ಎಲ್ಲೆಡೆ ​ ತಿರಸ್ಕರಿಸಿದರೂ ಕಾಂಗ್ರೆಸ್ ಅಹಂಕಾರ ಮಾತ್ರ ಕಡಿಮೆಯಾಗಿಲ್ಲ: ಪ್ರಧಾನಿ ನರೇಂದ್ರ ಮೋದಿ

Featured, ಜಿಲ್ಲೆ

ಕಾಂಗ್ರೆಸ್​ನವರಿಗೆ ದೇಶ ಹಾಗೂ ಹಿರಿಯರ ಬಗ್ಗೆ ಕಾಳಜಿಯಿಲ್ಲ. ಕೂತಾಗ, ನಿಂತಾಗ ಹಾಗೂ ಮಲಗಿದಾಗಲೂ ಅವರಿಗೆ ಪ್ರಧಾನಿ ಕುರ್ಚಿಯ ಚಿಂತೆ. 2004 ರಿಂದ 10 ವರ್ಷಗಳ ಕಾಲ ಕಾಂಗ್ರೆಸ್ ಆಳ್ವಿಕೆ ಮಾಡಿತ್ತು. ಈಗ ಎಲ್ಲೆಡೆ ಪಕ್ಷವನ್ನು ತಿರಸ್ಕರಿಸಲಾಗುತ್ತಿದೆ. ಆದರೂ ಅಹಂಕಾರ ಕಡಿಮೆಯಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದರು.

ಕಾಫಿನಾಡಿನಲ್ಲಿ ಬುಧವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು ಕಾಂಗ್ರೆಸ್​ನೊಳಗೆ ಪ್ರಜಾಪ್ರಭುತ್ವದ ಯಾವುದೇ ಲಕ್ಷಣವಿಲ್ಲ. ತನ್ನ ಕುಟುಂಬ ಹಾಗೂ ಸಂತತಿಗೋಸ್ಕರ ಅಧಿಕಾರದ ತಂತ್ರ ಮಾಡುತ್ತಿದೆ. ಚುನಾವಣೆ ಸೋತಾಗ ಇವಿಎಂಗಳ ದೋಷ ಎಂದು ಹೇಳುತ್ತಿದೆ. ಭಾರತದ ಚುನಾವಣಾ ಆಯೋಗದ ಬಗ್ಗೆ ಎಲ್ಲೆಡೆ ಪ್ರಶಂಸೆ ಇದೆ. ಆದರೆ, ಕಾಂಗ್ರೆಸ್ ಮಾತ್ರ ಆಯೋಗದ ಮೇಲೆ ದೋಷಾರೋಪ ಹೊರಿಸುತ್ತೆ ಎಂದು ಕಿಡಿಕಾರಿದರು.

ಕನ್ನಡದಲ್ಲಿ ಭಾಷಣ ಆರಂಭ
ಚಿಕ್ಕಮಗಳೂರಿನ ಮಹಾ ಜನತೆಗೆ ನನ್ನ ನಮಸ್ಕಾರಗಳು. ಶೃಂಗೇರಿ ಶಾರದಾಂಬೆ, ಹೊರನಾಡು ಅನ್ನಪೂರ್ಣೇಶ್ವರಿ ದೇವಿ ಹಾಗೂ ಗುರು ದತ್ತಾತ್ರೇಯರಿಗೆ ಭಕ್ತಿ ಪೂರ್ವಕ ನಮನಗಳು. ಶೃಂಗೇರಿ ಶಂಕರಾಚಾರ್ಯ, ರಂಭಾಪುರಿ ರೇಣುಕಾಚಾರ್ಯರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು.

