ಉಡುಪಿ: ಮಕ್ಕಳ ಸುರಕ್ಷೆ ಬಗ್ಗೆ ಎಚ್ಚರ ಇರಲಿ, ಆತಂಕ ಬೇಡ ; ಅನುಮಾನಾಸ್ಪದ ವರ್ತನೆ ಕಂಡರೆ ಮಾಹಿತಿ ನೀಡಿ :ಎಸ್ಪಿ ಹರಿರಾಮ್ ಶಂಕರ್ -vishwanews24
ಉಡುಪಿ: ಮಕ್ಕಳ ಸುರಕ್ಷೆ ಬಗ್ಗೆ ಎಚ್ಚರ ಇರಲಿ, ಆತಂಕ ಬೇಡ ; ಅನುಮಾನಾಸ್ಪದ ವರ್ತನೆ ಕಂಡರೆ ಮಾಹಿತಿ ನೀಡಿ :ಎಸ್ಪಿ ಹರಿರಾಮ್ ಶಂಕರ್
ಉಡುಪಿ: ಮಕ್ಕಳನ್ನು ಗುರಿಯಾಗಿಸಿ ಕೊಂಡು ಅಪರಿಚಿತರು ಚಾಕಲೇಟ್, ಸಿಹಿತಿಂಡಿ ಅಥವಾ ಇತರ ಆಹಾರ ಪದಾರ್ಥಗಳನ್ನು ನೀಡಿ ಅಪಹರಿಸಲಿದ್ದಾರೆ ಎಂಬ ಸಂದೇಶ ಈಗ ಉಡುಪಿ ನಗರದ ಬಹುತೇಕ ಎಲ್ಲ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಹಂಚಿಕೆಯಾಗುತ್ತಿದ್ದು, ಈ ಬಗ್ಗೆ ಪೊಲೀಸರು ಆಡಿಯೋ ಸಂದೇಶ ಮೂಲ ಪತ್ತೆಗೆ ಮುಂದಾಗಿದ್ದಾರೆ. ಆದರೆ ಈ ಬಗ್ಗೆ ಯಾವುದೇ ದೂರು, ಪ್ರಕರಣ ಈವರೆಗೂ ದಾಖಲಾಗಿಲ್ಲ.
ಆಡಿಯೋ ಸಂದೇಶ ಎಲ್ಲೆಡೆ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಅನೇಕ ಶಾಲೆಯ ಗ್ರೂಪ್ಗ್ಳಲ್ಲೂ ಮಕ್ಕಳ ಸುರಕ್ಷೆ ಬಗ್ಗೆ ಎಚ್ಚರ ವಹಿಸಲು ಪಾಲಕ, ಪೋಷಕರಿಗೆ ಸಂದೇಶ ರವಾನಿಸಲಾಗಿದೆ.
ಆಡಿಯೋ ಸಂದೇಶದಲ್ಲಿ ಏನಿದೆ?
ಆ. 30ರ ಸಂಜೆ 7 ಗಂಟೆಗೆ ಮಗ ಟ್ಯೂಷನ್ ಮುಗಿಸಿ ಬರುವ ಸಂದರ್ಭದಲ್ಲಿ ದೊಡ್ಡಣಗುಡ್ಡೆ ಮಸೀದಿ ಸಮೀಪ ಅಪರಿಚಿತ ವ್ಯಕ್ತಿಗಳಿಬ್ಬರು ದ್ವಿಚಕ್ರ ವಾಹನದಲ್ಲಿ ಬಂದು ಮಗನನ್ನು ಕರೆದು ಮನೆಗೆ ಬಿಡುತ್ತೇವೆ ಎಂದು ಚಾಕಲೇಟ್ ನೀಡಲು ಬಂದಿದ್ದಾರೆ. ಅಲ್ಲೇ ಸ್ವಲ್ಪ ಮುಂದೆ ಇನ್ನೊಬ್ಬ ವ್ಯಕ್ತಿ ಮಾಸ್ಕ್ ಧರಿಸಿ ನಿಂತಿದ್ದನು. ಇದೇ ಸಂದರ್ಭದಲ್ಲಿ ಎರಡು ಕಡೆಯಿಂದ ಆಟೋ ಬಂದಾಗ ಬೈಕ್ನವರು ದೊಡ್ಡಣಗುಡ್ಡೆ ಮೈದಾನ ರಸ್ತೆಯಿಂದ ಪಾಸಾಗಿದ್ದಾರೆ. ಮಗ ಚಾಕಲೇಟ್ ರಸ್ತೆಗೆ ಎಸೆದು ಮನೆಗೆ ಬಂದಿದ್ದಾನೆ. ಈ ಬಗ್ಗೆ ದೊಡ್ಡಣಗುಡ್ಡೆ ಸುತ್ತಲಿನ ಸಿಸಿ ಕೆಮರಾ ಪರಿಶೀಲಿಸಿದಾಗ ಈ ಭಾಗದ ಯಾವ ಸಿಸಿ ಕೆಮರಾದಲ್ಲೂ ತಾಂತ್ರಿಕ ಕಾರಣದಿಂದ ಹುಡುಕಲು ಸಾಧ್ಯವಾಗಿಲ್ಲ. ಹೀಗಾಗಿ ಮಕ್ಕಳನ್ನು ರಸ್ತೆಗೆ ಬಿಡುವಾಗ ಎಚ್ಚರ ವಹಿಸಿ ಎಂದು ಮಹಿಳೆಯೊಬ್ಬರ ಧ್ವನಿಯಲ್ಲಿ ವಾಟ್ಸ್ಆ್ಯಪ್ ಸಂದೇಶ ಎಲ್ಲೆಡೆ ಹರಿದಾಡುತ್ತಿದೆ.
