ಉಡುಪಿ: ರಾಜ್ಯ ಸರಕಾರ ಕೂಡಲೇ ಲವ್ ಜೆಹಾದ್ ತಡೆ ಕಾನೂನು ಜಾರಿಗೆ ತರಬೇಕು : ಬಜರಂಗದಳ ಆಗ್ರಹ – Vishwanews24
ಉಡುಪಿ: ರಾಜ್ಯ ಸರಕಾರ ಕೂಡಲೇ ಲವ್ ಜೆಹಾದ್ ತಡೆ ಕಾನೂನು ಜಾರಿಗೆ ತರಬೇಕು : ಬಜರಂಗದಳ ಆಗ್ರಹ
ಉಡುಪಿ: ಹಿಂದೂ ಯುವತಿಯರು ಲವ್ ಜೆಹಾದ್ಗೆ ಸಿಲುಕಿ ಉಗ್ರ ಚಟುವಟಿಕೆಗೆ ತೊಡಗಿಸಿಕೊಂಡಿರುವ ಪ್ರಕರಣಗಳು ಕಣ್ಣ ಮುಂದೆಯೇ ನಡೆಯುತ್ತಿದ್ದು, ರಾಜ್ಯ ಸರಕಾರ ಕೂಡಲೆ ಲವ್ ಜೆಹಾದ್ ತಡೆ ಕಾನೂನು ಜಾರಿಗೆ ತರಬೇಕು ಎಂದು ಬಜರಂಗದಳ ರಾಜ್ಯ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್ ಕೆ. ಆರ್. ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ವ್ಯವಸ್ಥಿತ ಜಾಲ ವಾಗಿದ್ದು ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿ, ಪ್ರೇಮದ ಹೆಸರಿನಲ್ಲಿ ಮತಾಂತರಿಸಿ ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಮಂಗಳೂರಿನಲ್ಲಿ ಎನ್ ಐಎ ದಾಳಿ ಸಂದರ್ಭ ಇಸ್ಲಾಂಗೆ ಮತಾಂತರಗೊಂಡ ಹಿಂದೂ ಯುವತಿ ದೀಪ್ತಿ ಮಾರ್ಲ ಉಗ್ರ ಚಟುವಟಿಕೆ ಆರೋಪದಲ್ಲಿ ಬಂಧಿತಳಾಗಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ ಎಂದರು.
ಕರಾವಳಿ ಉಗ್ರರ ಪ್ರಯೋಗಶಾಲೆಯಾಗುತ್ತಿರುವುದು ಆತಂಕಕಾರಿ. ಉಳ್ಳಾಲದಲ್ಲಿ ಎನ್ಐಎ ಕಚೇರಿ ಸ್ಥಾಪನೆ ಆಗಬೇಕು ಎಂದು ಆಗ್ರಹಿಸಿದ ಅವರು ಶಾಲೆ-ಕಾಲೇಜುಗಳಲ್ಲಿ ವಸ್ತ್ರಸಂಹಿತೆಗೆ ಗೌರವ ಕೊಡಬೇಕು. ಧರ್ಮ, ಧಾರ್ಮಿಕ ಸ್ವಾತಂತ್ರ್ಯ ಹೆಸರಲ್ಲಿ ಹಿಜಾಬ್ ಧರಿಸುವುದು ಶೋಭೆಯಲ್ಲ. ಎಲ್ಲರೂ ವಸ್ತ್ರ ಸಂಹಿತೆ ಪಾಲಿಸಬೇಕು ಎಂದರು. ಜಿಲ್ಲಾ ಸಂಯೋಜಕ ಸುರೇಂದ್ರ ಕೋಟೇಶ್ವರ, ಮಂಗಳೂರು ಸಂಯೋಜಕ ಪುನಿತ್ ಅತ್ತಾವರ, ಪುತ್ತೂರು ಸಂಯೋಜಕ ಭರತ್ ಕುಂಡೇಲ್ ಉಪಸ್ಥಿತರಿದ್ದರು.
ಬೆಂಗಳೂರು: ವಿದೇಶಗಳಿಂದ ಬಂದ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯ – Vishwanews24
