ವಂಚನೆ ಪ್ರಕರಣ : ಆರೋಪಿ ಚೈತ್ರಾ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ – vishwanews24
ವಂಚನೆ ಪ್ರಕರಣ : ಆರೋಪಿ ಚೈತ್ರಾ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ವಂಚಿಸಿರುವ ಆರೋಪ ಕೇಸ್ನ ಆರೋಪಿ ಚೈತ್ರಾ ಬುಧವಾರ (ಡಿ.6) ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವ ಭರವಸೆ ನೀಡಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ 5 ಕೋಟಿ ರೂ. ಪಡೆದು ವಂಚಿಸಿದ ಆರೋಪದ ಮೇಲೆ ಸೆಪ್ಟೆಂಬರ್ 13 ರಂದು ಚೈತ್ರ ಅವರನ್ನು ಬಂಧಿಸಲಾಗಿತ್ತು.
ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿ ಕೊಂಡಿರುವ ಚೈತ್ರಾ ಸೇರಿದಂತೆ ಚಿಕ್ಕಮಗಳೂರು ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರು, ರಮೇಶ್, ಪ್ರಜ್ವಲ್, ಧನರಾಜ್, ಶ್ರೀಕಾಂತ್, ಹಾಲಶ್ರೀ ಸ್ವಾಮೀಜಿ ಸೇರಿ 9 ಮಂದಿಯನ್ನು ಸಿಸಿಬಿ ತಂಡ, ಉಡುಪಿ ಹಾಗೂ ಇತರ ಕಡೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.
ಆರಂಭದಲ್ಲಿ ಸೆಪ್ಟೆಂಬರ್ 23ರವರೆಗೆ ಸಿಸಿಬಿ ಕಸ್ಟಡಿಗೆ ಪಡೆದಿದ್ದರು. ಆ ಬಳಿಕ ಕೋರ್ಟ್ ಎರಡು ತಿಂಗಳು ನ್ಯಾಯಾಂಗ ಬಂಧನಕ್ಕೆ ಸೂಚಿಸಿತ್ತು. ಸೋಮವಾರ ಚೈತ್ರಾ ಹಾಗೂ 7ನೇ ಆರೋಪಿ ಶ್ರೀಕಾಂತ್ ಅವರಿಗೆ ಕೋರ್ಟ್ನಿಂದ ಬೇಲ್ ಸಿಕ್ಕಿತ್ತು. ಸದ್ಯ ಬಿಡುಗಡೆಯಾಗಿದ್ದಾರೆ.
