ಅಕ್ರಮ ಜಾಗದಲ್ಲಿ ನಿರ್ಮಿಸಿದ ದಲಿತ ವೃದ್ಧೆಯ ಮನೆ ಕೆಡವಿ ಹಾಕಿದ ಕಂದಾಯ ಇಲಾಖೆ-ಶಿರ್ವ ಗ್ರಾಮ ಪಂಚಾಯತ್ ಮುಂಭಾಗ ಕಾಂಗ್ರೇಸ್ ಪ್ರತಿಭಟನೆ-ಪಿಡಿಓ ಹಾಗೂ ಸೊರಕೆ ನಡುವೆ ನೂಕಾಟ-ತಲ್ಲಾಟ-ತಲ್ಲಾಟದ ರಭಸಕ್ಕೆ ಹರಿದ ಸೊರಕೆಯ ಶರ್ಟ್:vishwanews24
ಅಕ್ರಮ ಜಾಗದಲ್ಲಿ ನಿರ್ಮಿಸಿದ ದಲಿತ ವೃದ್ಧೆಯ ಮನೆ ಕೆಡವಿ ಹಾಕಿದ ಕಂದಾಯ ಇಲಾಖೆ
ಶಿರ್ವ ಗ್ರಾಮ ಪಂಚಾಯತ್ ಮುಂಭಾಗ ಕಾಂಗ್ರೇಸ್ ಪ್ರತಿಭಟನೆ
ಪಿಡಿಓ ಹಾಗೂ ಸೊರಕೆ ನಡುವೆ ನೂಕಾಟ-ತಲ್ಲಾಟ
ತಲ್ಲಾಟದ ರಭಸಕ್ಕೆ ಹರಿದ ಸೊರಕೆಯ ಶರ್ಟ್
ಕಾಪು: ಕಾಪು ತಾಲೂಕು ಶಿರ್ವ ಗ್ರಾಮದ ಸರ್ವೆ ಸಂಖ್ಯೆ ೪೪೧/೧ಬಿಪಿ೧ ರಲ್ಲಿ ಸರ್ಕಾರಿ ಜಮೀನಿನಲ್ಲಿ ದಲಿತ ಜನಾಂಗಕ್ಕೆ ಸೇರಿದ ಶ್ರೀಮತಿ ಪದ್ಮಬಾಯಿ ಎಂಬವರು ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ತಗಡಿನ ಗುಡಿಸಲು ಮನೆ ನಿರ್ಮಾಣ ಮಾಡಿಕೊಂಡಿದ್ದು ಈ ಪೈಕಿ ಕಂದಾಯ ಇಲಾಖೆ ದಿನಾಂಕ ೦೪/೦೪/೨೦೨೦ ನೇ ಸೋಮವಾರ ಜೆಸಿಬಿ ಮುಖಾಂತರ ಮನೆಯೊಳಗಿದ್ದ ದಿನಸಿ ಬಟ್ಟೆ ಸಾಮಾಗ್ರಿಗಳ ಸಹಿತವಾಗಿ ಅಕ್ರಮ ಮನೆಯನ್ನು ಕೆಡವಿ ಹಾಕಿದ್ದರಿ . ಈ ವಿಚಾರವನ್ನು ಖಂಡಿಸಿ ಇಂದು ಶಿರ್ವ ಗ್ರಾಮ ಪಂಚಾಯತ್ ಮುಂಭಾಗ ಮಾಜಿ ಸಚಿವ, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆಯ ಮುಂದಾಲತ್ವದಲ್ಲಿ ಬಡ ಕುಟುಂಬಕ್ಕೆ ನ್ಯಾಯ ದೊರಕಬೇಕೆಂಬ ದೃಷ್ಟಿಯಿಂದ ಪ್ರತಿಭಟನೆ ನಡೆಸಿ ಪಿಡಿಓ ಮುಖಾಂತರ ಮನವಿ ಸಲ್ಲಿಸುವ ಸಮಯದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸೊರಕೆಯ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂಧರ್ಬದಲ್ಲಿ ಗುಂಪಾಗಿ ಸೇರಿದ್ದ ಪ್ರತಿಭಟನಕಾರರ ನೂಕಾಟ ತಲ್ಲಾಟದಲ್ಲಿ ಮಾಜಿ ಸಚಿವ ಸೊರಕೆಯ ಶರ್ಟ್ ಹರಿದ ಘಟನೆ ನಡೆದಿದೆ.

