ಪುತ್ತೂರು: ನಾಪತ್ತೆಯಾಗಿದ್ದ ಸಾಕುನಾಯಿ ಪತ್ತೆ ಮಾಡಿದ ವ್ಯಕ್ತಿಗೆ 50 ಸಾ. ರೂ. ಹಸ್ತಾಂತರ – vishwanews24
ಪುತ್ತೂರು: ಸಾಕುನಾಯಿ ಪತ್ತೆ ಮಾಡಿದ ವ್ಯಕ್ತಿಗೆ 50 ಸಾ. ರೂ. ಹಸ್ತಾಂತರ
ಪುತ್ತೂರು: ಇಲ್ಲಿನ ಕಬಕ ಸಮೀಪದ ಪೋಳ್ಯ ನಿವಾಸಿ, ಶ್ವಾನಪ್ರಿಯ ಗಣೇಶ್ ಕೇರ ಎಂಬವರ ನಾಪತ್ತೆಯಾಗಿದ್ದ ಸಾಕುನಾಯಿಯನ್ನು ಪತ್ತೆಹಚ್ಚಿ ಒಪ್ಪಿಸಿದ ಸ್ಥಳೀಯ ನಿವಾಸಿ ಪುರಂದರ ಅವರಿಗೆ ಘೋಷಿತ 50 ಸಾವಿರ ರೂ. ಬಹುಮಾನದ ಚೆಕ್ ಅನ್ನು ಹಸ್ತಾಂತರಿಸಲಾಗಿದೆ.
ಕೆಲವು ದಿನಗಳ ಹಿಂದೆ ಗಣೇಶ್ ಅವರ “ಚಿನ್ನು’ ಹೆಸರಿನ ದೇಶಿ ತಳಿಯ ನಾಯಿ ನಾಪತ್ತೆಯಾಗಿತ್ತು. ಹಿಂದೆ ರಸ್ತೆ ಬದಿಯಲ್ಲಿ ಸಿಕ್ಕಿದ್ದ ಈ ನಾಯಿಯನ್ನು ತಂದು ಅವರು ಪ್ರೀತಿಯಿಂದ ಸಾಕಿದ್ದರು. ಒಮ್ಮೆ ಪಿಟ್ಸ್ ಕಾಯಿಲೆಗೆ ತುತ್ತಾಗಿ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ಇದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲಾಗಿತ್ತು. ಆದರೆ, ಇತ್ತೀಚೆಗೆ ಇದು ನಾಪತ್ತೆಯಾದಾಗ, ಹುಡುಕಿಕೊಟ್ಟವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಗಣೇಶ್ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಬ್ಯಾನರ್ಗಳ ಮೂಲಕ ಪ್ರಕಟಿಸಿದ್ದರು.
ಮನೆಯಿಂದ ಕೇವಲ 2 ಕಿ.ಮೀ ಸುತ್ತಳತೆಯಲ್ಲೇ ತಿರುಗಾಡುತ್ತಿದ್ದ ನಾಯಿ, ಹುಡುಕಾಡಿದರೂ ಮಾಲಕರಿಗೆ ಸಿಕ್ಕಿರಲಿಲ್ಲ. ನಾಪತ್ತೆಯಾದ ಮೂರು ದಿನಗಳ ಬಳಿಕ ಪುರಂದರ ಅವರು ಇದನ್ನು ಮೊದಲ ಬಾರಿಗೆ ಗುರುತಿಸಿ ಮಾಹಿತಿ ನೀಡಿದ್ದರಾದರೂ ಮಾಲಕರು ಸ್ಥಳಕ್ಕೆ ತಲುಪುವಷ್ಟರಲ್ಲಿ ನಾಯಿ ಅಲ್ಲಿಂದ ಮಾಯವಾಗಿತ್ತು. ಆದರೆ, ಕಳೆದ ಎರಡು ದಿನಗಳ ಹಿಂದೆ ನಾಯಿ ಮತ್ತೆ ಪುರಂದರ ಅವರ ಕಣ್ಣಿಗೆ ಬಿದ್ದಾಗ, ತತ್ಕ್ಷಣ ಅದನ್ನು ಹಿಡಿದು ಗಣೇಶ್ ಅವರಿಗೆ ಒಪ್ಪಿಸಿದ್ದಾರೆ.
ತಮ್ಮ ಸಾಕುನಾಯಿ ಸಿಕ್ಕ ಖುಷಿಯಲ್ಲಿ ಗಣೇಶ್ ಅವರು ಪುರಂದರ ಅವರನ್ನು ಮನೆಗೆ ಕರೆಸಿ 50 ಸಾವಿರ ರೂ.ಗಳ ಚೆಕ್ ವಿತರಿಸಿದ್ದಾರೆ. ಗಣೇಶ್ ಅವರು ತಮ್ಮ ಮನೆಯಲ್ಲಿ ವಿವಿಧ ತಳಿಗಳ ಸುಮಾರು 30 ನಾಯಿಗಳನ್ನು ಸಾಕಿದ್ದಾರೆ.
ಉಡುಪಿ: ನಿರೀಕ್ಷಿತ ಮುಂಗಾರು ಮಳೆಯಿಲ್ಲದೆ ಕಡಲಿಗೆ ಇಳಿಯದ ನಾಡದೋಣಿಗಳು – vishwanews24