ಕಾಂಗ್ರೆಸ್​ನವರಿಗೆ ಸೋಲುವ ಭೀತಿ
ಕಾಂಗ್ರೆಸ್​ನವರಿಗೆ ಸೋಲುವ ಭೀತಿ ಶುರುವಾಗಿದೆ. ಹೀಗಾಗಿ​ ಈ ಚುನಾವಣೆಯಲ್ಲಿ ಯಾರಿಗೂ ಬಹುಮತ ಬರಲ್ಲ. ಸಮ್ಮಿಶ್ರ ಸರ್ಕಾರ ರಚನೆಯಾಗುತ್ತೆ ಎಂದು ಹೇಳುತ್ತಾರೆ. ಆದರೆ, ಈ ಬಾರಿ ಬಿಜೆಪಿ ಬಹುಮತದಿಂದ ಸರ್ಕಾರ ರಚಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಾಂಧವ್ಯ ಬೆಳೆಯುವ ಭೂಮಿಯಲ್ಲಿ ಒಡಕು
ಇದು ಶಂಕರಾಚಾರ್ಯರ ಭೂಮಿ, ಧರ್ಮ ಹಾಗೂ ಅದ್ವೈತ ಸಿದ್ಧಾಂತವನ್ನು ದೇಶದ ಎಲ್ಲೆಡೆ ಪಸರಿಸಿದ ಭೂಮಿ. ಶಾರದಾ ಪೀಠ ಹಾಗೂ ರಂಭಾಪುರಿ ಪೀಠ ಹಿಂದು ಧರ್ಮದ ಸಾರ ಸಾರುತ್ತಿದೆ. ಸೋದರ ಬಾಂಧವ್ಯ ಬೆಳೆಯುವ ಇಂತಹ ಭೂಮಿಯಲ್ಲಿ ಒಡಕು ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಆರೋಪಿಸಿದರು.

ಗೆದ್ದು ಹೋದ ಮೇಲೆ ವಾಪಸ್​ ಬರಲಿಲ್ಲ
ಅಧಿಕಾರವನ್ನು ಪಡೆದು ಸುಖವನ್ನು ಪಡೆದ ಕಾಂಗ್ರೆಸ್​ನವರು ಯಾರಿಗೂ ಒಳ್ಳೆಯದನ್ನು ಮಾಡಿಲ್ಲ. 1978ರಲ್ಲಿ ಭಾರತದಲ್ಲಿ ಕಾಂಗ್ರೆಸ್​ ಧೂಳೀಪಟವಾಗಿತ್ತು. ಆಗ ಚಿಕ್ಕಮಗಳೂರಿಗೆ ಇಂದಿರಾಗಾಂಧಿ ಬಂದಿದ್ದರು. ಗೆದ್ದು ಹೋದ ಮೇಲೆ ಇಂದಿರಾ ಗಾಂಧಿ ವಾಪಸ್​ ಬಂದಿದ್ರಾ? ನಮ್ಮನ್ನು ಮರುಳು ಮಾಡುವ ಜನರ ಬಗ್ಗೆ ವಿಶ್ವಾಸವಿಡಬೇಕಾ? ಬಳ್ಳಾರಿಗೆ ಬಂದು ಸೋನಿಯಾ ಕಣ್ಣೀರು ಹಾಕಿ ಗೆದ್ದು ಹೋದರು. ಆಮೇಲೆ ಬಳ್ಳಾರಿಗೆ ಏನು ಮಾಡಿದರು? ಈಗ ಇಲ್ಲಿಗೆ ಬಂದು ಅವರ ಮಗ ರಾಹುಲ್ ಓಡಾಡ್ತಿದ್ದಾರೆ. ಆದರೆ, ಅವರು 2004ರಿಂದ ಅಮೇಥಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಲ್ಲಿ ಏನಾದರೂ ಅಭಿವೃದ್ಧಿ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ತಾನು ಮಾತ್ರ ಸರಿ ಎಂಬ ಧೋರಣೆ
ರಾಷ್ಟ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ ಹಾಗೂ ಎನ್​ಐಎ ಸರಿಯಲ್ಲ ಎಂದು ಕಾಂಗ್ರೆಸ್ ಹೇಳುತ್ತೆ. ಭಾರತ ಸೇನೆ ಸರ್ಜಿಕಲ್​ ಸ್ಟ್ರೈಕ್​ ಮಾಡಿದಾಗಲೂ ತಪ್ಪು ಎಂಬ ಮಾತನ್ನು ಕಾಂಗ್ರೆಸ್ ಹೇಳುತ್ತೆ. ದೇಶದ ಸುರಕ್ಷತೆ ದೃಷ್ಟಿಯಿಂದ ನಕ್ಸಲರು ಹಾಗೂ ದ್ರೇಶದ್ರೋಹಿಗಳ ಹತ್ಯೆ ಮಾಡಲಾಗಿದೆ. ಇಂಥ ವಿಷಯಗಳಲ್ಲಿ ತಪ್ಪು ಹುಡುಕಿ ತಾನು ಮಾತ್ರ ಸರಿ ಎಂಬ ಧೋರಣೆಯನ್ನು ಕಾಂಗ್ರೆಸ್ ​ಹೊಂದಿದೆ ಎಂದು ಮೂದಲಿಸಿದರು.