ಕಡಬ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೆ.4, 7 ಎರಡು ದಿನ ಆಶ್ಲೇಷಬಲಿ, ಸರ್ಪಸಂಸ್ಕಾರ ಸೇವೆಗಳು ರದ್ದು – vishwanews24
ಕಡಬ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೆ.4, 7 ಎರಡು ದಿನ ಆಶ್ಲೇಷಬಲಿ, ಸರ್ಪಸಂಸ್ಕಾರ ಸೇವೆಗಳು ರದ್ದು
ಕಡಬ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ದಶಮಿ-ಏಕಾದಶಿ ವ್ರತಗಳ ಹಿನ್ನೆಲೆಯಲ್ಲಿ ಬರುವ ಸೆಪ್ಟಂಬರ್ ತಿಂಗಳ ಕೆಲವು ನಿರ್ದಿಷ್ಟ ದಿನಗಳಂದು ಧಾರ್ಮಿಕ ವಿಶೇಷ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಆದರೆ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ದೇವರ ದರ್ಶನ ಹಾಗೂ ದಿನನಿತ್ಯದ ಪೂಜಾ ಕಾರ್ಯಕ್ರಮಗಳಲ್ಲಿ ಯಾವುದೇ ಅಡಚಣೆ ಇರುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಸೆಪ್ಟಂಬರ್ 3 ಮತ್ತು 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಇರುವ ಕಾರಣ ಹಾಗೂ ದಶಮಿ ಮತ್ತು ಏಕಾದಶಿ ಹಿನ್ನೆಲೆಯಲ್ಲಿ 6,7 ರಂದು ವಿಶೇಷ ಸೇವೆಗಳು ಲಭ್ಯವಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ. ಇನ್ನು ಸೆಪ್ಟಂಬರ್ 4 ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಸೆ.7ರಂದು ಏಕಾದಶಿ ಇರುವ ಕಾರಣದಿಂದ ಆಶ್ಲೇಷಬಲಿ, ನಾಗಪ್ರತಿಷ್ಠೆ ಹಾಗೂ ಮಹಾಭಿಷೇಕಸೇವೆಗಳು ನಡೆಯುವುದಿಲ್ಲ. ಹಾಗಾಗಿ ಈ ದಿನದಂದು ಭಕ್ತರಿಗೆ ದರ್ಶನಕ್ಕೆ ಮಾತ್ರ ಅವಕಾಶ ಇದೆ ಎಂದು ಹೇಳಲಾಗಿದೆ.
ಇದನ್ನೂ ಓದಿ :
ವಿಶೇಷ ಸೇವೆಗಳು ರದ್ದಾಗಿದ್ದರೂ ದೇವಸ್ಥಾನದ ದೈನಂದಿನ ಧಾರ್ಮಿಕ ಕೈಂಕರ್ಯಗಳು ತಡೆರಹಿತವಾಗಿ ನಡೆಯಲಿವೆ. ಮಹಾಪೂಜೆ, ಶೇಷಸೇವೆ, ಅಭಿಷೇಕ ಹಾಗೂ ಅರ್ಚನೆ ಸೇರಿದಂತೆ ದಿನನಿತ್ಯದ ಎಲ್ಲಾ ಸೇವೆಗಳು ಯಥಾವತ್ತಾಗಿ ನೆರವೇರುತ್ತವೆ. ಶ್ರೀದೇವರ ದರ್ಶನ ಪಡೆಯಲು ಆಗಮಿಸುವ ಭಕ್ತಾದಿಗಳಿಗೆ ಯಾವುದೇ ರೀತಿಯ ವ್ಯತ್ಯಯವಾಗುವುದಿಲ್ಲ.
ಕ್ಷೇತ್ರಕ್ಕೆ ಆಗಮಿಸಿ ಸರ್ಪಸಂಸ್ಕಾರ, ಆಶ್ಲೇಷಬಲಿ, ನಾಗಪ್ರತಿಷ್ಠೆ ಹಾಗೂ ಮಹಾಭಿಷೇಕ ಮುಂತಾದ ವಿಶೇಷ ಪೂಜೆಗಳನ್ನು ನೆರವೇರಿಸಲು ಯೋಜಿಸಿರುವ ಭಕ್ತಾದಿಗಳು ಈ ಮೇಲ್ಕಂಡ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣ ಹಾಗೂ ಸೇವಾ ಮುಂಗಡ ಕಾಯ್ದಿರಿಸುವಿಕೆಯನ್ನು ಯೋಜಿಸಿಕೊಳ್ಳಬೇಕು. ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಜಂಟಿಯಾಗಿ ಈ ಪ್ರಕಟಣೆ ಹೊರಡಿಸಿದ್ದು, ದೇವಸ್ಥಾನದ ಸುಗಮ ನಿರ್ವಹಣೆಗೆ ಭಕ್ತಾದಿಗಳು ಸಂಪೂರ್ಣ ಸಹಕಾರ ನೀಡಬೇಕಾಗಿ ವಿನಂತಿಸಿದ್ದಾರೆ.
ಇದನ್ನೂ ಓದಿ :
ಅಂಗನವಾಡಿ ಕಾರ್ಯಕರ್ತೆ : ಸಹಾಯಕಿಯರ ಹುದ್ದೆ ; ಅರ್ಜಿ ಆಹ್ವಾನ – vishwanews24
