ಇನ್ನಾದರೂ ಶಾಂತಿಯುತ ಬದುಕಿಗೆ ಮರಳಿ ಬನ್ನಿ: ಕಾಶ್ಮೀರಿ ಜನರಿಗೆ ಬಿಪಿನ್ ರಾವತ್ ಮನವಿ -Vishwanews24
ನವದೆಹಲಿ: ‘ಕಣಿವೆ ರಾಜ್ಯದ ಜನರು ಶಾಂತಿ ಅನುಭವಿಸಿಲ್ಲ. ಇನ್ನಾದರೂ ಮನಸ್ಸು ಬದಲಿಸಿ. ಬಂದೂಕು ಕೆಳಗಿಡಿ, ಶಾಂತಿಯನ್ನು ಅಪ್ಪಿಕೊಳ್ಳಿ’ ಎಂದು ಭೂಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಮನವಿ ಮಾಡಿದ್ದಾರೆ.
‘ಹಿಂದೂಸ್ತಾನ್ ಟೈಮ್ಸ್’ಗೆ ವಿಶೇಷ ಸಂದರ್ಶನ ನೀಡಿರುವ ರಾವತ್, 30 ವರ್ಷ ರಕ್ತ ಸುರಿಸಿ ಸಾಧಿಸಿದ್ದಾದರೂ ಏನು? ಇನ್ನಾದರೂ ಶಾಂತಿಯುತ ಬದುಕಿಗೆ ಮರಳಿ ಬನ್ನಿ ಎಂದು ವಿನಂತಿಸಿದ್ದಾರೆ.
ಸಂವಿಧಾನದ 370ನೇ ವಿಧಿ ರದ್ದತಿ ನಿರ್ಧಾರ ಮತ್ತು ಅದನ್ನು ಘೋಷಿಸಲು ಆರಿಸಿಕೊಂಡ ಸಮಯದ ಬಗ್ಗೆ ಕೇಂದ್ರ ಸರ್ಕಾರವನ್ನು ಶ್ಲಾಘಿಸಿರುವ ಅವರು, ಯಾವುದೇ ಪರಿಸ್ಥಿತಿ ಎದುರಿಸಲು ಸೇನೆ ಸನ್ನದ್ಧವಾಗಿದೆ ಎಂದಿದ್ದಾರೆ.
‘ಪಾಕಿಸ್ತಾನವನ್ನು ಆರ್ಥಿಕ ಕಾರ್ಯಪಡೆಯು ಕಪ್ಪುಪಟ್ಟಿಗೆ ಸೇರಿಸಿದರೆ, ಆ ದೇಶವು ಒಂದು ರೀತಿಯಲ್ಲಿ ದಿಗ್ಬಂಧನ ಅನುಭವಿಸುವ ಸ್ಥಿತಿ ತಲುಪುತ್ತದೆ. ಈಗ ಪಾಕಿಸ್ತಾನವು ಉಗ್ರಗಾಮಿ ಸಂಘಗಳ ವಿರುದ್ಧ ಏನಾದರೂ ಮಾಡಲೇಬೇಕಾದ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಕ್ರಮ ಮಹತ್ವ ಪಡೆದುಕೊಳ್ಳುತ್ತದೆ’ ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.
‘ಈ ಬಾರಿ ನಾವು ಉಗ್ರಗಾಮಿಗಳಿಗೂ ಶಾಂತಿಯುತ ಜೀವನಕ್ಕೆ ಮರಳಿಬರಲು ಅವಕಾಶ ಕೊಡುತ್ತಿದ್ದೇವೆ. ಅವರ ಬೆನ್ನಟ್ಟುತ್ತಿಲ್ಲ, ತಪಾಸಣೆ ಮತ್ತು ಗುಂಡಿನ ಚಕಮಕಿಗಳೂ ಕಡಿಮೆಯಾಗಿವೆ. ಯಾರದೋ ಮಾತು ಕೇಳಿ ಬದುಕು ಹಾಳುಮಾಡಿಕೊಳ್ಳಬೇಡಿ. ಸಿಕ್ಕಿರುವ ಅವಕಾಶ ಸದುಪಯೋಗಪಡಿಸಿಕೊಳ್ಳಿ. ಬಂದೂಕು ಕೆಳಗಿಡಿ’ ಎಂದು ಕಿವಿಮಾತು ಹೇಳಿದ್ದಾರೆ.
