ಕನ್ನಡಿಗರ ಬಗ್ಗೆ ನಿಜವಾಗಲೂ ಕಾಳಜಿ ಇದ್ದರೆ, ಪ್ರಧಾನಿಗೆ ಪತ್ರ ಬರೆದು ಅನ್ನಭಾಗ್ಯಕ್ಕಾಗಿ ಅಕ್ಕಿ ಕೊಡಿಸಿ : ಪ್ರಿಯಾಂಕ್ ಖರ್ಗೆ – Vishwanews24
ಕನ್ನಡಿಗರ ಬಗ್ಗೆ ನಿಜವಾಗಲೂ ಕಾಳಜಿ ಇದ್ದರೆ, ಪ್ರಧಾನಿಗೆ ಪತ್ರ ಬರೆದು ಅನ್ನಭಾಗ್ಯಕ್ಕಾಗಿ ಅಕ್ಕಿ ಕೊಡಿಸಿ : ಪ್ರಿಯಾಂಕ್ ಖರ್ಗೆ
ಕಲಬುರಗಿ: ಕನ್ನಡಿಗರ ಬಗ್ಗೆ ನಿಜವಾಗಲೂ ಕಾಳಜಿ ಇದ್ದರೆ, ಪ್ರೀತಿಯಿದ್ದರೆ ಮೊದಲು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಅನ್ನಭಾಗ್ಯಕ್ಕಾಗಿ ಅಕ್ಕಿ ಕೊಡಿಸಿ ಕನ್ನಡಿಗರ ಅಸ್ಮಿತೆ ಉಳಿಸಲಿ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಒಂದು ಕಾಳು ಕಡಿಮೆಯಾದರೂ ಅನ್ನಭಾಗ್ಯ ಅಕ್ಕಿ ತಗೋಬೇಡಿ ಎಂದು ಸರಕಾರದ ವಿರುದ್ಧ ಜನರಿಗೆ ಚೇತರಿಸುವ ಬದಲು, ಕನ್ನಡಿಗರ ಹಸಿವು ನೀಗಿಸಲು ಮುಂದಾಗಲಿ. ಅವರೂ ಮುಖ್ಯಮಂತ್ರಿ ಯಾಗಿದ್ದವರು. ಅವರ ಮಾತಿಗಾದರೂ ಬಿಜೆಪಿ ಹೈಕಮಾಂಡ್ ಕಿಮ್ಮತ್ತು ನೀಡಿ 3400 ರೂ. ಗಳಲ್ಲಾದರೂ ಕ್ವಿಂಟಾಲ್ ಅಕ್ಕಿ ಕೊಡಿಸಲಿ ನಾವು ಸನ್ಮಾನ ಮಾಡುತ್ತೇವೆ ಎಂದರು.
ಫುಡ್ ಕಾರ್ಪೋರೇಷನ್ ಇಂಡಿಯಾ ಜೂನ್ 12ಕ್ಕೆ ನಮ್ಮ ಸರಕಾರದ ಪತ್ರಕ್ಕೆ ಉತ್ತರಿಸಿ 3400 ರೂ ಕ್ವಿಂಟಾಲ್ ನಂತೆ 2.28 ಮೆ.ಟನ್ ಅಕ್ಕಿ ಕೊಡುವುದಾಗಿ ಹೇಳಿ ಮರುದಿನವೇ , ಜೂನ್ 13 ರಂದು ಕರ್ನಾಟಕಕ್ಕೆ ಕೊಡಲಿಕ್ಕಾಗುವುದಿಲ್ಲ. ಇತರೆ ರಾಜ್ಯಗಳಿಗೆ ಹಿಂದಿನಂತೆ ನಿರಂತರವಾಗಿ ಕೊಡಲಾಗುವುದು ಎಂದು ಪತ್ರ ಬರೆದಿದೆ. ಬಿಜೆಪಿಯವರು ಕನ್ನಡಿಗರ ಅನ್ನಭಾಗ್ಯಕ್ಕೆ ಅಡ್ಡಿ ಪಡಿಸುವ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.
ರಾಜ್ಯಕ್ಕೆ ಅಕ್ಕಿ ನಿರಾಕರಣೆ ಆರೋಪ; ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ – Vishwanews24
ಬಿಜೆಪಿಯ ಈ ಸೇಡಿನ ರಾಜಕಾರಣ ಕನ್ನಡಿಗರ ಅಸ್ಮಿತೆಗೆ ಧಕ್ಕೆ ಉಂಟು ಮಾಡುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಕನ್ನಡಿಗರು ನಮ್ಮ ಮಾತು ಕೇಳಲಿಲ್ಲ. ಮೋದಿ ಅವರ ಕೈ ಬಲಪಡಿಸಲಿಲ್ಲ. ಬಿಜೆಪಿಗೆ ವೋಟು ಮಾಡದಿದ್ದರೆ ಮೋದಿ ಆಶೀರ್ವಾದ ಸಿಗುವುದಿಲ್ಲವೆಂದು ಹೇಳಿದ್ದರು. ಈಗ ಆಶೀರ್ವಾದದ ಗೂಢಾರ್ಥ ಗೊತ್ತಾಗುತ್ತಿದೆ. ಪುಡ್ ಕಾರ್ಪೊರೇಷನ್ ಮುಖೇನ ನಮ್ಮ ಯೋಜನೆ ತಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಏನೇ ಆದರೂ ನಾವು ಮತ್ತು ನಮ್ಮ ಸಿಎಂ, ಡಿಸಿಎಂ ಸೇರಿ ಶತಾಯ ಗತಾಯ ಜುಲೈ 1ರಿಂದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುವುದು ಎಂದರು.
25 ಸಂಸದರು ಬಾಯಿ ಬಿಟ್ಟು ಕೇಳಿ: ರಾಜ್ಯದ 25 ಜನ ಸಂಸದರಿದ್ದಾರೆ. ಅವರೆಲ್ಲರೂ ಸಂಸತ್ತಿನಲ್ಲಿ ಮೋದಿ ಅವರಿಗೆ ಪ್ರಶ್ನಿಸಿ, ನಾವು (ಕರ್ನಾಟಕ) ಹಣ ಕೊಟ್ಟು ಅಕ್ಕಿ ಖರೀದಿಸಲು ಅವಕಾಶ ಕೊಡಲಿ. ಅಷ್ಟಾದರೂ ಮಾಡಿ ಕನ್ನಡಿಗರ ಋಣ ತೀರಿಸಲಿ ಎಂದರು.
ಸಚಿವ ಡಾ.ಶರಣಪ್ರಕಾಶ ಪಾಟೀಲ, ಶಾಸಕರಾದ ಅಲ್ಲಂಪ್ರಭು ಪಾಟೀಲ, ಎಮ.ವೈ.ಪಾಟೀಲ, ಕನೀಜ್ ಫಾತಿಮಾ ಸೇರಿದಂತೆ ಇತರರು ಇದ್ದರು.