ಬಿಜೆಪಿ ಕಾರ್ಯಕರ್ತರ ಜೈ ಶ್ರೀರಾಮ್ ಘೋಷಣೆ
ಈ ಸುದ್ದಿ ಹರಿದಾಡುತ್ತಿದ್ದಂತೆ ಸ್ಥಳಕ್ಕೆ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು ಸೊರಕೆಯ ವಿರುದ್ದ ಹಾಗೂ ಕಾಂಗ್ರೇಸ್ ಪಕ್ಷದ ವಿರುದ್ಧ ಘೋಷಣೆ ಕೂಗಿದ್ದು ಮಾತ್ರವಲ್ಲದೆ ವಂದೇ ಮಾತರಂ ಹಾಗೂ ಜೈ ಶ್ರೀರಾಮ್ ಘೋಷಣೆ ಕೂಗಿದರು.
ನೋಟಿಸ್ ನೀಡಿದ ಎರಡೇ ದಿನ ಆಗಿತ್ತು.
ಈ ಪೈಕಿ ಅಕ್ರಮ ಜಾಗದಲ್ಲಿ ನಿರ್ಮಾಣವಾಗಿದ್ದ ಮನೆಯನ್ನು ತೆರವು ಮಾಡುವಂತೆ ದಲಿತ ಕುಟುಂಬಕ್ಕೆ ಎರಡು ದಿನ ಹಿಂದೆ ನೋಟಿಸ್ ನೀಡಲಾಗಿತ್ತು ಆದರೇ ಆ ಕುಟುಂಬ ೯೪ಸಿಸಿ ಅಡಿಯಲ್ಲಿ ಅರ್ಜಿ ನೀಡಿರುವುದರಿಂದ ಸುಮ್ಮನಾಗಿದ್ದರು.

ಪಿಡಿಓ ಸರ್ವಾಧಿಕಾರಿ ಧೋರಣೆಗೆ ಕೆಂಡಾಮಂಡಳವಾದ ಸೊರಕೆ
ಮನವಿ ಸಲ್ಲಿಸಲು ಪಂಚಾಯತ್ ಆಗಮಿಸಿದ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಸೊರಕೆ ಪಿಡಿಓ ಜತೆ ಒಂದಿಷ್ಟು ಪ್ರಶ್ನೆಗಳನ್ನುಮಾಡಿದ ಸಮಯದಲ್ಲಿ ಉಡಾಫೆ ಉತ್ತರ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ತೋರ್ಪಡಿಸಿದ್ದರಿಂದ ಮಾಜಿ ಸಚಿವರು ಪಂಚಾಯತ್ ಅಭಿವೃದ್ದಿ ಅಧಿಕಾರಿಯ ವಿರುದ್ದ ಕೆಂಡಾಮಂಡಳವಾದರು.

ಸ್ಥಳಕ್ಕೆ ಭೇಟಿ ನೀಡಿದ ತಹಾಶಿಲ್ದರ್ ಕುಲಕರ್ಣಿ
ಘಟನಾ ಸ್ಥಳಕ್ಕೆ ಕಾಪು ತಾಲೂಕಿನ ತಹಾಶಿಲ್ದಾರ್ ಶ್ರೀನಿವಾಸ ಕುಲಕರ್ಣಿ ಭೇಟಿ ನೀಡಿ ವಿನಯ್ ಕುಮಾರ್ ಸೊರಕೆಯ ಮನವೊಲಿಸಲು ಪ್ರಯತ್ನಿಸಿ ಮನೆ ಕಳೆದುಕೊಂಡ ದಲಿತ ಕುಟುಂಬಕ್ಕೆ ಶೀಘ್ರವಾಗಿ ನ್ಯಾಯ ಒದಗಿಸುವ ಬಗ್ಗೆ ಮಾಹಿತಿ ನೀಡಿದರು.

