ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಜನಪರ ಯೋಜನೆಗಳನ್ನು ಬಿಜೆಪಿ ಸರ್ಕಾರ ರದ್ದು ಮಾಡುವ ದುರಾಲೋಚನೆ ಮಾಡಿದರೆ ಹೋರಾಟದ ಮೂಲಕ ಉತ್ತರ ನೀಡಬೇಕಾಗುತ್ತದೆ : ಸಿದ್ದರಾಮಯ್ಯ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು : ಕಾಂಗ್ರೆಸ್ ಸರ್ಕಾರದಲ್ಲಿ ಜಾರಿಗೆ ತಂದಿದ್ದ ಜನಪರ ಯೋಜನೆಗಳನ್ನು ಬಿಜೆಪಿ ಸರ್ಕಾರ ರದ್ದು ಮಾಡುವ ದುರಾಲೋಚನೆ ಮಾಡಿದರೆ ಬಡಜನತೆ ದಂಗೆ ಏಳುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನಮ್ಮ ಸರ್ಕಾರ ಜಾರಿಗೆ ತಂದಿದ್ದ ಜನಪರ ಯೋಜನೆಗಳನ್ನು ಈಗಿನ ಸರ್ಕಾರ ರದ್ದುಪಡಿಸುವ, ನಿರ್ಲಕ್ಷಿಸುವ ದುರಾಲೋಚನೆ ಮಾಡಿದರೆ ರಾಜ್ಯದ ಬಡ ಜನತೆ ದಂಗೆ ಏಳಬಹುದು, ಎಚ್ಚರ ಇರಲಿ, ಇಂತಹ ಜನವಿರೋಧಿ ನಿಲುವುಗಳನ್ನು ನಾವು ಸಹಿಸಿಕೊಳ್ಳುವವರಲ್ಲ, ಹೋರಾಟದ ಮೂಲಕ ಉತ್ತರ ನೀಡಬೇಕಾಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ 6 ತಿಂಗಳಿನಿಂದ ರಾಜ್ಯ ಸರ್ಕಾರ ಸತತ ಬರ ಹಾಗೂ ನೆರೆಯಿಂದ ತತ್ತರಿಸಿದೆ. ಹೀಗಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಿಗಳ ಬಳಿ ಸಲಹೆಗಳನ್ನು ಕೇಳಿದ್ದರು. ಈ ಕುರಿತು ಸಲಹೆ ನೀಡಿರುವ ಅಧಿಕಾರಿಗಳು ಮುಖ್ಯಮಂತ್ರಿಯ ಎದುರು ಪಡಿತರ ಅಕ್ಕಿಯಲ್ಲಿ 2 ಕೆ.ಜಿ ಕಡಿತಗೊಳಿಸುವ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ.

ಕಾಂಗ್ರೆಸ್ ಕಾಲದಲ್ಲಿ ಜಾರಿಯಾದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ರದ್ದು ಮಾಡಿದರೆ ಕಾಂಗ್ರೆಸ್ ನಾಯಕರು ರಸ್ತೆಗಿಳಿದು ಹೋರಾಟ ಮಾಡುವುದಾಗಿ ಈ ಹಿಂದೆಯೇ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಆದರೆ, ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಟ್ವೀಟ್ ಮೂಲಕ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.