ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳಿಗೆ ಮೆಡಿಕಲ್ ಕಾಲೇಜುಗಳಲ್ಲಿ ಕಲಿಕೆಗೆ ನೆರವಾಗಲು ಹೊಸ ಸಮಿತಿ ರಚನೆ : ಡಾ.ಕೆ ಸುಧಾಕರ್ -Vishwanews24
ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳಿಗೆ ಮೆಡಿಕಲ್ ಕಾಲೇಜುಗಳಲ್ಲಿ ಕಲಿಕೆಗೆ ನೆರವಾಗಲು ಹೊಸ ಸಮಿತಿ ರಚನೆ : ಡಾ.ಕೆ ಸುಧಾಕರ್ -Vishwanews24
ಬೆಂಗಳೂರು: ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳಿಗೆ ಮೆಡಿಕಲ್ ಕಾಲೇಜುಗಳಲ್ಲಿ ಕಲಿಕೆಗೆ ನೆರವಾಗಲು ಹೊಸ ಸಮಿತಿ ರಚನೆ ಮಾಡಿರುವುದಾಗಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿಕೆ ನೀಡಿದರು.
ಉಕ್ರೇನ್ ವಿದ್ಯಾರ್ಥಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸುಧಾಕರ್, ಉಕ್ರೇನ್ನಿಂದ ಕರ್ನಾಟಕಕ್ಕೆ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇಫಾಗಿ ಬಂದಿದ್ದಾರೆ. ಅವರ ಜೊತೆ ಸಭೆ ನಡೆಸುವಂತೆ ಸಿಎಂ ಹೇಳಿದ್ದರು. ಹೀಗಾಗಿ ಇಂದು ಸಭೆ ನಡೆಸಿದ್ದೇವೆ ಎಂದರು.
ಉಕ್ರೇನ್ನಿಂದ ಬಂದಿರುವ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಾರದು. ರಾಜ್ಯದಲ್ಲಿ 60 ಮೆಡಿಕಲ್ ಕಾಲೇಜುಗಳು ಇವೆ. ತಕ್ಷಣಕ್ಕೆ ಅದೇ ಕಾಲೇಜುಗಳಲ್ಲಿ ಉಕ್ರೇನ್ನಿಂದ ಬಂದಿರುವ ವಿದ್ಯಾರ್ಥಿಗಳು ಕಲಿಕೆ ಮುಂದುವರಿಸಬಹುದು. ವಿದ್ಯಾರ್ಥಿಗಳು ಇರುವ ಜಿಲ್ಲೆಗಳಲ್ಲೇ ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ನಾನು ಸಮಿತಿಯೊಂದನ್ನು ರಚನೆ ಮಾಡಿದ್ದೇನೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಈ ಸಮಿತಿ ರಚನೆಯಾಗಿದೆ. ಉಕ್ರೇನ್ನಿಂದ ವಾಪಸ್ ಆಗಿರುವ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಏನೇನು ಕ್ರಮಗಳನ್ನು ಕೈಗೊಳ್ಳಬಹುದು ಎಂದು ಸಮಿತಿ ವರದಿ ನೀಡಲಿದೆ. ಒಂದು ವಾರ ಅಥವಾ 10 ದಿನಗಳಲ್ಲಿ ಸಮಿತಿ ವರದಿ ಕೊಡಲಿದೆ. ಇದನ್ನ ನಾವು ಕೇಂದ್ರಕ್ಕೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ನ್ಯಾಯ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನ ನಡೆಸಿದ್ದಾರೆ. ಯುದ್ಧ ಬಹಳ ಬೇಗ ಮುಗಿಯುವ ಲಕ್ಷಣ ಇದೆ. ಇರುವ ನಿಯಮಗಳಡಿ ಅವರ ಭವಿಷ್ಯ ರೂಪಿಸುವ ಕೆಲಸ ಮಾಡುತ್ತೇವೆ. ಅವರು ಬದುಕಿ ಬಂದಿರುವುದೇ ನಮ್ಮ ಭಾಗ್ಯ. ನಿಮ್ಮ ಭವಿಷ್ಯ ಉಜ್ವಲವಾಗಬೇಕು. ಮಾನಸಿಕವಾಗಿ ಕುಗ್ಗಬಾರದು. ಎಲ್ಲಾ ರೀತಿಯ ಸಹಕಾರವನ್ನು ಕೊಡುವ ಕೆಲಸ ನಾವು ಮಾಡುತ್ತೇವೆ ಎಂದು ಭರವಸೆ ನೀಡಿದರು
