ಉಡುಪಿ: ಬಿಜೆಪಿಗರೇ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಕೇವಲ ಕನಸಿನ ಮಾತು : ಗೀತಾ ವಾಗ್ಲೆ – vishwanews24

Featured, ಉಡುಪಿ

ಮುಂದಿನ ದಿನಗಳಲ್ಲಿ ಬಿಜೆಪಿ ಮುಕ್ತ ಕರ್ನಾಟಕ ಹಾಗೂ ಭಾರತ ಮಾಡುವಲ್ಲಿ ಜನರೇ ಕಾರ್ಯತತ್ಪರರಾಗುತ್ತಾರೆ.. 

ಉಡುಪಿ: ಬಿಜೆಪಿಗರು ಪ್ರತಿನಿತ್ಯ ಅದೇ ರಾಗ ಅದೇ ಹಾಡು ಎಂಬಂತೆ ಕಾಂಗ್ರೆಸ್ ಮುಕ್ತ ಭಾರತ ಎಂಬ ಘೋಷವಾಕ್ಯವನ್ನು ಕೈ ಬಿಡುವುದು ಉತ್ತಮ. ಕಾಂಗ್ರೆಸ್ ಮುಕ್ತ ಭಾರತ ಅಥವಾ ಕರ್ನಾಟಕ ನಿರ್ಮಾಣ ಮಾಡುವುದು ಕೇವಲ ಕನಸಿನ ಮಾತು ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಗೀತಾ ವಾಗ್ಲೆ ಹೇಳಿದ್ದಾರೆ.

ಈ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೂಡ ಬಿಜೆಪಿಗರು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದಾಗಿ ಹೇಳಿಕೊಂಡು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಂದ ಹಿಡಿದು ಘಟಾನುಘಟಿ ನಾಯಕರು ಪ್ರಚಾರ ಮಾಡಿದರೂ ಕೂಡ ಬಿಜೆಪಿ ಪಕ್ಷವನ್ನು ರಾಜ್ಯದ ಜನತೆ ತಿರಸ್ಕಾರ ಮಾಡಿ 136 ಸೀಟುಗಳನ್ನು ಗೆಲ್ಲಿಸುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರವನ್ನು ನೀಡಿದ್ದಾರೆ ಎನ್ನುವುದನ್ನು ಬಿಜೆಪಿಗರು ಮರೆಯಬಾರದು.

ವಂಚನೆ ಪ್ರಕರಣ : ಆರೋಪಿ ಚೈತ್ರಾ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ – vishwanews24

ಅದರಂತೆ ಇತ್ತೀಚೆಗೆ ನಡೆದ ತೆಲಂಗಾಣ ರಾಜ್ಯದಲ್ಲಿ ಕೂಡ ಹಿಂದಿನ ಬಿ.ಆರ್.ಎಸ್ ಪಕ್ಷವನ್ನು ಮನೆಗೆ ಕಳುಹಿಸಿ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಒಲವು ತೋರಿದ್ದಾರೆ. ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಭರವಸೆಗಳನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗುತ್ತಿದ್ದು ಇದರ ಫಲಿತಾಂಶ ಮುಂದಿನ ದಿನಗಳಲ್ಲಿ ಬಿಜೆಪಿಗರು ತಮ್ಮ ಕಣ್ಣಾರೇ ನೋಡಲಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕೆಲವೊಂದು ಕಾರಣಗಳಿಗಾಗಿ ಬಿಜೆಪಿ ಪಕ್ಷದ ಶಾಸಕರು ಆರಿಸಿ ಬಂದರೂ ಕೂಡ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನ ಹರಿಸದೇ ಕೇವಲ ತಮ್ಮ ಸ್ವಂತ ಲಾಭಗಳನ್ನೇ ನೋಡಿಕೊಂಡು ಇರುವುದು ಮತ ಹಾಕಿ ಆರಿಸಿದ ಜನರಿಗೆ ಮಾಡುವ ಅತೀ ದೊಡ್ಡ ದ್ರೋಹವಾಗಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇದಕ್ಕೆ ಜಿಲ್ಲೆಯ ಜನರು ತಕ್ಕ ಉತ್ತರ ನೀಡಿಲಿದ್ದಾರೆ.

ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳಿಗೆ ದನಿಯಾಗಬೇಕಿದ್ದ ಬಿಜೆಪಿಯ ಶಾಸಕರು ಹಾಗೂ ಸಂಸದರು ಇದರ ಪರಿವೆಯೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಹಲವು ವರ್ಷಗಳಿಂದ ಬಾಕಿ ಇರುವ ಪರ್ಕಳ ರಸ್ತೆಯ ಕಾಮಗಾರಿ ಮುಗಿಯದಿರುವುದು, ಅಪೂರ್ಣವಾಗಿರುವ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ, ಕುಂಟುತ್ತಾ ಸಾಗುತ್ತಿರುವ ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ, ಇನ್ನೂ ಕೂಡ ಆರಂಭವಾಗದೇ ಪ್ರತಿನಿತ್ಯ ಸಾವಿರಾರು ಜನರು ತೊಂದರೆ ಅನುಭವಿಸುತ್ತಿರುವ ಮಲ್ಪೆ ತೀರ್ಥಹಳ್ಳೀ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹೀಗೆ ಒಂದೇ ಎರಡೇ. ಯಾವುದೇ ಅಭಿವೃದ್ಧಿಪರ ಚಿಂತನೆ ಮಾಡದೇ ಕೇವಲ ತಮ್ಮ ಸ್ವಂತ ವರ್ಚಸ್ಸು ಬೆಳೆಸುವುದರಲ್ಲೇ ಬಿಜೆಪಿಗರು ಮಗ್ನರಾಗಿದ್ದು ಮುಂದಿನ ದಿನಗಳಲ್ಲಿ ಬಿಜೆಪಿ ಮುಕ್ತ ಕರ್ನಾಟಕ ಹಾಗೂ ಭಾರತ ಮಾಡುವಲ್ಲಿ ಜನರೇ ಕಾರ್ಯತತ್ಪರರಾಗುತ್ತಾರೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಲೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ: ವಿಶ್ವ ವಿಶೇಷ ಚೇತನ ಮಕ್ಕಳ ದಿನಾಚರಣೆ  – vishwanews24

Leave a Reply