ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ಕಾಂಗ್ರೆಸ್ ಜನತೆಗೆ ಬಗೆದ ಘೋರ ದ್ರೋಹವನ್ನು ಪುಷ್ಠೀಕರಿಸಿದೆ: ಜಿಲ್ಲಾ ಬಿಜೆಪಿ – Vishwanews24

Featured, ಉಡುಪಿ

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ಕಾಂಗ್ರೆಸ್ ಜನತೆಗೆ ಬಗೆದ ಘೋರ ದ್ರೋಹವನ್ನು ಪುಷ್ಠೀಕರಿಸಿದೆ: ಜಿಲ್ಲಾ ಬಿಜೆಪಿ

‘ನೆಹರೂ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಹೆಸರಲ್ಲಿ ಮೂರು ನಾಲ್ಕು ತಲೆಮಾರಿಗೆ ಆಗುವಷ್ಟನ್ನು ನಾವು ಮಾಡಿಕೊಂಡಿದ್ದೇವೆ.. ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗಂಟಾಘೋಷದ ನುಡಿ ಮುತ್ತುಗಳು‌ ಕಾಂಗ್ರೆಸ್ ಈ ದೇಶವನ್ನು ಲೂಟಿಗೈದು ದೇಶವಾಸಿಗಳಿಗೆ ಎಸಗಿರುವ ಘೋರ ದ್ರೋಹವನ್ನು ಪುಷ್ಠೀಕರಿಸಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಆರೋಪಿಸಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಜಾರಿ‌ ನಿರ್ದೇಶನಾಲಯದ ಮುಂದೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ವಿಚಾರಣೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭದಲ್ಲಿ ಸ್ವತ: ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಇಂತಹ ಹೇಳಿಕೆ ನೀಡಿರುವುದು ಕಾಂಗ್ರೆಸ್‌ನ ಮುಖವಾಡವನ್ನು ಕಳಚಿ ಕಾಂಗ್ರೆಸ್ ಅಧ:ಪತನಕ್ಕೆ ನಾಂದಿ ಹಾಡಿದಂತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಹಾಗೂ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಗತ್ತಿನ ಹಲವಾರು ರಾಷ್ಟ್ರಗಳ ವಿಷಮ ಪರಿಸ್ಥಿತಿಯನ್ನು ಅವಲೋಕಿಸಿದಾಗ‌ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೈಗೊಂಡಿರುವ ಕೆಲವೊಂದು ದೂರದರ್ಶಿತ್ವದ ನಿರ್ಧಾರಗಳು ಪ್ರಸಕ್ತವಾಗಿ ಕಹಿ ಎನಿಸಿದರೂ ದೇಶ ಹಿತಕ್ಕೆ ಪೂರಕವಾಗಿವೆ ಎಂದು ಅವರು ತಿಳಿಸಿದ್ದಾರೆ.
ಪ್ಯಾಕೇಜ್ಡ್ ಪದಾರ್ಥಗಳ‌ ಮೇಲೆ ಶೇ.5ರಷ್ಟು ಜಿಎಸ್ಟಿ ದರ ಹೆಚ್ಚಳ ವಿಚಾರವು ಎಲ್ಲ ರಾಜ್ಯಗಳ, ವಿವಿಧ ಪಕ್ಷಗಳ ಪ್ರತಿನಿಧಿಗಳ ಸಹಕಾರ ಮತ್ತು ಚರ್ಚೆಯ ಬಳಿಕ ಜಿಎಸ್‍ಟಿ ಮಂಡಳಿಗೆ ಬಂದಿದ್ದು, ಈ ನಿರ್ಧಾರದಲ್ಲಿ ಕಾಂಗ್ರೆಸ್ ಸಹಿತ ಇತರ ಪಕ್ಷಗಳ ಸರಕಾರಗಳ ಹಣಕಾಸು ಮಂತ್ರಿಗಳು ಭಾಗವಹಿಸಿ ಒಪ್ಪಿಗೆಯನ್ನು ಸೂಚಿಸಿರುವುದು ವಾಸ್ತವ.
ಕೋವಿಡ್ ಕಾಲಘಟ್ಟದ ಹೊರತಾಗಿಯೂ ದೇಶದ ಆರ್ಥಿಕ ಸ್ಥಿತಿ ಬಹಳಷ್ಟು ಸದೃಢವಾಗಿದೆ. ಇಂದು ಜಗತ್ತಿನ ವಿವಿಧ ದೇಶಗಳ ಜೊತೆ ಸ್ಪರ್ಧೆಯನ್ನು ಎದುರಿಸಿ ಐದು ಟ್ರಿಲಿಯನ್ ಇಕಾನಮಿ ಗುರಿಯೊಂದಿಗೆ ದೇಶವನ್ನು ವಿಶ್ವದ ಮುಂಚೂಣಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಂಪನ್ಮೂಲ ಕ್ರೋಡೀಕರಣ ಅನಿವಾರ್ಯವೆನಿಸಿದೆ.
ಈ ಪ್ರಕ್ರಿಯೆಯಿಂದ ದೇಶಕ್ಕೆ ಸುಮಾರು ರೂಪಾಯಿ 1,55,000 ಕೋಟಿ ಹೆಚ್ಚುವರಿ ಸಂಪನ್ಮೂಲ ನಿರೀಕ್ಷಿಸಲಾಗಿದೆ. ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿ ಸುಮಾರು ರೂಪಾಯಿ 7,000 ಕೋಟಿ ಸಂಪನ್ಮೂಲ ಸಂಗ್ರಹದ ನಿರೀಕ್ಷೆ ಇದೆ. ಈ ಹಿಂದೆ 2011ರಲ್ಲಿ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಲೀಗಲ್ ಮೆಟ್ರಾಲಜಿಕಲ್ (ಪ್ಯಾಕೇಜ್ಡ್ ಕಮಾಡಿಟೀಸ್) ರೂಲ್ಸ್ 2011ನ್ನು ಜಾರಿಗೆ ತಂದು ಪ್ಯಾಕಿಂಗ್ ಪದಾರ್ಥಗಳಿಗೆ ಜಿಎಸ್‍ಟಿ ವಿಧಿಸಿರುವ ಮಾದರಿಯಲ್ಲೇ ಪರಿಷ್ಕೃತ ನಿಲುವನ್ನು ಈಗ ತೆಗೆದುಕೊಳ್ಳಲಾಗಿದೆ ಎಂಬ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರ ಹೇಳಿಕೆ ಜಿಎಸ್ಟಿ ದರದ ವಸ್ತು ಸ್ಥಿತಿಯನ್ನು ಬಿಂಬಿಸುತ್ತದೆ.
ಪ್ರಸಕ್ತ ಜಿಎಸ್ಟಿ ದರ ಬದಲಾವಣೆಗೆ ಯಾವುದೇ ರಾಜ್ಯಗಳ ವಿರೋಧವಿಲ್ಲದೆ, ಸಲಹಾ ಸಮಿತಿಯ ಸಲಹೆಗಳನ್ನು ಪರಿಗಣಿಸಿ ಇಂತಹ ದೇಶ ಹಿತದ ದೂರದರ್ಶಿತ್ವದ ನಿರ್ಧಾರವನ್ನು‌ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಕೇವಲ ರಾಜಕೀಯ ದೃಷ್ಠಿಯಿಂದ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮನದಾಳದ ಮಾತಿನಿಂದ ಇದು ಸಾಬೀತಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply