ಆದಿಚುಂಚನಗಿರಿ ಮಠದ ಗುರುಭೈರವೈಕ್ಯ ಮಂದಿರ ಉದ್ಘಾಟಿಸಿದ ಪ್ರಧಾನಿ ಮೋದಿ – vishwanews24
ಆದಿಚುಂಚನಗಿರಿ ಮಠದ ಗುರುಭೈರವೈಕ್ಯ ಮಂದಿರ ಉದ್ಘಾಟಿಸಿದ ಪ್ರಧಾನಿ ಮೋದಿ
ಮಂಡ್ಯ: ಆದಿಚುಂಚನಗಿರಿ ಮಠದಲ್ಲಿ ದ್ರಾವಿಡ-ಹೊಯ್ಸಳ ಶೈಲಿಯ ಶಿಲ್ಪಕಲೆಯಿಂದ ನಿರ್ಮಿಸಿರುವ ಶ್ರೀಗುರು ಭೈರವೈಕ್ಯ ಮಂದಿರದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದರು.
ಇಂದು ಮಂಡ್ಯಗೆ ಆಗಮಿಸಿ ಪ್ರಧಾನಿ ಮೋದಿ ಮಠದಲ್ಲಿ ಭೈರವೈಕ್ಯ ಮಂದಿರ ಲೋಕಾರ್ಪಣೆ ಮಾಡಿದರು. ಬಳಿಕ ಕಾಲಭೈರವೇಶ್ವರನಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಈ ವೇಳೆ ಪ್ರಧಾನಿ ಮೋದಿಗೆ ಆದಿಚುಂಚನಗಿರಿ ಶ್ರೀಗಳು ತಿಲಕವಿಟ್ಟು ಆಶೀರ್ವದಿಸಿದರು
ದೇಗುಲ ಉದ್ಘಾಟನೆ ಬಳಿಕ ಭೈರವೈಕ್ಯ ಬಾಲಗಂಗಾಧರನಾಥ ಶ್ರೀ ಮೂರ್ತಿಗೆ ಮೋದಿ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ದೇಗುಲ ವೀಕ್ಷಿಸಿದರು. ಈ ವೇಳೆ, ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಪ್ರಧಾನಿಗೆ ಸಾಥ್ ನೀಡಿದರು.
ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿರುವ ಡಾ. ಬಾಲಗಂಗಾಧರನಾಥ ಶ್ರೀಗಳ ಅಂತ್ಯಸಂಸ್ಕಾರದ ಸ್ಥಳದಲ್ಲಿನ ಮಂಗಳ ಮಂಟಪದ ಮೇಲೆ 26,250 ಚದರ ಅಡಿ ವಿಸ್ತೀರ್ಣದಲ್ಲಿ ಭೈರವೈಕ್ಯ ಮಂದಿರ ನಿರ್ಮಾಣವಾಗಿದೆ. ಮಂದಿರಕ್ಕಾಗಿ ಸುಮಾರು 80 ಕೋಟಿ ರೂ. ವೆಚ್ಚ ಮಾಡಲಾಗಿದೆ.
