಂತು.
ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಇಂದು ಹಿಜಾಬ್ ವಿಚಾರದಲ್ಲಿ ಹಠ ಮಾಡಬಾರದು ಎಂದು ವಿದ್ಯಾರ್ಥಿನಿಯರು ಭಾವಿಸಿಕೊಂಡು ತರಗತಿಯೊಳಗೆ ಹಿಜಾಬ್ ತೆಗೆದಿಟ್ಟು ಕೂರುತ್ತಿದ್ದಾರೆ. ಹಲವೆಡೆ ಪೋಷಕರು ಕೂಡ ಮಕ್ಕಳ ಮನವೊಲಿಸಿ ಹಿಜಾಬ್ ಧರಿಸದೆ ಮಕ್ಕಳನ್ನು ಪರೀಕ್ಷೆಗೆ ಕಳುಹಿಸುತ್ತಿದ್ದಾರೆ.
ಶಿಕ್ಷಣ ಸಚಿವ ಬಿ ಸಿ ನಾಗೇಶ್ ಬೆಂಗಳೂರಿನ ಕೆಲವು ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ ಸುಗಮವಾಗಿ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯ ಶಾಲೆಗೆ ಭೇಟಿ ನೀಡಿದರು.
ಈ ನಡುವೆ ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾಳೆ. ಈ ವೇಳೆ ಪ್ರಶ್ನಿಸಿದಾಗ, ನನಗೆ ಶಿಕ್ಷಣ ಇಲಾಖೆಯ ಆದೇಶ ಗೊತ್ತಿಲ್ಲ. ನೋ ಐಡಿಯಾ ಎಂದಿದ್ದಾಳೆ. ಶಾಲೆಯಲ್ಲಿ ನಮಗೆ ಈ ಆದೇಶದ ಬಗ್ಗೆ ಹೇಳಿಲ್ಲ. ಹಿಜಾಬ್ ತೆಗೆಯಿರಿ ಅಂದರೆ ರಿಮೂವ್ ಮಾಡಿ ಹೋಗುತ್ತೇವೆ. ಇಲ್ಲ ಅಂದರೆ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುತ್ತೇವೆ ಎಂದಿದ್ದಾಳೆ.
ರಾಯಚೂರು ನಗರದ ಸರ್ಕಾರಿ ಶಾಲೆಗೆ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಬಂದಿದ್ದಾರೆ. ಬಳಿಕ ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತೆಗೆದಿದ್ದಾರೆ. ಹಿಜಾಬ್ ತೆಗೆದ ಬಳಿಕ ಪರೀಕ್ಷಾ ಕೇಂದ್ರದೊಳಗೆ ಸಿಬ್ಬಂದಿ ಅನುಮತಿ ನೀಡಿದ್ದಾರೆ. ರಾಮನಗರದಲ್ಲೂ ವಿದ್ಯಾರ್ಥಿನಿಯರು ಹಿಜಾಬ್, ಬುರ್ಕಾ ಧರಿಸಿ ಪರೀಕ್ಷಾ ಕೇಂದ್ರಗಳತ್ತ ಆಗಮಿಸಿದ್ದಾರೆ. ಹಿಜಾಬ್ ಕಳಚಿ ಬರುವಂತೆ ಶಿಕ್ಷಕರು ಸೂಚನೆ ನೀಡಿದ್ದು, ಹಿಜಾಬ್, ಬುರ್ಕಾ ತೆಗೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
