ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ : ಪ್ರಧಾನಿಗೆ ಮುಸ್ಲಿಂ ಬಾಂಧವ್ಯ ವೇದಿಕೆ ಮನವಿ – vishwanews24
ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ, ಗೋಹತ್ಯೆ, ಗೋಮಾಂಸ ರಫ್ತನ್ನು ನಿಷೇಧಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ
ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ, ಗೋಹತ್ಯೆ ಮತ್ತು ಗೋಮಾಂಸ ರಫ್ತನ್ನು ಸಂಪೂರ್ಣ ವಾಗಿ ನಿಷೇಧಿಸುವ ಕಟ್ಟುನಿಟ್ಟಿನ ಕಾನೂನು ರೂಪಿಸಬೇಕೆಂದು ಕರ್ನಾಟಕ ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹಿಸಿದೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ವಕ್ತಾರ ಮುಸ್ತಾಕ್ ಹೆನ್ನಾಬೈಲು, ಈ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸ ಲಾಗುವುದು ಎಂದು ತಿಳಿಸಿದರು.
ಬಿಜೆಪಿ ಸರಕಾರ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಗೋವಿನ ವಿಚಾರದ ರಾಜಕೀಯ ವಿಲಕ್ಷಣ ಮತ್ತು ವಿಚಿತ್ರವಾಗಿದೆ. ಇಡೀ ದೇಶದಲ್ಲಿರುವ ಮಾಂಸ ರಫ್ತು ಮಾಡುವ 10ಕ್ಕೂ ಹೆಚ್ಚು ದೊಡ್ಡ ರಫ್ತು ಕೇಂದ್ರಗಳು ಮುಸ್ಲಿಮರ ನಕಲಿ ಹೆಸರನ್ನು ಇಟ್ಟುಕೊಂಡು ಮುಸ್ಲಿಮರಲ್ಲದವರು ಅಕ್ರಮವಾಗಿ ನಡೆಸುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಆಡಳಿತದಲ್ಲಿರುವ ಉತ್ತರ ಪ್ರದೇಶ ರಾಜ್ಯದಿಂದ ವಿದೇಶಕ್ಕೆ ಅತ್ಯಂತ ಹೆಚ್ಚು ಗೋಮಾಂಸ ರಫ್ತಾಗುತ್ತಿದೆ ಎಂದು ಅವರು ದೂರಿದರು.

ಆಡಳಿತದಲ್ಲಿರುವ ಗೋವಾ ಮತ್ತು ಬಹುತೇಕ ಈಶಾನ್ಯ ರಾಜ್ಯಗಳಲ್ಲಿ ಗೋಮಾಂಸ ಸೇವನೆಗೆ ಯಾವುದೇ ಕಾನೂನು ಅಡ್ಡಿಯಿಲ್ಲದೇ ಮುಕ್ತ ಅವಕಾಶ ನೀಡಲಾಗಿದೆ. ಗೋವಿನ ಕುರಿತಂತೆ ಯಾವುದೇ ಕಾಳಜಿ ಮತ್ತು ಸೂಕ್ಷ್ಮತೆ ಇಲ್ಲದೇ ದೇಶದೊಳಗೆ ಬಿಜೆಪಿ ನಾಯಕರು ಒಳಗೊಂದು ಹೊರಗೊಂದು ನೀತಿಯನ್ನು ಅನುಸರಿಸುತ್ತಿದ್ದಾರೆಂದು ಅವರು ಟೀಕಿಸಿದರು.
ಭಾರತ ಇಡೀ ಜಗತ್ತಿನಲ್ಲಿಯೇ ಗೋಮಾಂಸ ರಫ್ತಿನಲ್ಲಿ ಎರಡನೇ ಸ್ಥಾನವನ್ನು ಗಳಿಸಿಕೊಂಡಿದೆ. ಗೋ ಹತ್ಯೆಯನ್ನು ನಿಷೇಧಿಸಿರುವ ಪುಟ್ಟ ರಾಷ್ಟ್ರ ನೇಪಾಳದ ಆದರ್ಶ ನೀತಿಗಳನ್ನು ಬಿಜೆಪಿ ಸರಕಾರವು ಅನುಸರಿಸಬೇಕು. ಹಿಂದೂತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಗೋ ಹತ್ಯೆ ಮತ್ತು ಗೋಮಾಂಸ ರಫ್ತು ನಿಷೇಧದ ಕುರಿತ ಬಹುಸಂಖ್ಯಾತರ ಭಾವನೆಗಳಿಗೆ ಬೆಲೆ ಕೊಡದೆ ಯಾವುದೇ ಪೂರಕ ಕ್ರಮಗಳನ್ನು ಕೈಗೊಳ್ಳದಿರುವುದು ಬೇಸರ ಮೂಡಿಸಿದೆ ಎಂದರು.
ಗೋವಿನ ವಿಚಾರದಲ್ಲಿ ಏಕದೇಶ-ಏಕ ಕಾನೂನು ನೀತಿ ಯಡಿಯಲ್ಲಿ ಇಡೀ ದೇಶದಲ್ಲಿ ಗೋ ಹತ್ಯೆ, ಮಾಂಸ ರಫ್ತನ್ನು ನಿಷೇಧಿಸುವ ಕಾನೂನು ರೂಪಿಸಬೇಕು. ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು. ದೇಶಾದ್ಯಂತ ವಿರುವ ಎಲ್ಲ ಕಸಾಯಿಖಾನೆಗಳನ್ನು ಮುಚ್ಚಿ, ಗೋಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಮಾಂಸಕ್ಕಾಗಿ ಗೋ ಹತ್ಯೆ ಮಾಡುವವರನ್ನು ಮತ್ತು ರಫ್ತು ಕೇಂದ್ರಗಳನ್ನು ನಡೆಸುವವರನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಕಳದ ಧರ್ಮಗುರು ಅಬ್ದುಲ್ ಹಾಫಿಝ್ ಖಾಸಿಮಿ, ವೇದಿಕೆಯ ಅಧ್ಯಕ್ಷ ಝಾಕೀರ್ ಹುಸೇನ್ ಉಚ್ಚಿಲ, ಸಾಮಾಜಿಕ ಕಾರ್ಯಕರ್ತರಾದ ಇಬ್ರಾಹಿಂ ನಡುಪದವು, ಕೋಟ ಇಬ್ರಾಹಿಂ ಸಾಹೇಬ್ ಉಪಸ್ಥಿತರಿದ್ದರು.
