ಕರ್ನಾಟಕದ ರಾಜ್ಯದ ರಾಜಕೀಯ ಕೇಮಿಸ್ಟ್ರೀ ಅರ್ಥಮಾಡಿಕೊಳ್ಳದ ಮೋದಿ, ಶಾ, ಪಾಪಪಾಂಡುಗಳು:ಐವನ್ ವ್ಯಂಗ್ಯ
ಕಾಪು, ಮೇ 4: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕನಸು ರಾಜ್ಯದಲ್ಲಿ ನನಸೂ ಆಗದು ತಂತ್ರವೂ ನಡೆಯದು ಕರ್ನಾಟಕದ ರಾಜ್ಯದ ರಾಜಕೀಯ ಕೇಮಿಸ್ಟ್ರೀ ಅರ್ಥಮಾಡಿಕೊಳ್ಳದ ಮೋದಿ, ಶಾ, ಪಾಪಪಾಂಡುಗಳು ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ವಿಶ್ವಾಸ ಹೇಳಿದರು.
ಕಾಪು ಪ್ರೆಸ್ ಕ್ಲಬ್ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದ್ದು, 130ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಮೋದಿ ಮತ್ತು ಶಾ ಅವರ ತಂತ್ರ ಇಲ್ಲಿ ನಡೆಯುವುದಿಲ್ಲ. ದೇಶದ ಬೇರೆ ರಾಜ್ಯಗಳಿಗೂ ಕರ್ನಾಟಕಕ್ಕೂ ವ್ಯತ್ಯಾಸ ಇದೆ ಎಂದರು.
ಕರಾವಳಿಯಲ್ಲಿ ಬಿಜೆಪಿಗೆ ಯಾವುದೇ ರೀತಿಯ ಬೆಂಬಲ ಇಲ್ಲ. ಬಿಜೆಪಿಯ ಕುಟಿಲ ತಂತ್ರ ಜನರಿಗೆ ಅರಿವಾಗಿದೆ. ಕರಾವಳಿಯಲ್ಲೂ ಮತದಾರರು ಕಾಂಗ್ರೆಸ್ ಪರ ಇದ್ದು, ಕರಾವಳಿಯ ಸುಳ್ಯ, ಕಾರ್ಕಳ ಸೇರಿ ಎಲ್ಲಾ 13ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದೆ ಎಂದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ಹಲವಾರು ಜನಪರ ಯೋಜನೆಗಳಿಂದಾಗಿ ಮತದಾರರು ಕಾಂಗ್ರೆಸ್ನತ್ತ ಒಳವು ತೋರಿದ್ದಾರೆ. ಇದರಿಂದಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬುವುದು ಪಕ್ಷದ ಆಂತರಿಕ ಸರ್ವೇಗಳಿಂದ ತಿಳಿದಿದೆ ಎಂದ ಡಿಸೋಜ, ಹೇಗಾದರೂ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎನ್ನುವ ನಿಟ್ಟಿನಲ್ಲಿ ಬಿಜೆಪಿಯು ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಪರವಾಗಿ ಚುನಾವಣೆ ಎದುರಿಸಲು ಆಗುವುದಿಲ್ಲ ಎಂಬುವುದು ಬಿಜೆಪಿಗೆ ತಿಳಿದಿದೆ. ಅದಕ್ಕಾಗಿ ಬೇರೆ ಬೇರೆ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತಿದ್ದಾರೆ.
ಶಾ ಅವರು ಯಡೊಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳಿಕೊಂಡಿದ್ದರು. ಆದರೆ ಈಗ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬುವುದು ಗೊತ್ತಾದ ಬಳಿಕ ರೆಡ್ಡಿ ಬ್ರದರ್ಸ್ನ್ನು ಸೇರಿಸಿಕೊಂಡು ಚುನಾವಣೆಯನ್ನು ಮುಂದಿಟ್ಟಿದ್ದಾರೆ ಎಂದರು.
ಸಿದ್ದರಾಮಯ್ಯ ಅವರಿಗೆ 2-1 ಫಾರ್ಮುಲ ಹೇಳುತ್ತಾರೆ ಆದರೆ ಲೋಕಸಭಾ ಚುನಾವಣೆಯಲ್ಲಿ ಮೋದಿವರೇ ಎರಡು ಕಡೆಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಶ್ರೀರಾಮುಲು ಮತ್ತು ಕುಮಾರಸ್ವಾಮಿ ಅವರು ಎರಡು ಕಡೆಗಳಲ್ಲಿ ಸ್ಪರ್ಧಿಸುತಿದ್ದಾರೆ. ಈಗ ಈ ಫಾರ್ಮುಲ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಜಗತ್ ಪ್ರಸಿದ್ಧ ಉಡುಪಿಯ ಕೃಷ್ಣ ಪ್ರಧಾನಿ ನರೇಂದ್ರ ಮೋದಿ ಅವರು ಕೃಷ್ಣ ಮಠಕ್ಕೆ ಭೇಟಿ ನೀಡದೆ ಇರುವುದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಅವರು ಭಧ್ರತೆ ಕಾರಣ ನೀಡಿದ್ದಾರೆ. ಈ ಹೇಳಿಕೆಯ ಮೂಲಕ ಅವರು ಉಡುಪಿಯ ಜನತೆಯನ್ನು ಅದರಲ್ಲೂ ಕೃಷ್ಣ ಮಠವನ್ನು ಅವಮಾನಿಸಿದ್ದಾರೆ ಎಂದು ಐವನ್ ಡಿಸೋಜ ಹೇಳಿದರು.
ದೇವಸ್ಥಾನಕ್ಕೆ ಬರಲು ಭದ್ರತೆ ಬೇಕೆ. ಇಲ್ಲಿ ಅಂತಹ ಆಗಂತುಕರು ಯಾರಿದ್ದಾರೆ. ಪಾಕಿಸ್ಥಾನಕ್ಕೆ ಭದ್ರತೆ ಇಲ್ಲದೆ ತೆರಳುವ ಮೋದಿಯವರು ಉಡುಪಿಯ ದೇವಸ್ಥಾನಕ್ಕೆ ಬರುವಾಗ ಭದ್ರತೆ ಬೇಕೆ. ಪ್ರಧಾನಿ ಆಗಿ ಭದ್ರತೆ ಒದಗಿಸಲು ಸಾಧ್ಯವಾಗದೆ ಇದ್ದರೆ ಸಾಮಾನ್ಯರಿಗೆ ಹೇಗೆ ಭದ್ರತೆ ಒದಗಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಬ್ಲಾಕ್ ಅಧ್ಯಕ್ಷ ನವೀನ್ಚಂದ್ರ ಜೆ.ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಶಿವಾಜಿ ಸುವರ್ಣ, ಅಬ್ದುಲ್ ಅಝೀರ್ ಹೆಜಮಾಡಿ, ಗುಲಾಂ ಮುಹಮ್ಮದ್, ದಿನೇಶ್ ಕೋಟ್ಯಾನ್, ಮೆಲ್ವಿನ್ ಡಿಸೋಜ, ನವೀನ್ ಎನ್.ಶೆಟ್ಟಿ, ಪ್ರಶಾಂತ್ ಜತ್ತನ್ನ, ಗುರುರಾಜ್ ಪೂಜಾರಿ, ಅಬ್ದುಲ್ ರಹ್ಮಾನ್, ಫಾರೂಕ್ ಚಂದ್ರನಗರ ಮತ್ತಿತರರು ಉಪಸ್ಥಿತರಿದ್ದರು.

