ಅಕ್ಟೋಬರ್ 2 ರಂದು‌ ಭವ್ಯ ಮೆರವಣಿಗೆಯೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ನೂತನ ಬ್ರಹ್ಮರಥದ ಸಮರ್ಪಣೆ -Vishwanews24

Featured, ದಕ್ಷಿಣ ಕನ್ನಡ

ಬಂಟ್ವಾಳ: ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಅಕ್ಟೋಬರ್ 2 ರಂದು‌ ದಾನಿಗಳಿಂದ ಸಮರ್ಪಣೆಯಾಗಲಿರುವ ಬ್ರಹ್ಮರಥವನ್ನು ಬಿ.ಸಿ.ರೋಡಿನಲ್ಲಿ ಅಕ್ಟೋಬರ್ 1 ರಂದು‌ ಬಂಟ್ವಾಳ ತುಳುಕೂಟ ಮತ್ತಿತರ ಸಂಘಟನೆಗಳ ವತಿಯಿಂದ ಸ್ವಾಗತಿಸಿ ಬೀಳ್ಕೊಡಲಾಗುವುದು ಎಂದು ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್ ಮತ್ತು ಪ್ರಧಾನ ಕಾರ್ಯದರ್ಶಿ ಎಚ್ಕೆ.ನಯನಾಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ನೂತನ ಬ್ರಹ್ಮರಥದ ಸಮರ್ಪಣೆಯ ಪೂರ್ವಭಾವಿಯಾಗಿ ಸೆ. 30ರಂದು ಬೆಳಿಗ್ಗೆ 9ಗಂಟೆಗೆ ಕೋಟೇಶ್ವರದಿಂದ ಸುಬ್ರಹ್ಮಣ್ಯದವರೆಗೆ ಭವ್ಯ ಮೆರವಣಿಗೆ ಹೊರಡಲಿದೆ.  ಬಳಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬ್ರಹ್ಮರಥದ ಸಮರ್ಪಣೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

2018ರ ಮಾರ್ಚ್‌ 15ರಂದು ಬ್ರಹ್ಮರಥದ ಕೆತ್ತನೆ ಕೆಲಸ ಆರಂಭಿಸಲಾಗಿದ್ದು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ ರಥವನ್ನು ನಿರ್ಮಿಸಿದ್ದಾರೆ. ಮಹಾಭಾರತ ಹಾಗೂ ರಾಮಾಯಣದಂತಹ ಅಭೂತ ಪೂರ್ವ ಶಿಲ್ಪ ಕಲಾಕೃತಿಯನ್ನು ರಥದಲ್ಲಿ ಕೆತ್ತಲಾಗಿದೆ ಎಂದರು.

ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದ ಬಳಿ ತುಳುಕೂಟ, ತಾಲೂಕಿನ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು, ಸಂಘ ಸಂಸ್ಥೆಗಳು ಹಾಗೂ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಭಕ್ತಾದಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಬ್ರಹ್ಮರಥಕ್ಕೆ ಭವ್ಯ ಸ್ವಾಗತ ನೀಡಲಾಗುವುದು. ರಥಕ್ಕೆ ಪುಷ್ಪಾರ್ಚಣೆಯೊಂದಿಗೆ ಸ್ವಾಗತಿಸಿ ಅಲ್ಲಿಂದ ಚೆಂಡೆವಾದನ ಮತ್ತಿತರ ಸಾಂಸ್ಕ್ರತಿಕ ಪ್ರದರ್ಶನಗಳೊಂದಿಗೆ ರಾಜರಸ್ತೆಯಲ್ಲಿ ಸಾಗಿ ಬಿ.ಸಿ.ರೋಡು ವೃತ್ತ ಬಳಿ ಬ್ರಹ್ಮರಥವನ್ನು ಶ್ರೀ ಕ್ಷೇತ್ರಕ್ಕೆ ಬೀಳ್ಕೊಡಲಾಗುವುದು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ಶ್ರೀನಿವಾಸ್‌ ಶೆಟ್ಟಿಗಾರ್‌ ಬಾರ್ಕೂರು, ಗೌರವ ಸಲಹೆಗಾರ ಸುಧಾಕರ್‌ ರಾವ್‌, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಅಮೀನ್‌, ಕಾರ್ಯಾಧ್ಯಕ್ಷ ಶರತ್‌ ಶೆಟ್ಟಿ, ಹೋರಾಟ ಸಮಿತಿ ಅಧ್ಯಕ್ಷ ಕರುಣಾಕರ ಪೂಜಾರಿ ಇದ್ದರು.