ಅಪರಿಚಿತರಿಂದ ಏನನ್ನೂ ಸ್ವೀಕರಿಸಬೇಡಿ
ವಿದ್ಯಾರ್ಥಿಗಳು ಅಪರಿಚಿತ ವ್ಯಕ್ತಿಗಳಿಂದ ಚಾಕಲೇಟ್, ಸಿಹಿತಿಂಡಿ, ಆಹಾರ ಪದಾರ್ಥ, ಪಾನೀಯ ಅಥವಾ ಯಾವುದೇ ಉಡುಗೊರೆಗಳನ್ನು ಸ್ವೀಕರಿಸ ಬಾರದು ಎಂದು ಹಲವು ಶಾಲೆಗಳಿಂದ ಸೂಚನೆ ನೀಡಲಾಗಿದೆ. ಪರಿಚಯವಿಲ್ಲದ ವ್ಯಕ್ತಿಗಳು ಮಕ್ಕಳೊಂದಿಗೆ ಅನಗತ್ಯವಾಗಿ ಮಾತನಾಡುವುದು, ಹಿಂಬಾಲಿಸುವುದು ಅಥವಾ ಯಾವುದಾದರೂ ವಸ್ತು ನೀಡಲು ಮುಂದಾಗುವುದು ಕಂಡುಬಂದರೆ ಕೂಡಲೇ ಪೋಷಕರು ಅಥವಾ ಶಿಕ್ಷಕರ ಗಮನಕ್ಕೆ ತರಬೇಕು. ಟ್ಯೂಷನ್, ವಿಶೇಷ ತರಗತಿ ಅಥವಾ ಇತರ ಶೈಕ್ಷಣಿಕ ಚಟುವಟಿಕೆಗಳು ಮುಗಿಸಿ ಸಂಜೆ ಅಥವಾ ರಾತ್ರಿ ಮನೆಗೆ ಮರಳುವ ಮಕ್ಕಳ ಸುರಕ್ಷೆಯತ್ತ ಪೋಷಕರು ಹೆಚ್ಚಿನ ಗಮನಹರಿ ಸಬೇಕು.
ಸಾಧ್ಯವಾದಲ್ಲಿ ಪೋಷಕರೇ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಸಾಧ್ಯವಾಗದ ಸಂದರ್ಭಗಳಲ್ಲಿ ಕುಟುಂಬಕ್ಕೆ ವಿಶ್ವಾಸಾರ್ಹ ವ್ಯಕ್ತಿಯೊಂದಿಗೆ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸುವುದು ಸೂಕ್ತ. ನಿರ್ಜನ ಪ್ರದೇಶ ಅಥವಾ ಜನಸಂಚಾರ ಕಡಿಮೆ ಇರುವ ಮಾರ್ಗಗಳಲ್ಲಿ ಒಬ್ಬಂಟಿಯಾಗಿ ಸಂಚರಿಸುವುದನ್ನು ತಪ್ಪಿಸಬೇಕು. ಶಾಲೆ ಅಥವಾ ಟ್ಯೂಷನ್ ಕೇಂದ್ರದಿಂದ ಮನೆಗೆ ತೆರಳಲು ಸಾಧ್ಯವಾದಷ್ಟು ಪರಿಚಿತ ಹಾಗೂ ಜನಸಂಚಾರ ಇರುವ ಮಾರ್ಗವನ್ನೇ ಬಳಸುವಂತೆ ಶಾಲೆಗಳಿಂದ ಸೂಚನೆ ರವಾನಿಸಲಾಗಿದೆ.
ಅನುಮಾನಾಸ್ಪದ ವರ್ತನೆ ಕಂಡರೆ ಮಾಹಿತಿ ನೀಡಿ
ಮಕ್ಕಳ ಸುತ್ತಮುತ್ತ ಅಪರಿಚಿತ ವ್ಯಕ್ತಿ ಅನುಮಾನಾಸ್ಪದವಾಗಿ ವರ್ತಿಸುವುದು, ಮಕ್ಕಳನ್ನು ಹಿಂಬಾಲಿಸುವುದು ಅಥವಾ ಅವರೊಂದಿಗೆ ಅನಗತ್ಯ ಸಂಪರ್ಕಕ್ಕೆ ಮುಂದಾಗುವುದು ಕಂಡು ಬಂದರೆ, ತತ್ಕ್ಷಣ ಪೋಷಕರು, ಶಿಕ್ಷಕರು/ ಪೊಲೀಸರ ಗಮನಕ್ಕೆ ತರಬೇಕು.
ಪೊಲೀಸ್ ಸಂಪರ್ಕ ಸಂಖ್ಯೆ 112
ಉಡುಪಿಯಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಹೀಗಾಗಿ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಮಕ್ಕಳ ಬಗ್ಗೆ ಎಚ್ಚರ ಇರಬೇಕು. ದೊಡ್ಡಣಗುಡ್ಡೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ, ದೂರು ಬಂದಿಲ್ಲ. ಹೀಗಾಗಿ ಆಡಿಯೋ ಹರಿಬಿಟ್ಟ ಕುಟುಂಬವನ್ನು ಖುದ್ದಾಗಿ ಪೊಲೀಸ್ ಇಲಾಖೆಯೇ ಸಂಪರ್ಕಿಸಿ ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಲಿದೆ.
– ಹರಿರಾಮ್ ಶಂಕರ್,
ಪೊಲೀಸ್ ವರಿಷ್ಠಾಧಿಕಾರಿ,
