ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ : ಕುಮಾರಸ್ವಾಮಿ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ‘ಮುಂದಿನ ಏಪ್ರಿಲ್‌ನಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಅದು ಸಾಧ್ಯವೇ ಇಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

2013ರಲ್ಲಿ ಯಡಿಯೂರಪ್ಪ ಅವರು ಪ್ರತ್ಯೇಕ ಪಕ್ಷ ಕಟ್ಟಿದ್ದರಿಂದಾಗಿ ಮಾತ್ರ ಕಾಂಗ್ರೆಸ್‌ಗೆ ಅಧಿಕಾರ ದೊರೆಯಿತು. ಕಳೆದ ಚುನಾವಣೆಯಲ್ಲೂ ಅಷ್ಟೇ, ಕಾಂಗ್ರೆಸ್‌ ಧರ್ಮದ ಹೆಸರಲ್ಲಿ ಮತ ವಿಭಜನೆ ಮಾಡಿದ್ದರಿಂದ ಬಿಜೆಪಿಗೆ ಲಾಭವಾಯಿತು. ರಾಜ್ಯದಲ್ಲಿ ಯಾವ ಪಕ್ಷಕ್ಕೂ ಸದ್ಯ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ಶಕ್ತಿ ಇಲ್ಲ’ ಎಂದರು.

‘ವಿರೋಧ ಪಕ್ಷಗಳು ಚುನಾವಣಾ ಪ್ರಚಾರವನ್ನು ಭಯದಲ್ಲೇ ನಡೆಸಬೇಕಾದಂತಹ ಪರಿಸ್ಥಿತಿಯನ್ನು ತಂದೊಡ್ಡಿದ್ದರು. ದೇಶದ ವಾಸ್ತವಾಂಶವನ್ನು ಜನರ ಮುಂದೆ ಇಡುವುದಕ್ಕೆ ಭಯಪಡುವ ಸ್ಥಿತಿ ಇತ್ತು. ಪ್ರಧಾನಿ ಅವರಂತೂ ಕಾಶ್ಮೀರ ವಿಷಯವನ್ನಷ್ಟೇ ಪ್ರಸ್ತಾಪಿಸುತ್ತ ಸ್ಥಳೀಯ ನೆರೆ ಹಾವಳಿಯಂತಹ ಸಮಸ್ಯೆಗಳಿಗೆ ಕಿವಿ ಕೊಡಲೇ ಇಲ್ಲ. ಇದೆಲ್ಲದರ ಫಲವಾಗಿ ಈ ಫಲಿತಾಂಶ ಬಂದಿದೆ. ಪ್ರಾದೇಶಿಕ ಪಕ್ಷಗಳನ್ನು ಮತ್ತು ವಿರೋಧ ಪಕ್ಷಗಳನ್ನು ಲಘುವಾಗಿ ಕಾಣುವಂತಿಲ್ಲ ಎಂಬುದನ್ನು ಫಲಿತಾಂಶ ತೋರಿಸಿಕೊಟ್ಟಿದೆ’ ಎಂದು ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌. ಡಿ. ಕುಮಾರಸ್ವಾಮಿ, ‘ಯಾರ ಸಹವಾಸದಿಂದ ಯಾರು ಕೆಟ್ಟರು? ಯಾರು ಯಾರಿಗೆ ಕೇಡು ಬಗೆದರು ಎಂಬುದನ್ನು ಆತ್ಮವಂಚನೆ ಇಲ್ಲದೆ ಹೇಳುವಿರಾ?’ ಎಂದು ಪ್ರಶ್ನಿಸಿದ್ದಾರೆ.